ಗ್ರಾಮೀಣ ಮಕ್ಕಳಿಗೆ ಸರ್ಕಾರದಿಂದಲೇ ಬೇಸಿಗೆ ಶಿಬಿರ ಆಯೋಜನೆ

KannadaprabhaNewsNetwork |  
Published : May 11, 2026, 01:15 AM IST
42 | Kannada Prabha

ಸಾರಾಂಶ

ಮೈಸೂರುನಗರ ಪ್ರದೇಶದಲ್ಲಿ ನಡೆಯುವ ಬೇಸಿಗೆ ಶಿಬಿರಕ್ಕೆ ಸಡ್ಡು ಹೊಡೆಯುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ಇಲಾಖೆಯು ಗ್ರಾಮ ಪಂಚಾಯಿತಿ ಅರಿವು ಕೇಂದ್ರಗಳ (ಗ್ರಂಥಾಲಯ) ಮೂಲಕ ಹದಿನೈದು ದಿನದ ಬೇಸಿಗೆ ಶಿಬಿರ ಆಯೋಜಿಸಿದೆ.

ಮಹೇಂದ್ರ ದೇವನೂರು

ಕನ್ನಡಪ್ರಭ ವಾರ್ತೆ ಮೈಸೂರು

ನಗರ ಪ್ರದೇಶದಲ್ಲಿ ನಡೆಯುವ ಬೇಸಿಗೆ ಶಿಬಿರಕ್ಕೆ ಸಡ್ಡು ಹೊಡೆಯುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ಇಲಾಖೆಯು ಗ್ರಾಮ ಪಂಚಾಯಿತಿ ಅರಿವು ಕೇಂದ್ರಗಳ (ಗ್ರಂಥಾಲಯ) ಮೂಲಕ ಹದಿನೈದು ದಿನದ ಬೇಸಿಗೆ ಶಿಬಿರ ಆಯೋಜಿಸಿದೆ.

ಬೇಸಿಗೆ ರಜೆ ಬಂತೆಂದರೆ ಸರಿಸುಮಾರು ಒಂದೂವರೆ ಎರಡು ತಿಂಗಳವರೆಗೆ ಮಕ್ಕಳನ್ನು ಮನೆಯಲ್ಲಿ ಹಿಡಿದಿಡುವುದೇ ಪೋಷಕರಿಗೆ ದೊಡ್ಡ ಸವಾಲು. ಟಿವಿ, ಮೊಬೈಲ್‌ ಚಟ ಹತ್ತಿದ ಮಕ್ಕಳನ್ನು ಶಾಲೆ ಆರಂಭವಾದ ಮೇಲೆ ಮತ್ತೆ ಸರಿದಾರಿಗೆ ತರುವುದು ಇನ್ನೂ ದೊಡ್ಡ ತಲೆನೋವು.

ಇಂತಹ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ನಗರ ಮತ್ತು ಪಟ್ಟಣಗಳಲ್ಲಿ ನಡೆಯುವ ಬೇಸಿಗೆ ಶಿಬಿರಗಳು ಪೋಷಕರ ಪಾಲಿಗೆ ವರದಾನವಾಗಿರುತ್ತದೆ. ಬೇಸಿಗೆ ರಜೆಯಲ್ಲಿ ಮಕ್ಕಳು ಏನಾದರೊಂದು ಚಟುವಟಿಕೆಯಲ್ಲಿ ತೊಡಗಲಿ ಎಂಬ ಮನೋಭಾವ ಎಷ್ಟಿರುತ್ತದೋ, ಮನೆಯಲ್ಲಿ ತಡೆಯಲು ಸಾಧ್ಯವಿಲ್ಲ ಎಂಬ ಕಾರಣ ಶಿಬಿರಕ್ಕೆ ಕಳುಹಿಸುವುದು ಅಷ್ಟೇ ಸತ್ಯ.

ಆದರೆ ಗ್ರಾಮೀಣ ಪ್ರದೇಶದಲ್ಲಿ ಹಾಗೂ ಕೆಲವೊಂದು ಪಟ್ಟಣ ಪ್ರದೇಶಗಳಲ್ಲಿ ಆ ಸೌಲಭ್ಯ ಇರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಮಕ್ಕಳು ಗ್ರಾಮೀಣ ಕ್ರೀಡೆಗಳು, ಮೊಬೈಲ್‌, ಟಿವಿ ಮುಂತಾದವುಗಳ ದಾಸರಾಗುತ್ತಾರೆ. ಇದನ್ನು ತಪ್ಪಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು ಗ್ರಾಮ ಪಂಚಾಯಿತಿ ಅರಿವು ಕೇಂದ್ರ (ಗ್ರಂಥಾಲಯಗಳ) ಮೂಲಕ ಕರಕುಶಲ ಕಲೆಯನ್ನು ಕಲಿಸಲು ಮುಂದಾಗಿದೆ.

ಗ್ರಾಮ ಪಂಚಾಯಿತಿ ಅರಿವು ಕೇಂದ್ರದಲ್ಲಿ ಬಣ್ಣದ ಪೇಪರ್‌, ತ್ಯಾಜ್ಯವಸ್ತುಗಳ ಮೂಲಕ ವಿವಿಧ ಮಾದರಿಗಳನ್ನು ತಯಾರಿಸುವುದು, ಜೇಡಿ ಮಣ್ಣಿನಿಂದ ಗೊಂಬೆಗಳ ತಯಾರಿಕೆ, ಪಕ್ಷಿ ವೀಕ್ಷಣೆ, ಮೈಂಡ್ ಗೇಮ್, ಪರಿಸರ ಸ್ನೇಹಿ ಚಟುವಟಿಕೆ, ಕೇರಂ, ಚೆಸ್ ಹೀಗೆ ಹತ್ತು ಹಲವು ಆಟಗಳ ಜೊತೆಗೆ ಗಟ್ಟಿ ಓದು, ಪತ್ರ ಬರವಣಿಗೆ, ವಿಜ್ಞಾನ ಪ್ರಯೋಗಗಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು ಈ ಕಲೆಗಳನ್ನು ಮಕ್ಕಳಿಗೆ ಕಲಿಸಲಾಗುತ್ತಿದೆ. ಸಾಲಿಗ್ರಾಮ ತಾಲೂಕು ಕೇಂದ್ರದ ಅರಿವು ಕೇಂದ್ರದಲ್ಲಿ ಅರ್ಲಿ ಬ್ರಡ್ಸ್‌ ಸಂಸ್ಥೆಯವರು ಪಕ್ಷಿ ವೀಕ್ಷಣೆಯಂತಹ ಮಹತ್ತರ ಕಾರ್ಯಕ್ರಮ ಆಯೋಜಿಸುವ ಮೂಲಕ ಮಕ್ಕಳಲ್ಲಿ ಪರಿಸರ ಮತ್ತು ಪಕ್ಷಿಗಳ ಮೇಲಿನ ಕಾಳಜಿ, ಅವುಗಳ ಜೀವನ ಶೈಲಿ, ಬದುಕು ಮುಂತಾದವುಗಳನ್ನು ತಿಳಿಸುವ ಕೆಲಸ ಮಾಡುತ್ತಿದೆ.

ವಿಶೇಷವೆಂದರೆ ಮಕ್ಕಳಿಂದ ಕಥೆ ಹೇಳಿಸುವುದು ಮತ್ತು ಸಂಪನ್ಮೂಲ ವ್ಯಕ್ತಿಗಳಿಂದ ಆದರ್ಶಮಯ ಕಥೆಗಳನ್ನು ಹೇಳಿಸುವ ಮೂಲಕ ಮಕ್ಕಳ ಅರಿವು ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಇಂತಹ ಶಿಬಿರಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಾಲಿಗ್ರಾಮ ಅರಿವು ಕೇಂದ್ರ ಮೇ ತಿಂಗಳು ಪೂರ್ತಿ ನಡೆಯಲಿದೆ.

ಈ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರವನ್ನು 15 ದಿನಗಳವರೆಗೆ ನಡೆಸಲು ಇಲಾಖೆ ಸೂಚಿಸಿದೆ. ಅಲ್ಲದೆ ಹಲವು ನಿಬಂಧನೆಗಳು ಮತ್ತು ಚಟುವಟಿಕೆಗಳ ಕಾರ್ಯಸೂಚಿಯನ್ನು ನೀಡಿದೆ. ಆದರೆ ಮೈಸೂರು ಜಿಲ್ಲೆಯಲ್ಲಿ ಬೇಸಿಗೆ ರಜೆ ಪ್ರಾರಂಭವಾದಾಗಿನಿಂದ ಬೇಸಿಗೆ ರಜೆ ಅಂತ್ಯಗೊಳ್ಳುವವರೆಗೆ ನಡೆಸಲು ಜಿಪಂ ಸೂಚಿಸಿದೆ. ಆದರೆ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳ ಅಗತ್ಯಕ್ಕೆ ಅನುಗುಣವಾಗಿ ಮತ್ತು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸೀಮಿತ ದಿನಗಳಿಗೆ ಶಿಬಿರ ನಡೆಯುತ್ತಿದೆ.ಅರಿವು ಕೇಂದ್ರವಾಗಿ ಬದಲಿಸಿದೆ

ಗ್ರಂಥಾಲಯ ಇಲಾಖೆ ವ್ಯಾಪ್ತಿಯಲ್ಲಿದ್ದ ಗ್ರಾಮೀಣ ಪ್ರದೇಶದ ಗ್ರಂಥಾಲಯಗಳನ್ನು ಪಂಚಾಯತ್‌ರಾಜ್‌ ಇಲಾಖೆಯು ತನ್ನ ಸುಪರ್ದಿಗೆ ಪಡೆದ ಮೇಲೆ ಅವುಗಳನ್ನು ಗ್ರಾಮ ಪಂಚಾಯಿತಿ ಅರಿವು ಕೇಂದ್ರವಾಗಿ ಬದಲಿಸಿದೆ. ಉಳಿದಂತೆ ನಗರ ಗ್ರಂಥಾಲಯಗಳು ಗ್ರಂಥಾಲಯ ಇಲಾಖೆ ವ್ಯಾಪ್ತಿಯಲ್ಲಿಯೇ ಇವೆ.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ಗ್ರಂಥಾಲಯಗಳಲ್ಲಿ ಮಕ್ಕಳಿಗೆ ವಿಶೇಷ ಶಿಬಿರಗಳನ್ನು ಆಯೋಜಿಸಿ, ಅವರಲ್ಲಿ ಕರಕುಶಲ ಕಲೆಯನ್ನು ಉತ್ತೇಜಿಸುವ ಕೆಲಸ ಮಾಡುತ್ತಿದೆ.

- ಬಿ. ಮಂಜುನಾಥ್, ಉಪ ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ

ಇದೊಂದು ತರಬೇತಿ ಅಷ್ಟೇ ಅಲ್ಲ. ಸ್ನೇಹಪೂರ್ವಕ ಮನಸ್ಸುಗಳ ಬೆಸುಗೆ. ಸೃಜನಶೀಲ ಕಲೆಯೊಂದಿಗೆ ಆಟ ಪಾಠಗಳ ಚಟುವಟಿಕೆ, ಚಿತ್ರದೊಂದಿಗೆ ನಮ್ಮನ್ನು ನಾವೇ ಕಂಡುಕೊಂಡ ಬಗೆಯಂತೂ ಚೆಂದವೋ ಚೆಂದ. ಮನಸ್ಸಿನ ಭಾವನೆಗಳಿಗೆ ಬಣ್ಣದ ಮೆರಗು ನೀಡುತ್ತಾ ಎಲ್ಲೋ ಹುದುಗಿದ್ದ ನಮ್ಮ ಅಂತರಾತ್ಮವನ್ನು ಅನಾವರಣಗೊಳಿಸುತ್ತಾ ಸುಪ್ತ ಪ್ರತಿಭೆಯನ್ನು ಜಾಗೃತಗೊಳಿಸಿ ಎಲ್ಲರೊಂದಿಗೆ ಹೊಂದಿಕೊಂಡು ಸಕಾಲಕ್ಕೆ ನಮ್ಮನ್ನು ನಾವೇ ಸಾದರಪಡಿಸುತ್ತಿರುವುದು ಅದ್ಭುತವಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ಗ್ರಂಥಾಲಯಗಳ ಮೂಲಕ ಬೇಸಿಗೆ ಶಿಬಿರದ ಮಾದರಿಯಲ್ಲಿ ಮಕ್ಕಳಿಗೆ ಕೌಶಲ್ಯಭರಿತ ಕಾರ್ಯಕ್ರಮ ಆಯೋಜಿಸಿದೆ. ಸಾಲಿಗ್ರಾಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕೂಡ ಸಹಯೋಗ ನೀಡಿದೆ. ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದು, ಕೆಲವೆಡೆ ಹತ್ತು, ಹದಿನೈದು ದಿನ ಇಂತಹ ಶಿಬಿರ ನಡೆದಿದೆ. ನಮ್ಮ ಗ್ರಂಥಾಲಯದಲ್ಲಿ ಈ ತಿಂಗಳು ಪೂರ್ತಿ ನಡೆಯಲಿದೆ.

- ದಿವ್ಯಾ, ಗ್ರಂಥಾಲಯ ಮೇಲ್ವಿಚಾರಕಿ, ಸಾಲಿಗ್ರಾಮ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದುಃಖದ ಮಡುವಿನಲ್ಲಿ ಮುಳುಗಿದ ಹಿರಿಯೂರು
ಸುಧಾಕರ್ ಅಂತಿಮ ದರ್ಶನಕ್ಕೆ ಸಿಎಂ ಸಿದ್ದರಾಮಯ್ಯ