ಕನ್ನಡಪ್ರಭ ವಾರ್ತೆ ಸೈದಾಪುರ
ಬಾಡಿಯಾಳ ಗ್ರಾಮದ ಪಿಎಂಶ್ರೀ ಸರ್ಕಾರಿ ಶಾಲೆಯಲ್ಲಿ ಕಳೆದ ಒಂದು ವಾರದಿಂದ ವಿದ್ಯಾರ್ಥಿಗಳಿಗೆ ನೀಡಬೇಕಿದ್ದ ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ ಸ್ಥಗಿತಗೊಂಡಿದೆ. ಸರ್ಕಾರ ಮಕ್ಕಳ ಆರೋಗ್ಯಕ್ಕಾಗಿ ಯೋಜನೆ ಜಾರಿಗೊಳಿಸಿದ್ದರೂ, ಅಧಿಕಾರಿಗಳ ನಡುವಿನ ಆಡಳಿತಾತ್ಮಕ ಗೊಂದಲದಿಂದ ಮಕ್ಕಳಿಗೆ ಯೋಜನೆಯ ಪ್ರಯೋಜನ ಸಿಗದಂತಾಗಿದೆ. ಪೌಷ್ಟಿಕ ಆಹಾರ ವಿತರಣೆ ಸ್ಥಗಿತಕ್ಕೆ ನಿಖರ ಕಾರಣವೇನು ಎಂಬುದನ್ನು ಪರಿಶೀಲಿಸಿ, ಮುಖ್ಯಗುರುಗಳಿಗೆ ಅಗತ್ಯ ಅಧಿಕಾರವನ್ನು ಕೂಡಲೇ ಹಸ್ತಾಂತರಿಸುವುದರೊಂದಿಗೆ ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ ತಕ್ಷಣ ಪುನರಾರಂಭಿಸಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.
ಮಕ್ಕಳಿಗೆ ಶಾಲೆಯಲ್ಲಿ ಪೌಷ್ಟಿಕ ಆಹಾರ ಸಿಗುತ್ತದೆ ಎಂಬ ನಂಬಿಕೆಯಿಂದ ಅವರನ್ನು ಕಳುಹಿಸುತ್ತೇವೆ. ಆದರೆ ಒಂದು ವಾರದಿಂದ ಮೊಟ್ಟೆ, ಬಾಳೆಹಣ್ಣು ನೀಡುತ್ತಿಲ್ಲ. ಕಾರಣವನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು. ಮಕ್ಕಳ ವಿಚಾರದಲ್ಲಿ ಆಡಳಿತಾತ್ಮಕ ವಿಳಂಬ ಸಲ್ಲದು ಎಂದು ಪೋಷಕ ಭೀಮು ಗುಡೆಬಲ್ಲೂರು ಆಕ್ರೋಶ ವ್ಯಕ್ತಪಡಿಸಿದರು.----ಬಾಕ್ಸ್ 1----
ಶಾಲೆಗೆ ವರ್ಗಾವಣೆಯಾಗಿ ಬಂದಿರುವ ಮುಖ್ಯಶಿಕ್ಷಕಿ ಯಾಸ್ಮೀನ್ ಅವರು ಕರ್ತವ್ಯಕ್ಕೆ ಹಾಜರಾಗಿ ಸುಮಾರು ಐದು ತಿಂಗಳು ಕಳೆದಿದ್ದರೂ, ಅವರಿಗೆ ಸಂಪೂರ್ಣ ಆಡಳಿತಾತ್ಮಕ ಹಾಗೂ ಹಣಕಾಸಿನ ಅಧಿಕಾರ ಹಸ್ತಾಂತರವಾಗಿಲ್ಲ ಎನ್ನಲಾಗಿದೆ. ಇದರಿಂದ ಶಾಲೆಯ ದೈನಂದಿನ ಆಡಳಿತ ಮತ್ತು ವಿವಿಧ ಸೌಲಭ್ಯಗಳ ನಿರ್ವಹಣೆಯಲ್ಲಿ ತೊಂದರೆ ಉಂಟಾಗಿದೆ ಎಂದು ತಿಳಿದುಬಂದಿದೆ.
ಶಾಲೆಗೆ ಬಂದು ಸುಮಾರು ಐದು ತಿಂಗಳಾಗಿದೆ. ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸುತ್ತಿದ್ದೇನೆ. ಆದರೆ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದ ಸಂಪೂರ್ಣ ಅಧಿಕಾರ ಇನ್ನೂ ಹಸ್ತಾಂತರವಾಗಿಲ್ಲ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಮಕ್ಕಳ ಪೌಷ್ಟಿಕ ಆಹಾರ ವಿತರಣೆಯಲ್ಲಿ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
--------
ಸೈದಾಪುರ ಸಮೀಪದ ಬಾಡಿಯಾಳ ಗ್ರಾಮದ ಪಿಎಂಶ್ರೀ ಸರ್ಕಾರಿ ಶಾಲೆಯ ಹೊರನೋಟ ಚಿತ್ರಣ.