ಬೆಂಗಳೂರಿನಲ್ಲಿ ರಣ ಬಿಸಿಲು: ಮಂಗಳವಾರ 41 ಡಿಗ್ರಿ ಉಷ್ಣಾಂಶ!

KannadaprabhaNewsNetwork |  
Published : May 02, 2024, 01:33 AM ISTUpdated : May 02, 2024, 08:11 AM IST
SUMMER | Kannada Prabha

ಸಾರಾಂಶ

ಮಳೆಯೇ ಇಲ್ಲದೆ ಬೆಂಗಳೂರಿನ ತಾಪಮಾನ ಭಾರಿ ಏರಿಕೆ ಕಂಡಿದೆ. ಮಂಗಳವಾರ 41 ಡಿಗ್ರಿ ಸೆಲ್ಶಿಯಸ್‌ ಉಷ್ಣಾಂಶ ಇತ್ತೆಂದು ಕೆಎಸ್‌ಡಿಎಂಸಿ ಹೇಳಿದೆ. ಆದರೆ ಭಾರತೀಯ ಹವಾಮಾನ ಇಲಾಖೆ 38 ಡಿಗ್ರಿ ಎಂದು ದಾಖಲಿಸಿದೆ.

  ಬೆಂಗಳೂರು :  ನಗರದ ಕೆಂಗೇರಿ ಮತ್ತು ಉಲ್ಲಾಳದಲ್ಲಿ ಕಳೆದ ಮಂಗಳವಾರ ಬರೋಬ್ಬರಿ 41.8 ಡಿಗ್ರಿ ಸೆಲ್ಶಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಕೆಎಸ್‌ಎನ್‌ಎಂಸಿಡಿ (ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ) ತಿಳಿಸಿದೆ.

ನಗರದಲ್ಲಿ ದಿನದಿಂದ ದಿನಕ್ಕೆ ಬಿಸಿಲ ಝಳ ಹೆಚ್ಚಾಗುತ್ತಿದ್ದು, ನಗರದ ಹಲವು ಭಾಗದಲ್ಲಿ ಮಂಗಳವಾರ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಶಿಯಸ್‌ಗಿಂತ ಹೆಚ್ಚು ದಾಖಲಾದ ವರದಿಯಾಗಿದೆ.

ಕೆಂಗೇರಿ ಮತ್ತು ಉಲ್ಲಾಳದಲ್ಲಿ ತಲಾ 41.8 ಡಿಗ್ರಿ ಸೆಲ್ಶಿಯಸ್‌, ಕಮ್ಮನಹಳ್ಳಿ, ಕೋನೇನ ಅಗ್ರಹಾರ, ಸುಧಾಮನಗರ, ಹನುಮಂತನಗರ, ಬಸವಗುಡಿ ಸೇರಿದಂತೆ ಹಲವು ಕಡೆ 40.5 ಡಿಗ್ರಿ ಸೆಲ್ಶಿಯಸ್‌, ದೀಪಾಂಜಲಿ ನಗರ, ಗಾಳಿ ಆಂಜನೇಯ ದೇವಸ್ಥಾನ, ಬಾಪೂಜಿ ನಗರ, ಹಂಪಿ ನಗರ, ಅತ್ತಿಗುಪ್ಪೆ ಸೇರಿದಂತೆ ಹಲವು ಕಡೆ 40 ಡಿಗ್ರಿ ಸೆಲ್ಶಿಯಸ್‌, ಉತ್ತರಹಳ್ಳಿಯಲ್ಲಿ 39.4 ಡಿಗ್ರಿ ಸೆಲ್ಶಿಯಸ್‌, ಲಗ್ಗೇರೆ, ರಾಜಗೋಪಾಲ ನಗರ, ಮಹಾಲಕ್ಷ್ಮಿ ಪುರ, ಲಕ್ಷ್ಮೀದೇವಿನಗರ ಸೇರಿದಂತೆ ಹಲವು ಕಡೆ 38.6 ಡಿಗ್ರಿ ಸೆಲ್ಶಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಕೆಎಸ್‌ಎನ್‌ಎಂಸಿಡಿ ಮಾಹಿತಿ ನೀಡಿದೆ.

ಆದರೆ, ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ನಗರದಲ್ಲಿ ಮಂಗಳವಾರ 37.8 ಡಿಗ್ರಿ ಸೆಲ್ಶಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ತಿಳಿಸಿದೆ.

ಮೇ ಮೊದಲ ದಿನವೇ 38.1 ಡಿಗ್ರಿ ಬಿಸಿಲು

ಬೆಂಗಳೂರಿನಲ್ಲಿ ಬುಧವಾರ 38.1 ಡಿಗ್ರಿ ಸೆಲ್ಶಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗುವ ಮೂಲಕ ಕಳೆದ 13 ವರ್ಷದಲ್ಲಿ ಮೇ ಮಾಹೆಯ ಅತಿ ಹೆಚ್ಚು ಗರಿಷ್ಠ ಉಷ್ಣಾಂಶವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

33.3 ಡಿಗ್ರಿ ಸೆಲ್ಶಿಯಸ್‌ ನಗರದ ಮೇ ತಿಂಗಳಿನ ವಾಡಿಕೆ ಗರಿಷ್ಠ ಉಷ್ಣಾಂಶವಾಗಿದ್ದು, ಮೇ 1ರಂದು ವಾಡಿಕೆ ಪ್ರಮಾಣಕ್ಕಿಂತ 3.8 ಡಿಗ್ರಿ ಸೆಲ್ಶಿಯಸ್‌ ಅಧಿಕ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

2013ರ ಮೇ 3ರಂದು 37.6 ಡಿಗ್ರಿ ಸೆಲ್ಶಿಯಸ್‌ ದಾಖಲಾಗಿತ್ತು. 2016ರ ಮೇ 2ರಂದು 37.3 ಡಿಗ್ರಿ ಸೆಲ್ಶಿಯಸ್‌ ದಾಖಲಾಗಿತ್ತು. 1931ರ ಮೇ 22 ರಂದು 38.9 ಡಿಗ್ರಿ ಸೆಲ್ಶಿಯಸ್‌ ದಾಖಲಾಗಿದ್ದು, ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವರ್ಷಕ್ಕೆ ಲಕ್ಷ ಮಂದಿಗೆ ರೋಗ- 40 ಸಾವಿರ ಸಾವು : ಆತಂಕಕಾರಿ ಮಾಹಿತಿ ನೀಡಿದ ಡಾ.ಸಿಎನ್ ಮಂಜುನಾಥ್
ಕೃಷಿಯಲ್ಲಿ ತೊಡಗಲು ಪೊಲೀಸ್‌ ಕಾನ್‌ಸ್ಟೇಬಲ್‌ ಹುದ್ದೆಗೆ ರಾಜೀನಾಮೆ!