ವಿದ್ಯಾರ್ಥಿಗಳು ಮೊಬೈಲ್ ತೊರೆದು ಪುಸ್ತಕ ಹಿಡಿಯಿರಿ: ನಗರಸಬೆ ಸದಸ್ಯೆ ಅಣ್ಣಮ್ಮ

KannadaprabhaNewsNetwork | Published : Jun 22, 2025 11:48 PM

ಜಿಲ್ಲಾ ಮಟ್ಟದಲ್ಲಿ ಬಹುಮಾನಕ್ಕೆ ಆಯ್ಕೆಯಾಗಿದ್ದ ಲಹರಿ, ಪ್ರೇರಿತಾ ಮತ್ತು ಜಿ.ಆರ್. ಲಕ್ಷ್ಮೀ ರವರಿಗೆ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ನಗದು ರೂಪದಲ್ಲಿ ನೀಡಲಾಯಿತು. ವಿಜ್ಞಾನ ರಸ ಪ್ರಶ್ನೆ ಸ್ಪರ್ಧೆಗೆ ನೋಂದಾಯಿಸಿ ಶಾಲಾ ಮಟ್ಟದಲ್ಲಿ ಹೆಚ್ಚು ಅಂಕಗಳನ್ನು ಪಡೆದ ಎಲ್ಲಾ ಶಾಲೆಗಳ ತಲಾ ಒಬ್ಬ ವಿದ್ಯಾರ್ಥಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಫೆಬ್ರವರಿ 2025ರಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಆನ್ಲೈನ್ ರಸಪ್ರಶ್ನೆ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಹೆಚ್ಚು ಅಂಕಗಳನ್ನು ಗಳಿಸಿ ಬಹುಮಾನಕ್ಕೆ ಆಯ್ಕೆಯಾಗಿದ್ದ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭವನ್ನು ನಗರದ ನಂದಿ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಲಾಗಿತ್ತು.

ಪ್ರೌಢಶಾಲೆ ಶಿಕ್ಷಕ ವೆಂಕಟರಮಣ ನಾಯಕ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನ ಮತ್ತು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವ ಸಲುವಾಗಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ರಾಜ್ಯ ಮಟ್ಟದಲ್ಲಿ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಿ ಪ್ರೇರಣೆ ನೀಡುತ್ತಿದೆ ಎಂದು ತಿಳಿಸಿದರು.

ನಗರಸಭಾ ಸದಸ್ಯೆ ಅಣ್ಣಮ್ಮ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಬಗ್ಗೆ ಗಮನ ಕಡಿಮೆ ಮಾಡಿ ಜ್ಞಾನವಂತರಾಗಲು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತಾಲೂಕು ಕೆಜೆವಿಎಸ್ ಅಧ್ಯಕ್ಷೆ ಸುಶೀಲಾ ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪಠ್ಯ ಪೂರಕ ಹಾಗೂ ಸಾಮಾನ್ಯ ಜ್ಞಾನ ವೃದ್ಧಿಸುವ ಸಲುವಾಗಿ ಕೆಜೆವಿಎಸ್ ರಾಜ್ಯ ಮಟ್ಟದಲ್ಲಿ ಪ್ರತಿ ವರ್ಷ ಸಮಾಜ ವಿಜ್ಞಾನ ಮತ್ತು ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಪರೀಕ್ಷೆಗಳನ್ನು ನಡೆಸಿ, ವಿವಿಧ ಹಂತಗಳಲ್ಲಿ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ರೈತ ಮುಖಂಡ ಮುನಿಕೃಷ್ಣಪ್ಪ ಮಾತನಾಡಿ, ಕೆಜೆವಿಎಸ್ ಕರ್ನಾಟಕ ರಾಜ್ಯದಲ್ಲಿ ವಿವಿಧ ವಿಜ್ಞಾನ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು, ಜನರಲ್ಲಿರುವ ಅಂಧಾನುಕರಣೆ ಹಾಗೂ ಮೂಢನಂಬಿಕೆಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದೆಯೆಂದರು.

ಶಿಕ್ಷಕ ಆನಂದ್ ಮಾತನಾಡಿ, ಈ ಸಂಘಟನೆಯು ಆರಂಭದಿಂದಲೂ ಜ್ಞಾನ ವಿಜ್ಞಾನ ಚಳವಳಿಗಳನ್ನು ಹುಟ್ಟು ಹಾಕಿ ಜನರಲ್ಲಿ ವೈಜ್ಞಾನಿಕ ಮನೋಭಾವದ ಚಿಂತನೆಗಳನ್ನು ಬೆಳೆಸಲು ಮುಂದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆಜೆವಿಎಸ್ ಜಿಲ್ಲಾ ಅಧ್ಯಕ್ಷ ಕೆ.ಎಂ.ರೆಡ್ಡಪ್ಪ ಮಾತನಾಡಿ, ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಮಹತ್ವದ ಬಗ್ಗೆ ತಿಳಿಸುತ್ತಾ, ನೊಬೆಲ್ ಪ್ರಶಸ್ತಿಗೆ ಭಾಜನರಾದ ಏಷ್ಯಾ ಖಂಡದ ಮೊದಲ ಭೌತ ವಿಜ್ಞಾನಿ ಚಂದ್ರ ಶೇಖರ್ ವೆಂಕಟರಾಮನ್ ರವರು ಬೆಳಕಿನ ಚದುರುವಿಕೆಗೆ ಕಾರಣವನ್ನು 1928 ಫೆಬ್ರವರಿ 28 ರಂದು ಪ್ರತಿಪಾದಿಸಿದರು .ಅದಕ್ಕೆ ರಾಮನ್ ಪರಿಣಾಮ ಎಂದು ಕರೆಯಲಾಯಿತು . ಅಂದಿನಿಂದ ಭಾರತದಲ್ಲಿ ಪ್ರತಿವರ್ಷ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಗುತ್ತಿದೆ ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.

ಜಿಲ್ಲಾ ಮಟ್ಟದಲ್ಲಿ ಬಹುಮಾನಕ್ಕೆ ಆಯ್ಕೆಯಾಗಿದ್ದ ಲಹರಿ, ಪ್ರೇರಿತಾ ಮತ್ತು ಜಿ.ಆರ್. ಲಕ್ಷ್ಮೀ ರವರಿಗೆ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ನಗದು ರೂಪದಲ್ಲಿ ನೀಡಲಾಯಿತು. ವಿಜ್ಞಾನ ರಸ ಪ್ರಶ್ನೆ ಸ್ಪರ್ಧೆಗೆ ನೋಂದಾಯಿಸಿ ಶಾಲಾ ಮಟ್ಟದಲ್ಲಿ ಹೆಚ್ಚು ಅಂಕಗಳನ್ನು ಪಡೆದ ಎಲ್ಲಾ ಶಾಲೆಗಳ ತಲಾ ಒಬ್ಬ ವಿದ್ಯಾರ್ಥಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಶಾಲಾ ಸಂಯೋಜಕ ಶಿಕ್ಷಕರನ್ನು ಸನ್ಮಾನಿಸಲಾಯಿತು .

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಕೆ.ಎ. ಶಾಮಣ್ಣ, ಎ.ಆರ್.ಶಶಿಕಲಾ, ಎಂ. ವಿ.ಶ್ರೀನಿವಾಸ್, ಚಿಕ್ಕ ರೆಡ್ಡಪ್ಪ, ಬಿ.ಎಂ.ಪ್ರಮೀಳ, ಗಾಯಿತ್ರಿ, ನಟರಾಜ್,ವಿವಿಧ ಶಾಲೆಗಳ ಶಿಕ್ಷಕರು, ಪೋಷಕರು ಇದ್ದರು.