ಸುಗ್ಗನಹಳ್ಳಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಜಾತ್ರೆ

KannadaprabhaNewsNetwork | Published : Mar 14, 2025 1:32 AM

ಸಾರಾಂಶ

ಕುದೂರು: ಇಡೀ ಜಗತ್ತಿನಲ್ಲಿಯೇ ಬಾಂಧವ್ಯ ಬೆಸೆಯುವ ಸಲುವಾಗಿ ರೂಪುಗೊಂಡ ಇಷ್ಟೊಂದು ಹಬ್ ಮತ್ತು ಜಾತ್ರೆಗಳ ವ್ಯವಸ್ಥೆಯನ್ನು ಬಹುಶಃ ಜಗತ್ತಿನಲ್ಲಿ ಎಲ್ಲಿಯೂ ಕಾಣಲಾಗದು. ಇದು ಪ್ರತಿಯೊಬ್ಬ ಭಾರತೀಯನ ಹೆಮ್ಮೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಅಭಿಪ್ರಾಯಪಟ್ಟರು.

ಕುದೂರು: ಇಡೀ ಜಗತ್ತಿನಲ್ಲಿಯೇ ಬಾಂಧವ್ಯ ಬೆಸೆಯುವ ಸಲುವಾಗಿ ರೂಪುಗೊಂಡ ಇಷ್ಟೊಂದು ಹಬ್ ಮತ್ತು ಜಾತ್ರೆಗಳ ವ್ಯವಸ್ಥೆಯನ್ನು ಬಹುಶಃ ಜಗತ್ತಿನಲ್ಲಿ ಎಲ್ಲಿಯೂ ಕಾಣಲಾಗದು. ಇದು ಪ್ರತಿಯೊಬ್ಬ ಭಾರತೀಯನ ಹೆಮ್ಮೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಅಭಿಪ್ರಾಯಪಟ್ಟರು.

ಮಾಗಡಿ ತಾಲೂಕು ಸುಗ್ಗನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿಲೆಗಳಲ್ಲಿ ದೇವರನ್ನು ಕಾಣುವ, ಮಣ್ಣಿನಲ್ಲಿ ತಾಯಿಯ ಮಮತೆಯನ್ನು ಅನುಭವಿಸುವ ನೀರನ್ನು ಗಾಳಿಯನ್ನು ಹೀಗೆ ಪ್ರತಿಯೊಂದರಲ್ಲೂ ದೈವತ್ವದ ಭಾವನೆಯನ್ನಿರಿಸಿಕೊಂಡು ಆರಾಧಿಸುವ ನಮಗೆ ಇವೆಲ್ಲವೂ ಅವ್ಯಕ್ತವಾಗಿ ಧೈರ್ಯ ಮತ್ತು ಭರವಸೆ, ಸಂತೃಪ್ತಿಯನ್ನು ನೀಡುತ್ತವೆ. ನಮ್ಮ ಹಿರಿಯ ತಲೆಮಾರಿನವರಿಗೆ ಅದೆಷ್ಟು ದೂರದೃಷ್ಟಿ ಇತ್ತು ಎಂಬುದನ್ನು ಇಂತಹ ಆಚರಣೆಗಳಿಂದ ತಿಳಿಯಬಹುದಾಗಿದೆ ಎಂದರು.

ಗ್ಯಾರಂಟಿ ಅನುಷ್ಟಾನಗಳ ಸಮಿತಿಯ ಅಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, ಜನಪದರ ಅವಿಷ್ಕಾರ ಎಂದೇ ಹೆಸರಾಗಿದ್ದು ಈ ಜಾತ್ರೆಗಳಿಂದ ಜನರ ಬಾಂಧವ್ಯ ಹೆಚ್ಚಾಗುತ್ತದೆ. ಜಾತ್ರೆಗಳು ನಮ್ಮ ನಾಡಿನ ಸಂಸ್ಕೃತಿಯ ಭಾಗಗಳಾಗಿವೆ ಎಂದರು.

ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿ, ಸುಗ್ಗನಹಳ್ಳಿ ಜಾತ್ರೆ ಎಂದರೆ ಅದು ಸುತ್ತಲಿನ ಹದಿನಾರು ಹಳ್ಳಿಗಳ ಸಂಭ್ರಮ ಮಾತ್ರವಲ್ಲ. ಇಲ್ಲಿ ನಡೆಯುವ ದನಗಳ ಜಾತ್ರೆ ಪಕ್ಕದ ಮೂರು ರಾಜ್ಯಗಳ ರೈತರು ತಮ್ಮ ರಾಸುಗಳನ್ನು ಮಾರಾಟ ಮಾಡಲು ರೈತರು ಇಲ್ಲಿಗೆ ಬರುವುದು ಇತಿಹಾಸ ಎಂದರು.ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕಿದ ಬಾಲಕೃಷ್ಣ: ಮಾಗಡಿ ತಾಲೂಕು ಸುಗ್ಗನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಶಾಸಕ ಎಚ್.ಸಿ.ಬಾಲಕೃಷ್ಣ ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕಿದರು.

ಜಾತ್ರೆಯ ಹತ್ತಾರು ಕಡೆಗಳಲ್ಲಿ ಅನ್ನದಾಸೋಹ, ಮಜ್ಜಿಗೆ, ಪಾನಕ, ಹೆಸರುಬೇಳೆ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಹೊನ್ನಾಪುರ ಶಿವಪ್ರಸಾದ್, ಬಮೂಲ್ ರಾಜಣ್ಣ, ರಂಗಶಾಮಯ್ಯ, ಮಮತ, ದೇವೇಂದ್ರಕುಮಾರ್, ಭವ್ಯ ಸಿಂಗ್ರಿಗೌಡ ಮತ್ತಿತರರು ಭಾಗವಹಿಸಿದ್ದರು.

ಬಾಕ್ಸ್‌..............

ಬಿಜೆಪಿ ಸಾವಯವ ಕೃಷಿ ಹೆಸರಿನಲ್ಲಿ ಹಣ ಕೊಟ್ಟಿದ್ದನ್ನು ನೆನೆಯಲಿ: ಬಾಲಕೃಷ್ಣ

ಕುದೂರು: ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಗಳ ವಿರುದ್ಧ ತಕರಾರು ಎತ್ತಿರುವ ಬಿಜೆಪಿ ನಾಯಕರು, ಅವರ ಸರ್ಕಾರದಲ್ಲಿ ಸಾವಯವ ಕೃಷಿಗೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರಿಗೆ ಹಣ ಕೊಟ್ಟಿದ್ದನ್ನು ನೆನಪಿಸಿಕೊಳ್ಳಲಿ ಎಂದು ಶಾಸಕ ಬಾಲಕೃಷ್ಣ ಪ್ರತಿಕ್ರಿಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಸಮಿತಿ ಅಧ್ಯಕ್ಷರಿಂದ ಹಕ್ಕುಚ್ಯುತಿ ಮೊಟಕು ಎಂದು ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಹೇಳಿರುವುದಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಬೇಡ. ಈಗ ನಮ್ಮ ಸರ್ಕಾರ ಅಧಿಕಾರಕ್ಕೆ ತರುವಲ್ಲಿ ಕಾರ್ಯಕರ್ತರು ಶ್ರಮಿಸಿದ್ದಾರೆ. ಅವರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಕೇಂದ್ರದಲ್ಲೂ ಇಂತಹ ಬೆಳವಣಿಗೆಗಳು ಆಗಿರುವುದರಿಂದ ಇದೇನು ವಿಶೇಷ ಪ್ರಕರಣ ಅಲ್ಲ ಎಂದರು.

ಇನ್ನು ಐದು ವರ್ಷ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ಅವರು ಮುಖ್ಯಮಂತ್ರಿ ಆಗುತ್ತೇನೆ ಎಂದಾಗ ನಾವು ಬೇಡ ಅನ್ನೋಕಾಗುತ್ತಾ? ಆಗಲಿ ಬಿಡಿ ಎಂದು ಉತ್ತರಿಸಿದರು.

ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಐದು ವರ್ಷ ಪೂರೈಸಿರುವ ಕಾರಣ ಎಲ್ಲರನ್ನೂ ಡಿನ್ನರ್ ಪಾರ್ಟಿಗೂ ಕರೆದಿದ್ದಾರೆ. ಇದರಲ್ಲಿ ಯಾವುದೇ ರಾಜಕಾರಣ ಹುಡುಕುವ ಕೆಲಸ ಬೇಡ. ಇದೊಂದು ಔಪಚಾರಿಕ ಸಮ್ಮಿಲನ ಎಂದು ಬಾಲಕೃಷ್ಣ ಹೇಳಿದರು.

13ಕೆಆರ್ ಎಂಎನ್ 4.ಜೆಪಿಜಿ

ಸುಗ್ಗನಹಳ್ಳಿ ಗ್ರಾಮದಲ್ಲಿ ನಡೆದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿರುವ ಭಕ್ತ ಸಮೂಹ.

Share this article