ವಿದ್ಯಾರ್ಥಿಗಳು ಕೌಶಲ್ಯ ಸಂಪಾದನೆಗೆ ಆದ್ಯತೆ ನೀಡಲಿ

KannadaprabhaNewsNetwork | Published : Jun 27, 2025 12:49 AM

ಪ್ರಮಾಣಪತ್ರಕ್ಕಿಂತಲೂ ಕೌಶಲ್ಯ ಸಂಪಾದನೆಗೆ ಕಲಾ ವಿದ್ಯಾರ್ಥಿಗಳು ಹೆಚ್ಚಿನ ಆದ್ಯತೆ ನೀಡಬೇಕು ಎಂದು ವಿ.ವಿ. ದೃಶ್ಯಕಲಾ ಮಹಾವಿದ್ಯಾಲಯದ ನಿವೃತ್ತ ಸಂಯೋಜನಾಧಿಕಾರಿ ಎಲ್.ಕೆ. ಹನುಮಂತಾಚಾರಿ ಹೇಳಿದ್ದಾರೆ.

- ಎಲ್.ಕೆ.ಹನುಮಂತಾಚಾರಿ ಸಲಹೆ । ಪ್ರಶಸ್ತಿ ವಿತರಣೆ- ವಿದ್ಯಾರ್ಥಿ ಸಂಘ ಸಮಾರೋಪ - - -

ಕನ್ನಡಪ್ರಭ ವಾರ್ತೆ ದಾವಣಗೆರೆ ಪ್ರಮಾಣಪತ್ರಕ್ಕಿಂತಲೂ ಕೌಶಲ್ಯ ಸಂಪಾದನೆಗೆ ಕಲಾ ವಿದ್ಯಾರ್ಥಿಗಳು ಹೆಚ್ಚಿನ ಆದ್ಯತೆ ನೀಡಬೇಕು ಎಂದು ವಿ.ವಿ. ದೃಶ್ಯಕಲಾ ಮಹಾವಿದ್ಯಾಲಯದ ನಿವೃತ್ತ ಸಂಯೋಜನಾಧಿಕಾರಿ ಎಲ್.ಕೆ. ಹನುಮಂತಾಚಾರಿ ಹೇಳಿದರು.

ನಗರದ ವಿಶ್ವವಿದ್ಯಾಲಯದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಗುರುವಾರ 2024ನೇ ಸಾಲಿನ ಪ್ರಶಸ್ತಿ ವಿತರಣೆ ಹಾಗೂ ವಿದ್ಯಾರ್ಥಿ ಸಂಘ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಕೇವಲ ಅಂಕಪಟ್ಟಿ, ಪ್ರಮಾಣ ಪತ್ರ ಪಡೆಯುವ ಸಲುವಾಗಿ ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಬಾರದು. ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಹತೆಗಿಂತಲೂ ಕೌಶಲ್ಯವೇ ಮುಖ್ಯವಾಗಿದೆ. ಆದ್ದರಿಂದ ಕಲಾ ವಿದ್ಯಾರ್ಥಿಗಳು ಕಷ್ಟಪಟ್ಟು, ಶ್ರದ್ಧೆಯಿಂದ ಅಭ್ಯಾಸ ಮಾಡಬೇಕು ಎಂದರು.

ಅಂದಿನ ಕಾಲಘಟ್ಟಕ್ಕೂ, ಇಂದಿನ ಕಾಲಘಟ್ಟಕ್ಕೂ ವ್ಯತ್ಯಾಸವಿರುವುದು ಸಹಜ. ಈ ಕಾಲೇಜಿನೊಂದಿಗೆ ಇಂದಿಗೂ ಒಡನಾಟ ಹೊಂದಿರುವುದು ನನಗೆ ಖುಷಿ, ತೃಪ್ತಿ ತಂದಿದೆ. ಈ ಕಾಲೇಜಿನಲ್ಲಿ ಓದಿದ ಅದೆಷ್ಟೋ ವಿದ್ಯಾರ್ಥಿಗಳು ದೇಶ, ವಿದೇಶಗಳಲ್ಲಿ ಸಾಧನೆ ಮಾಡುತ್ತಾ, ಕಾಲೇಜಿಗೆ, ದಾವಣಗೆರೆಗೆ ಕೀರ್ತಿ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ದಾವಣಗೆರೆ ವಿವಿ ಹಣಕಾಸು ಅಧಿಕಾರಿ ದ್ಯಾಮನಗೌಡ ಮುದ್ದನಗೌಡ ಮಾತನಾಡಿ, ಕಲೆ ಎಂಬುದು ಪ್ರಾಚೀನವಾದುದು. ನಾಗರೀಕತೆಯ ವಿಕಾಸದೊಂದಿಗೆ ಕಲೆಯೂ ಬೆಳೆಯುತ್ತಿದೆ. ಪ್ರಾಚೀನ ಗುಹೆ, ಅವಶೇಷಗಳಲ್ಲೂ ಕಲಾ ಕೆತ್ತನೆಗಳನ್ನು ಕಾಣಬಹುದು. ಕಲಾಕೃತಿಗಳು ಎಂದೆಂದಿಗೂ ಶಾಶ್ವತವಾಗಿ ಇರುತ್ತವೆ. ಈ ಹಿನ್ನೆಲೆ ದೃಶ್ಯಕಲಾ ಮಹಾ ವಿದ್ಯಾಲಯು ದಾವಣಗೆರೆ ವಿ.ವಿ.ಯ ಹಮ್ಮೆಯಾಗಿದೆ ಎಂದರು.

ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಸಾಕಷ್ಟು ಸೌಲಭ್ಯಗಳು, ಹಲವಾರು ಅವಕಾಶಗಳೂ ಇವೆ. ಹೊಸ ಕೋರ್ಸ್‌ಗಳ ಸೇರ್ಪಡೆಯಾಗಿವೆ. ಕಾಲಕ್ಕೆ ತಕ್ಕಂತೆ ಕಾಲೇಜು ಸಹ ನವನಾವೀನ್ಯತೆ ಮೈಗೂಡಿಸಿಕೊಳ್ಳುತ್ತಿದೆ. ಇಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಉನ್ನತ ಸಾಧನೆ ಮೆರೆಯಬೇಕು

ಕಾಲೇಜು ಪ್ರಾಚಾರ್ಯ ಡಾ.ಜೈರಾಜ ಎಂ. ಚಿಕ್ಕಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕ ಡಾ.ಸತೀಶ ಕುಮಾರ ಪಿ. ವಲ್ಲೇಪುರೆ, ವಿದ್ಯಾರ್ಥಿ ಸಂಘದ ಟಿ.ವಿ.ದರ್ಶನ್, ಬೋಧಕ- ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

2024-25ನೇ ಸಾಲಿನ ಕ್ಯಾಟಲಾಗ್ ಬಿಡುಗಡೆ ಮಾಡಲಾಯಿತು. ಇದೇ ವೇಳೆ ಈಚೆಗೆ ಮುಕ್ತಾಯವಾದ ಕಾಲೇಜಿನ ವಜ್ರ ಮಹೋತ್ಸವ ಯಶಸ್ಸಿಗೆ ಶ್ರಮಿಸಿದವರು ಹಾಗೂ ವಾರ್ಷಿಕ ಚಿತ್ರೋತ್ಸವ ನಿಮಿತ್ತ ನಡೆದ ಚಟುವಟಿಕೆಗಳ ವಿಜೇತರಿಗೆ ಪ್ರಶಸ್ತಿ, ಪ್ರಶಂಸಾ ಪತ್ರ ವಿತರಿಸಲಾಯಿತು.

- - -

(ಕೋಟ್‌)ದೃಶ್ಯಕಲಾ ಮಹಾವಿದ್ಯಾಲಯದಲ್ಲೇ ವಿದ್ಯಾರ್ಥಿಯಾಗಿ ಓದಿ, ಬೋಧಕ, ವಿಭಾಗ ಮುಖ್ಯಸ್ಥ, ಸಂಯೋಜನಾಧಿಕಾರಿ ಹೀಗೆ ಎಲ್ಲ ಹಂತಗಳ ಜವಾಬ್ದಾರಿ ನಿರ್ವಹಿಸಿದ್ದೇನೆ. ನನ್ನ ಜೀವನದ ಬಹಳಷ್ಟು ಅವಧಿಯನ್ನು ಇದೇ ಕಾಲೇಜು, ಕ್ಯಾಂಪಸ್‌ನಲ್ಲೇ ಕಳೆದಿದ್ದೇನೆ. ಬದುಕಿನ ಪ್ರತಿಯೊಂದು ಘಟ್ಟವನ್ನು ಇದೇ ಕಾಲೇಜು ಕ್ಯಾಂಪಸ್‌ನಲ್ಲೇ ಅನುಭವಿಸಿದ್ದೇನೆ.

- ಎಲ್‌.ಕೆ. ಹನುಮಂತಾಚಾರಿ, ನಿವೃತ್ತ ಸಂಯೋಜನಾಧಿಕಾರಿ

- - -

-26ಕೆಡಿವಿಜಿ15.ಜೆಪಿಜಿ:

ದಾವಣಗೆರೆ ದೃಶ್ಯಕಲಾ ಮಹಾ ವಿದ್ಯಾಲಯದಲ್ಲಿ ಗುರುವಾರ 2024ನೇ ಸಾಲಿನ ಪ್ರಶಸ್ತಿ ವಿತರಣೆ ಹಾಗೂ ವಿದ್ಯಾರ್ಥಿ ಸಂಘದ ಸಮಾರೋಪದಲ್ಲಿ ಎಲ್.ಕೆ. ಹನುಮಂತಾಚಾರಿ, ದ್ಯಾಮನಗೌಡ ಮುದ್ದನಗೌಡ್ರ, ಡಾ.ಜೈರಾಜ ಎಂ. ಚಿಕ್ಕಪಾಟೀಲ ಇತರರು.