ಕನ್ನಡಪ್ರಭ ವಾರ್ತೆ ತುಮಕೂರು
ಶಿಕ್ಷಣದ ಜೊತೆಗೆ ಉದ್ಯೋಗ ಖಾತ್ರಿಯೂ ಇರುವ ಜಿಟಿಟಿಸಿ ನೀಡುತ್ತಿರುವ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ ಗಳಿಗೆ ಗ್ರಾಮೀಣ ಯುವ ಜನರು ಸೇರ್ಪಡೆಗೊಳ್ಳುವ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲ ಗೊಳಿಸಿಕೊಳ್ಳುವಂತೆ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕೌಶಲ್ಯಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದ್ದಾರೆ.ತುಮಕೂರು ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಇರುವ ಸರ್ಕಾರಿ ಟೂಲ್ಸ್ ಆ್ಯಂಡ್ ಟ್ರೈನಿಂಗ್ ಸೆಂಟರ್ನಲ್ಲಿ ವಿದ್ಯಾರ್ಥಿಗಳೊಂದಿಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಸ್.ಎಸ್.ಎಲ್.ಸಿ ಪಾಸಾದ ವಿದ್ಯಾರ್ಥಿಗಳು ಜಿಟಿಟಿಸಿ ಕೋರ್ಸುಗಳನ್ನು ಆಯ್ಕೆ ಮಾಡಿಕೊಂಡರೆ ಶೇ 100 ರಷ್ಟು ಉದ್ಯೋಗ ಪಡೆಯಬಹುದು.ಇದು ಹೆಮ್ಮೆಯ ವಿಚಾರ ಎಂದರು.
ಜಿಟಿಟಿಸಿ ಸರಕಾರದ ತಾಂತ್ರಿಕ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆಯ ಅಡಿಯಲ್ಲಿ ನಡೆಯುತ್ತಿದ್ದು, ಆರು ತಿಂಗಳಿನಿಂದ ನಾಲ್ಕುವರೆ ವರ್ಷಗಳ ಕೋರ್ಸುಗಳಿವೆ. ಇಲ್ಲಿನ ಕೋರ್ಸುಗಳಿಗೆ ಹೊರ ರಾಜ್ಯದ, ಹೊರ ಜಿಲ್ಲೆಯ ವಿದ್ಯಾರ್ಥಿಗಳು ಬಂದು ಪ್ರವೇಶ ಪಡೆಯುತ್ತಿದ್ದಾರೆ. ಆದರೆ ತುಮಕೂರಿನ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಹಾಗಾಗಿ ಸ್ಥಳೀಯ ವಿದ್ಯಾರ್ಥಿಗಳು ಇದರ ಸೌಲಭ್ಯ ಪಡೆದುಕೊಳ್ಳಬೇಕು. ಎಸ್.ಎಸ್.ಎಲ್,ಸಿ, ಪಿಯುಸಿ, ಪದವಿ ಪಡೆದ ಮಕ್ಕಳಿಗೆ ಇಲ್ಲಿ ವಿವಿಧ ಕೋರ್ಸುಗಳಿದ್ದು, ಇಲ್ಲಿ ಕಲಿತವರಿಗೆ ಭಾರತದಲ್ಲಿಯೇ ಅಲ್ಲ, ವಿದೇಶಗಳಲ್ಲಿಯೂ ಒಳ್ಳೆಯ ಬೆಲೆ ಇದೆ ಎಂದು ಮುರಳೀಧರ ಹಾಲಪ್ಪ ನುಡಿದರು.ಜಿಟಿಟಿಸಿ ಪ್ರಾಂಶುಪಾಲ ಜಯಪ್ರಕಾಶ್.ಜೆ.ಕೆ. ಮಾತನಾಡಿ, ಯುವ ಪೀಳಿಗೆಗೆ ಇಂದು ಬೇಕಾಗಿರುವುದು ಕೇವಲ ಪದವಿ ಸರ್ಟಿಪಿಕೇಟ್ ಅಲ್ಲ, ಬದಲಿಗೆ ಉದ್ಯೋಗ. ಹಾಗಾಗಿ ಶಿಕ್ಷಣದ ಜೊತೆಗೆ ಉದ್ಯೋಗವನ್ನು ದೊರಕಿಸಿಕೊಡುವ ಇಂತಹ ಕೋರ್ಸುಗಳನ್ನು ಯುವಜನತೆ ಆಯ್ಕೆ ಮಾಡಿಕೊಂಡರೆ ಶೇ100 ರಷ್ಟು ಉದ್ಯೋಗ ಪಡೆಯಬಹುದು. ನಮ್ಮಲ್ಲಿ ಸೇರ್ಪಡೆಯಾಗುವ ವಿದ್ಯಾರ್ಥಿಗಳಲ್ಲಿ ಕ್ಯಾಟಗರಿಯೇ ಮೇಲೆ ಯಾವುದೇ ಶುಲ್ಕ ಇಲ್ಲ. ಬದಲಿಗೆ, ಇಂಡಸ್ತ್ರಿಯಲ್ ತರಬೇತಿಗೆ ಹೋದಂತಹ ಸಂದರ್ಭದಲ್ಲಿ ಅಲ್ಲಿ ದೊರೆಯುವ ಶಿಷ್ಯವೇತನದಿಂದಲೇ ನಾಲ್ಕು ವರ್ಷಗಳ ಕಾಲ ಕಟ್ಟಿರುವ ಶುಲ್ಕವನ್ನು ವೇತನದ ರೂಪದಲ್ಲಿ ಪಡೆಯುಬಹುದು. ಒಂದು ರೀತಿಯಲ್ಲಿ ಶೂನ್ಯದಲ್ಲಿ ಡಿಪ್ಲೊಮಾ ವಿದ್ಯಾಭ್ಯಾಸ ಮಾಡಿದಂತಾಗುತ್ತದೆ. ಕರ್ನಾಟಕದ 33 ಕಡೆಗಳಲ್ಲಿ ಜಿಟಿಟಿಸಿ ಟ್ರೆೈನಿಂಗ್ ಸೆಂಟರ್ ಇದ್ದು,ಹೊಸ ಹೊಸ ಕೋರ್ಸುಗಳನ್ನು ಅಳವಡಿಸಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರು ತಮ್ಮ ಹತ್ತಿರದ ಜಿಟಿಟಿಸಿ ಸೆಂಟರ್ಗೆ ಭೇಟಿ ನೀಡಿ ಖುದ್ದು ಪರಿಶೀಲಿಸುವ ಮೂಲಕ ತಮಗಿರುವ ಸೌಲಭ್ಯಗಳನ್ನು ಬಳಕೆ ಮಾಡಿಕೊಳ್ಳಬಹುದು ಎಂದರು.
ವೇದಿಕೆಯಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ಅಂಜನಮೂರ್ತಿ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ಕಿಶೋರ್ ಕುಮಾರ್,ಸಿಡಾಕ್ ಜಂಟಿ ನಿರ್ದೇಶಕರಾದ ಶೋಭಾಶ್ರೀ ಮತ್ತಿತರರು ಉಪಸ್ಥಿತರಿದ್ದರು.