ಕನ್ನಡಪ್ರಭ ವಾರ್ತೆ ತಿಪಟೂರು
ಹಾಲು ಉತ್ಪಾದಕರು ಉತ್ತಮ ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಹೆಚ್ಚು ಲಾಭಗಳಿಸಿ ಆರ್ಥಿಕ ಸದೃಢರಾಗಬೇಕೆಂದು ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಮಾದಿಹಳ್ಳಿ ಪ್ರಕಾಶ್ ತಿಳಿಸಿದರು.ತಾಲೂಕಿನ ಕರಡಿ ಹಾಲು ಉತ್ಪಾದಕರ ಸಹಕಾರ ಸಂಘದ 2024-25ನೇ ಸಾಲಿನ ನಾಲ್ಕನೇ ವರ್ಷದ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ತುಮಕೂರು ಹಾಲು ಒಕ್ಕೂಟದಿಂದ ರೈತರಿಗೆ ವಿಮೆ, ರಾಸುಗಳ ಸಾಕಾಣಿಕೆಗಾಗಿ ರೈತರಿಗೆ ತರಬೇತಿ, ವಿದ್ಯಾರ್ಥಿ ವೇತನ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡುತ್ತಿದ್ದು ಇದರ ಸದುಪಯೋಗಪಡಿಸಿಕೊಂಡು ಉತ್ತಮ ಗುಣಮಟ್ಟದ ಹಾಲು ಸರಬರಾಜು ಮಾಡಿ ಹೆಚ್ಚು ಲಾಭಗಳಿಬೇಕು. ಕರಡಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕಟ್ಟಡ ನಿರ್ಮಾಣಕ್ಕಾಗಿ ಸಹಾಯಧನ ಕೊಡಿಸುವುದಾಗಿ ಹಾಗೂ ತುಮಕೂರು ಹಾಲು ಒಕ್ಕೂಟದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದ ಅವರು ಸಂಘದ ಅಧ್ಯಕ್ಷರಾದ ಕರಡಿ ದೇವರಾಜುರವರು ಹಿರಿಯ ಸಹಕಾರಿಗಳಾಗಿದ್ದು ಇವರ ನೇತೃತ್ವದಲ್ಲಿ ಕರಡಿ ಹಾಲು ಉತ್ಪಾದಕರ ಸಹಕಾರ ಸಂಘವು ತಾಲೂಕಿನಲ್ಲಿ ಮಾದರಿ ಸಂಘವಾಗಿ ಬೆಳೆಯಬೇಕು. ಇದಕ್ಕಾಗಿ ರೈತರು ಸಹಕರಿಸಬೇಕೆಂದು ತಿಳಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೆ.ಆರ್ ದೇವರಾಜು ಮಾತನಾಡಿ ರೈತರು ಸರಬರಾಜು ಮಾಡುವ ಉತ್ತಮ ಗುಣಮಟ್ಟದ ಹಾಲಿಗೆ ಸರ್ಕಾರದ ಸಹಾಯಧನವು ಸೇರಿ ೫೦ ರಿಂದ ೫೫ ರು.ಗಳವರೆಗೆ ಪ್ರತಿ ಲೀಟರ್ ಹಾಲಿಗೆ ದರ ದೊರೆಯುತ್ತಿದೆ. ಇದಕ್ಕೆ ಕಾರಣರಾದ ಸ್ವಯಂ ಚಾಲಿತ ಹಾಲು ಸಂಗ್ರಹಣಾ ವ್ಯವಸ್ಥೆ ತಂತ್ರಾಂಶವನ್ನು ಇಡೀ ರಾಜ್ಯದಲ್ಲಿ ಜಾರಿಗೊಳಿಸಿದ ಮಾಜಿ ಸಹಕಾರ ಸಚಿವರಾದ ಕೆ.ಎನ್ ರಾಜಣ್ಣನವರಿಗೆ ರಾಜ್ಯದ ಹಾಲು ಉತ್ಪಾದಕರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ರೈತರ ಪ್ರಾಮಾಣಿಕ ಸಹಕಾರದಿಂದ ಮಾತ್ರ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ. ನಮ್ಮ ಸಂಘವನ್ನು ಮುಂದಿನ ದಿನಗಳಲ್ಲಿ ಮಾದರಿ ಸಂಘವಾಗಿ ಬೆಳೆಸಲು ಸದಸ್ಯರ ಸಹಕಾರ ಅಗತ್ಯ ಎಂದರು.ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಜೆ ರಂಗಸ್ವಾಮಿ, ವಿಸ್ತರಣಾಧಿಕಾರಿ ಶಶಿಕಲಾ, ವಿಸ್ತರಣಾ ಸಮಲೋಚಕ ಸುನಿಲ್, ಸಂಘದ ನಿರ್ದೇಶಕರಾದ ಪುಟ್ಟಮಲ್ಲಚಾರಿ, ದಿನೇಶ್ ಆರಾಧ್ಯ, ಉಮೇಶ್ ದಯಾನಂದ್ ಸೇರಿದಂತೆ ಸಂಘದ ಸದಸ್ಯರುಗಳು ಭಾಗವಹಿಸಿದ್ದರು. ಕರಡಿ ಪ್ರಾಥಮಿಕ ಕೃಷಿ ಸಹಕಾರ ಸಂಘದ ಸಿಇಒ ಮನು ಸ್ವಾಗತಿಸಿ ಹಾಲು ಉತ್ಪಾದಕರ ಸಂಘದ ಸಿಇಒ ಶಶಿಕಿರಣ್ ನಿರೂಪಿಸಿದರು.