ಐತಿಹಾಸಿಕ ದೇಗುಲಗಳ ಬಗ್ಗೆ ಅಧ್ಯಯನ ನಡೆಸಿ

KannadaprabhaNewsNetwork | Published : Feb 27, 2025 12:31 AM

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿ ಪ್ರಾಚೀನ ಕಾಲದಿಂದಲೂ ಸಿಂದಗಿಯೂ ತನ್ನದೇ ಆದ ಚಾರಿತ್ರಿಕ ಹಿನ್ನಲೆಯನ್ನು ಹೊಂದಿದೆ. ಸಿಂದಗಿ ಬಹು ಸಂಸ್ಕೃತಿಗಳ ತವರೂರು ಎಂದು ಸಿ.ಎಂ.ಮನಗೂಳಿ ಕಾಲೇಜಿನ ಪ್ರಾಧ್ಯಾಪಕ ಡಾ.ಅವರವಿಂದ ಮನಗೂಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಪ್ರಾಚೀನ ಕಾಲದಿಂದಲೂ ಸಿಂದಗಿಯೂ ತನ್ನದೇ ಆದ ಚಾರಿತ್ರಿಕ ಹಿನ್ನಲೆಯನ್ನು ಹೊಂದಿದೆ. ಸಿಂದಗಿ ಬಹು ಸಂಸ್ಕೃತಿಗಳ ತವರೂರು ಎಂದು ಸಿ.ಎಂ.ಮನಗೂಳಿ ಕಾಲೇಜಿನ ಪ್ರಾಧ್ಯಾಪಕ ಡಾ.ಅವರವಿಂದ ಮನಗೂಳಿ ಹೇಳಿದರು.ಪಟ್ಟಣದ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸ್ಥಳೀಯ ಅವ್ವಾ ಫೌಂಡೇಶನ್ ಹಾಗೂ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಸಹಯೋಗದಲ್ಲಿ ನಡೆದ 1824ರ ಸಿಂದಗಿ ಬಂಡಾಯದ 200ನೇ ವರಷಾಚರಣೆ ಸವಿನೆನಪಿಗಾಗಿ ಸಿಂದಗಿ ಚಾರಿತ್ರಿಕ ಅವಲೋಕನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಿಂದಗಿ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ನಿರ್ಮಾಣಗೊಂಡ ಐತಿಹಾಸಿಕ ದೇವಾಲಯಗಳ ಕುರಿತು ವಿದ್ಯಾರ್ಥಿಗಳು ಅಧ್ಯಯನ ಮಾಡಿ ಅದರ ಸಾಧಕ ಬಾಧಕಗಳ ಕುರಿತು ಚರ್ಚಿಸಬೇಕು. ನಶಿಸಿ ಹೋಗುತ್ತಿರುವ ದೇವಾಲಯಗಳ ಸಂರಕ್ಷಣೆಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿಗಳನ್ನು ಸಲ್ಲಿಸುವಂತೆ ಅವರು ಸಲಹೆ ನೀಡಿದರು.

ಈ ವೇಳೆ ಹುನ್ನುರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ನಿಂಗರಾಜ ಅಸ್ಕಿ ಮಾತನಾಡಿ, ಸಿಂದಗಿ ಸಮ್ಮಿಶ್ರ ಸಂಸ್ಕೃತಿಯ ತವರು ನೆಲೆಯಾಗಿದ್ದು, ಮೌರ್ಯರ ಕಾಲದಿಂದ ಯಾದವರ ಕಾಲದವರೆಗೂ ಸಿಂದಗಿಯನ್ನು ವಿವಿಧ ರಾಜಮನೆತನಗಳು ಆಳಿ ಹೋಗಿವೆ. ಆದರೆ, ರಾಷ್ಟ್ರಕೂಟರು ಕಾಲದ ಕ್ರಿ.ಶ. 862ರ ಹೂವಿನ ಹಿಪ್ಪರಗಿ ಶಾಸನ ವಿಜಯಪುರ ಜಿಲ್ಲೆಯ ಪ್ರಥಮ ಐತಿಹಾಸಿಕ ದಾಖಲೆಗೆ ಆಧಾರವಾಗಿದೆ ಎಂದು ತಿಳಿಸಿದರು.ಸಿಂದಗಿ ತಾಲೂಕಿನ ಒಟ್ಟು 108 ಶಾಸನಗಳಲ್ಲಿ 51 ಶೈವ ಧರ್ಮಕ್ಕೆ ಸಂಬಂಧಪಟ್ಟ ಶಾಸನಗಳಿವೆ. ಸಿಂದಗಿ ನಗರದಲ್ಲಿ ಕೇವಲ ಮೂರು ಶಾಸನಗಳು ಸಿಕ್ಕಿದ್ದು ಈ ಭಾಗದ ಇತಿಹಾಸ. ಪ್ರಾಚೀನ ತರ್ದವಾಡಿ ಸಾವಿರ ಹಾಗೂ ಸಗರನಾಡಿನ ಮಧ್ಯೆ ಇರುವ ಈ ಭಾಗ ಸಿಂದಗಿ 12 ಒಂದು ಆಡಳಿತದ ಭಾಗವಾಗಿತ್ತು. ಈ ಪ್ರದೇಶವನ್ನು ಪ್ರಾಚೀನ ರಾಜಮನೆತನಗಳು, ಬಹುಮನಿ ಸುಲ್ತಾನರು, ವಿಜಯಪುರದ ಆದಿಲ್‌ಶಾಹಿಗಳು, ಮರಾಠ ಪೇಶ್ವೆಗಳು, ಹೈದರಾಬಾದ್ ನಿಜಾಮರು ಹಾಗೂ ಬ್ರಿಟೀಷರು ಆಳಿರುವುದರಿಂದ ಎಲ್ಲಾ ವರ್ಗದ ಸಂಸ್ಕೃತಿಯ ಪ್ರಭಾವ ಈ ನೆಲದ ಮೇಲೆ ಭೀರಿದೆ ಎಂದು ಹೇಳಿದರು.ಈ ಸಂಧರ್ಭದಲ್ಲಿ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಆಶಯ ನುಡಿಗಳನ್ನಾಡಿ, ಗ್ರಾಮ ಚರಿತ್ರೆಯ ಅವಲೋಕನ ಮಾಡುವುದರ ಮೂಲಕ ವಿದ್ಯಾರ್ಥಿಗಳು ಐತಿಹಾಸಿಕ ಪ್ರಜ್ಞೆ ಮೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಇತಿಹಾಸದ ಅವಲೋಕನ ಮಾಡಿಕೊಡುವಲ್ಲಿ ಅವ್ವಾ ಫೌಂಡೇಶನ್ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.ಅಧ್ಯಕ್ಷತೆಯನ್ನು ಪ್ರಾಚಾರ್ಯೆ ಜೆ.ಸಿ.ನಂದಿಕೋಲ, ಶಿಕ್ಷಕ ಸಿದ್ದಲಿಂಗ ಚೌಧರಿ ಮಾತನಾಡಿದರು. ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಅಧ್ಯಯನದಿಂದ ಸಂಸ್ಕೃತಿ ಉಳಿಯುತ್ತದೆ. ಹಿಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆಯಬೇಕು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಡಾ.ರವಿ ಗೋಲಾ, ಡಾ.ಶರಣಬಸವ ಜೋಗೂರ, ದಾನಯ್ಯ ಮಠಪತಿ, ಸುಧಾಕರ ಚವ್ಹಾಣ, ಪಿ.ಸಿ.ಕುಲಕರ್ಣಿ, ಚನ್ನು ಕತ್ತಿ, ಕುಮಾರ ಕತ್ತಿ, ನಾಜೀಯಾ ಮುಲ್ಲಾ ಸೇರಿದಂತೆ ಇತರರು ಇದ್ದರು. ಅವ್ವಾ ಫೌಂಡೇಶನ್ ಸಂಚಾಲಕ ಸಿದ್ದಲಿಂಗ ಕಿಣಗಿ ಸ್ವಾಗತಿಸಿದರು.

Share this article