ಗುರುಮಠಕಲ್: ಪಟ್ಟಣದ ನಿವಾಸಿಗಳಿಗೆ ಕುಡಿಯಲು ಶುದ್ಧ ನೀರು ಪೂರೈಕೆ, ಚರಂಡಿಗಳ ಸ್ವಚ್ಛತೆ ಹಾಗೂ ರಸ್ತೆಗಳಲ್ಲಿ ಉಂಟಾಗಿರುವ ಕಂದಕಗಳನ್ನು ಸರಿಪಡಿಸುವ, ಸಾರ್ವಜನಿಕ ಶೌಚಾಲಯ ನಿರ್ಮಾಣ, ಉದ್ಯಾನಗಳ ಸಮರ್ಪಕ ನಿರ್ವಹಣೆ ಒಟ್ಟಾರೆ ಪಟ್ಟಣದ ಅಂದವಾಗಿಸುವ ಕಾಮಗಾರಿಯ ಕ್ರಿಯಾಯೋಜನೆ ರೂಪಿಸಬೇಕು ಎಂದು ಸಾರ್ವಜನಿಕರು ಸಲಹೆ ಸೂಚನೆಗಳನ್ನು ನೀಡಿದರು.
ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಬಜೆಟ್ ತಯಾರಿಯ ಸಾರ್ವಜನಿಕರ ಸಲಹೆ ಸೂಚನೆಗಳ ಪೂರ್ವಭಾವಿ ಸಭೆಯಲ್ಲಿ, ಪಟ್ಟಣದಲ್ಲಿ ರಸ್ತೆಗಳು ಕಂದಕಗಳಿಂದ ಕೂಡಿದೆ. ಬೈಕ್ ಸವಾರರಿಗೆ ಪ್ರಯಾಣಿಸಲು ತೊಂದರೆಯಾಗಿದೆ. ಜನರು ಶುದ್ಧ ಕುಡಿವ ನೀರಿಗಾಗಿ ಪರದಾಡುವಂತಾಗಿದೆ. ಇದರ ಕಡೆ ಕಾಳಜಿವಹಿಸಬೇಕು. ಮಾಂಸ ಮಾರಾಟದ ಅಂಗಡಿಗಳಿಗೆ ಪಟ್ಟಣದ ಹೊರಗಡೆ ವ್ಯವಸ್ಥೆ ಮಾಡಬೇಕು. ಪುರಸಭೆ ಕಟ್ಟಡದ ಅಂಗಡಿಗಳನ್ನು ಹರಾಜು ಹಾಕಬೇಕು. ರಸ್ತೆ ಮಧ್ಯದಲ್ಲಿ ತರಕಾರಿ ಮಾರಾಟ ಮಾಡುವುದನ್ನು ನಿಷೇಧಿಸಿ, ತರಕಾರಿ ಮಾರುಕಟ್ಟೆಯಲ್ಲಿ ವ್ಯವಹಾರ ನಡೆಯುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಸಲಹೆ ನೀಡಿದರು.ಪಟ್ಟಣದ ಯಾವುದೇ ಸಮಸ್ಯೆಗಳ ಕುರಿತು ಪುರಸಭೆ ಮುಖ್ಯಾಧಿಕಾರಿಗಳಿಗೆ ಗಮನಕ್ಕೆ ತಂದರೆ ಬರವಣಿಗೆ ರೂಪದಲ್ಲಿ ದೂರು ನೀಡಲು ಸೂಚಿಸುವುದು, ಅದರಲ್ಲಿ ಸಣ್ಣಪುಟ್ಟ ಸಮಸ್ಯೆಗಳಿಗೆ ಹೇಗೆ ಬರವಣಿಗೆ ರೂಪದಲ್ಲಿ ನೀಡಲು ಸಾಧ್ಯವಾಗುತ್ತದೆ. ಈ ತರಹ ವರ್ತನೆಯನ್ನು ಮುಖ್ಯಾಧಿಕಾರಿಗಳು ಸುಧಾರಿಸಿಕೊಳ್ಳಬೇಕು ಮತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ನಿವೃತ್ತ ನೌಕರರು ಆಗ್ರಹಸಿದರು.
ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಅವರು ಸಭೆಯ ನೇತೃತ್ವವಹಿಸಿದ್ದರು. ಪುರಸಭೆ ಸದಸ್ಯರಾದ ನರಸಪ್ಪ ಗಡ್ಡಲ್, ಅನ್ವರ ಅಹಮದ್, ಕೃಷ್ಣ ಮೇದಾ, ಬಾಲಪ್ಪ ದಾಸರಿ, ನಿವೃತ್ತ ನೌಕರರ ಸಂಘಧ ಅಧ್ಯಕ್ಷ ಪಿ.ಕಿಷ್ಟಪ್ಪ ಸೇರಿದಂತೆ ಪ್ರಮುಖರಾದ ಬಸವರಾಜ ನೆಲ್ಲೋಗಿ, ಕಾಶಪ್ಪ ಕಟ್ಟೇಲ್, ಭೀಮಶಪ್ಪ, ನಾರಾಯಣ, ಈಶ್ವರಪ್ಪ, ಫಯಾಜ್ ಅಹಮದ್, ಮಾಣೀಕ ಮುಕುಡಿ, ಭೀಮಶಪ್ಪ ಕೆಳಮನಿ, ಲಾಲಪ್ಪ ತಲಾರಿ ಸೇರಿದಂತೆ ಇತರರಿದ್ದರು.ಕಾಟಾಚಾರದ ಸಭೆ: ಬಜೆಟ್ ತಯಾರಿಯ ಪೂರ್ವಭಾವಿ ಸಭೆಯಲ್ಲಿ ಸಿಬ್ಬಂದಿಯ ಅನುಪಸ್ಥಿತಿ ಕಾಡುತ್ತಿತ್ತು. ಸಾರ್ವಜನಿಕರ ಸಲಹೆ ಸೂಚನೆಗಳಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸದ ಸಭೆ ಕಾಟಾಚಾರದಿಂದ ಕೂಡಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು. ಯಾವುದೇ ಸಲಹೆ ಸೂಚನೆಗಳನ್ನು ಕೊಟ್ಟರೂ ಬಜೆಟ್ ಇಲ್ಲ ಮುಂದೆ ನೋಡೋಣ ಎಂದು ಪುರಸಭೆ ಮುಖ್ಯಾಧಿಕಾರಿಗಳು ಹೇಳುತ್ತಿರುವುದು ಮತ್ತೇಕೆ ಈ ಸಭೆ ಆಯೋಜಿಸಿದ್ದಾರೆ ಎಂದು ಪುರಸಭೆ ಸದಸ್ಯರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.