ದೀಕ್ಷಾ ವಿದ್ಯಾ ಮಂದಿರದ ವಾರ್ಷಿಕೋತ್ಸವದಲ್ಲಿ ವಿದ್ಯಾಮಂದಿರ ಅಧ್ಯಕ್ಷ, ಹಿರಿಯ ವಕೀಲ ಕೆ.ಎನ್. ರಾಜಣ್ಣ
ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಹೆಚ್ಚಿನ ಜವಾಬ್ದಾರಿ ಹೊರಬೇಕಿದ್ದು ಪೋಷಕರು ಕೂಡ ಮಕ್ಕಳ ಬೆಳವಣಿಗೆ ಮತ್ತು ಶಿಕ್ಷಣದ ಪ್ರತಿ ಹಂತವನ್ನು ಗಮನ ಹರಿಸಬೇಕು ಎಂದು ದೀಕ್ಷಾ ವಿದ್ಯಾಮಂದಿರ ಅಧ್ಯಕ್ಷ ಹಾಗೂ ಹಿರಿಯ ವಕೀಲ ಕೆ.ಎನ್. ರಾಜಣ್ಣ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ಪ್ರಜ್ಞಾ ಸೆಂಟ್ರಲ್ ಶಾಲೆ ಆವರಣದಲ್ಲಿ ನಡೆದ ದೀಕ್ಷಾ ವಿದ್ಯಾ ಮಂದಿರದ ದೀಕ್ಷಾ ಹಬ್ಬ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸುಮಾರು ಎರಡು ದಶಕಗಳ ಹಿಂದೆ ಡಿ. ಕೃಷ್ಣಮೂರ್ತಿ ಅವರು ಪಟ್ಟಣದಲ್ಲಿ ಸ್ಥಳ ನೀಡುವ ಮೂಲಕ ಆರಂಭಿಸಿದ ಈ ಶಾಲೆ ಇಂದು ಈ ಮಟ್ಟಕ್ಕೆ ಬೆಳೆದ ನಿಂತಿರುವಲ್ಲಿ ಅವರ ಸಹಕಾರ ಸ್ಮರಿಸುತ್ತೇವೆ. ಪೋಷಕರ ಕನಸನ್ನು ನನಸು ಮಾಡಲು ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಭ್ಯಾಸ ಮಾಡಿದಲ್ಲಿ ಯಶಸ್ಸು ಸಾಧಿಸಲು ಸಾದ್ಯ. ಇತ್ತೀಚಿನ ವಿದ್ಯಾಮಾನ ನೋಡಿದರೆ ವಿದ್ಯಾರ್ಥಿಗಳು ಮಾಡಬೇಕಾಗಿರುವ ಕರ್ತವ್ಯಗಳನ್ನು ತಪ್ಪದೆ ಪೂರೈಸಬೇಕು ಎಂದರು.ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ಮೇಲೆ ನಡೆವ ಲೈಂಗಿಕ ದೌರ್ಜನ್ಯಗಳನ್ನು ತಡೆವ ಸದುದ್ದೇಶದಿಂದ ಮಕ್ಕಳ ಭವಿಷ್ಯದ ಸುರಕ್ಷತೆಗಾಗಿ ಪೋಕ್ಸೋ ಕಾಯಿದೆ ಜಾರಿಗೆ ತರಲಾಗಿದೆ. ಮಕ್ಕಳ ಮೇಲೆ ದೌರ್ಜನ್ಯ ನಡೆದಲ್ಲಿ ಈ ಕಾಯಿದೆ ಅಡಿ ಆರೋಪಿಗೆ ಕಠಿಣ ಶಿಕ್ಷೆ ನೀಡಲಾಗುತ್ತದೆ ಈ ಬಗ್ಗೆ ಪೋಷಕರ ಜಾಗೃತರಾಗಿರಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಉಪನ್ಯಾಸಕ ಡಾ.ಆನಂದ್ ಎಸ್,ಕೆ. ಮಾತನಾಡಿ, ಕಲಿಕೆ ಮತ್ತು ಕಲಿಯುವಲ್ಲಿ ಗುರುಗಳಿಗೂ ವಿದ್ಯಾರ್ಥಿಗಳಲ್ಲೂ ಬದ್ಧತೆ ಮತ್ತು ಶ್ರದ್ಧೆ ಬಹುಮುಖ್ಯ. ನಮ್ಮ ಮಕ್ಕಳ ಮೇಲೆ ಭವಿಷ್ಯದ ಕನಸಿನ ಗೋಪುರ ಕಟ್ಟಿರುವ ಪೋಷಕರ ಆಸೆಗೆ ತಕ್ಕಂತೆ ಕಲಿತು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕು ಎಂದರು.
ಶಾಲೆ ಆಡಳಿತ ಮಂಡಳಿ ಕಾರ್ಯದರ್ಶಿ ಎನ್.ಪಿ.ಮಂಜುನಾಥ ಪ್ರಸನ್ನ ಮಾತನಾಡಿ, ವಿದ್ಯಾರ್ಥಿಗಳು, ಕಲಿಸುವ ಗುರುಗಳು ಮತ್ತು ಆಡಳಿತ ಮಂಡಳಿ ಪರಿಶ್ರಮದಿಂದ ಈ ಶಾಲೆ ಈ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕ್ರೀಡೆಗಳಲ್ಲಿ ಹಾಗೂ ಸ್ಪರ್ಧೆಗಳಲ್ಲಿ, ಶಿಕ್ಷಣದಲ್ಲೂ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಪೋಷಕರ ಪರವಾಗಿ ವೈ.ಎಸ್ ರೇವಣ್ಣ, ಶಾಲಾ ಆಡಳಿತ ಮಂಡಳಿ ಪದಾಧಿಕಾರಿಗಳಾದ ಡಿ ಪ್ರಶಾಂತ್, ಡಾ. ಶಿವಕುಮಾರ್, ಮಂಜುನಾಥ ಪ್ರಸನ್ನ, ಕ್ಲಾರಾ ಡಿ. ಮೆಲ್ಲೊ, ಶಾಲೆಯ ಶಿಕ್ಷಕರು, ಪೋಷಕರು,ಮಕ್ಕಳು ಹಾಜರಿದ್ದರು. 7ಕೆಕೆಡಿಯು1ಕಡೂರು ಪಟ್ಟಣದ ದೀಕ್ಷಾ ವಿದ್ಯಾ ಮಂದಿರ ಶಾಲೆಯ ವಾರ್ಷಿಕೋತ್ಸವವನ್ನು ದೀಕ್ಷಾ ಹಬ್ಬವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಲಾಯಿತು.