ಹಿರೇಕೆರೂರು: ಇಂದಿನ ತಂತ್ರಜ್ಞಾನ ಯುಗದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗವು ವೈವಿಧ್ಯಮಯ ಜ್ಞಾನವನ್ನು ಪ್ರಸಾರ ಮಾಡುವಲ್ಲಿ ತನ್ನ ಛಾಪು ಮೂಡಿಸಿದೆ ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲ ಹೇಳಿದರು.
ಸಂಸ್ಥೆಯ ವಿದ್ಯಾರ್ಥಿಗಳು ತಮ್ಮ ಜ್ಞಾನ ಕ್ಷಿತಿಜ ವಿಸ್ತರಿಸಿಕೊಳ್ಳಲು ಕಠಿಣ ತಪಸ್ಸು ಮಾಡಬೇಕು. ಅದರೊಂದಿಗೆ ಅದಮ್ಯ ಇಚ್ಛಾಶಕ್ತಿಯನ್ನು ಮೈಗೂಡಿಸಿಕೊಂಡು ಜ್ಞಾನವನ್ನು ಪಡೆದುಕೊಂಡಾಗ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯವೆಂದರು.
ಸಮಾರಂಭದಲ್ಲಿ ವ್ಯಕ್ತಿತ್ವ ವಿಕಸನ ಮತ್ತು ಉದ್ಯೋಗ ಅವಕಾಶಗಳು ಕುರಿತು ವಿಶೇಷ ಉಪನ್ಯಾಸ ನೀಡಿದ ಡಾ. ಪಂಚಾಕ್ಷರಯ್ಯ ಹಿರೇಮಠ ಮಾತನಾಡಿ, ಜ್ಞಾನವೆಂಬುದು ಸರಳ ಸುಲಭ ಮಾರ್ಗದಿಂದ ದೊರೆಯಲಾರದು. ಇಂತಹ ಉಪನ್ಯಾಸಗಳು ಆದರ್ಶ ವ್ಯಕ್ತಿಗಳ ಜೀವನ ಪರಿಚಯವಿದ್ದಾಗ ಮಾತ್ರ ವಿದ್ಯೆಯನ್ನು ಸಂಪಾದಿಸಬಹುದು. ಈ ಪ್ರಪಂಚದ ಅಸಾಮಾನ್ಯ ದಿಗ್ಗಜರೆಲ್ಲರೂ ತಮ್ಮ ಜೀವನದ ವೈಯಕ್ತಿಕ ಆಸೆ-ಆಕಾಂಕ್ಷೆಗಳನ್ನು ಬದಿಗಿಟ್ಟು ನಿಸ್ವಾರ್ಥಪರವಾಗಿ ಚಿಂತನೆ ಮಾಡಿ ಹಲವು ಆವಿಷ್ಕಾರಗಳಿಗೆ ಕಾರಣರಾಗಿದ್ದಾರೆ. ಅಂಥವರ ಬದುಕಿನ ಕಷ್ಟದ ಹೆಜ್ಜೆಗಳ ದರ್ಶನವಾದಾಗಲೇ ನಮ್ಮ ಜೀವನ ಪಾವನವಾಗುವುದರಲ್ಲಿ ಸಂಶಯವಿಲ್ಲ ಎಂದರು.ಸಮಾರಂಭದಲ್ಲಿ ಜಲ ಜಾನಪದ ಕುರಿತು ಉಪನ್ಯಾಸ ನೀಡಿದ ಉಪನ್ಯಾಸಕ ಡಾ. ವಿ.ಎಲ್. ಪಾಟೀಲ್, ಜಲವೆಂಬುದು ಈ ಪ್ರಕೃತಿಯ ಜೀವನಾಡಿ. ಅದಿಲ್ಲದೆ ಈ ಭೂಮಿ ಮೇಲೆ ಯಾವ ಜೀವರಾಶಿಯೂ ಬದುಕಲಾರದು. ಇಂದು ನಾವು ನೀರಿಗಾಗಿ ಯುದ್ಧ ಮಾಡುವ ಪ್ರಸಂಗವೇ ಬಂದೊದಗಿದೆ. ನಾವು ನೀರನ್ನು ಭಕ್ಷಿಸುವ ಕಾರ್ಯ ಬಿಟ್ಟು ರಕ್ಷಿಸುವ ಕಾರ್ಯ ಮಾಡದೇ ಹೋದರೆ ನಮಗೆ ಹಾಗೂ ಪ್ರಕೃತಿಯ ಪ್ರತಿಯೊಂದು ಜೀವಿಗಳಿಗೂ ಉಳಿಗಾಲವಿಲ್ಲವೆಂದರು.