ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಗಟ್ಟಿಗೊಳಿಸುವುದರ ಜತೆಗೆ ಆರ್ಥಿಕವಾಗಿ ಸದೃಢಗೊಳಿಸಲು ಪಾಪು ಬಣಕ್ಕೆ ಬೆಂಬಲಿಸಲು ಪ್ರಧಾನ ಕಾರ್ಯದರ್ಶಿ ಅಭ್ಯರ್ಥಿ ಪ್ರಕಾಶ್ ಉಡಿಕೇರಿ ಮನವಿ ಮಾಡಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಅಭಿವೃದ್ಧಿ ವಿಚಾರವಾಗಿ ನಾವು ನೀಡಿರುವ ಭರವಸೆಗಳಿಗೆ ಸಂಘದ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ನಮಗೆ ಬೆಂಬಲ ನೀಡುತ್ತಿದ್ದಾರೆ. ಇವುಗಳ ಜತೆಗೆ ಒಂದೇ ವರ್ಗದ ಕಲಾವಿದರಿಗೆ ಅವಕಾಶ ನೀಡದೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವುದು, ಸರ್ಕಾರದ ಅನುದಾನದ ಜತೆಗೆ ಸಿಎಸ್ಆರ್ ಅನುದಾನ ತರುವುದಕ್ಕೂ ನಮ್ಮ ನಿರ್ಧಾರಕ್ಕೆ ಸಹಮತ ವ್ಯಕ್ತವಾಗಿದೆ. ಈ ಎಲ್ಲ ಕಾರಣಗಳಿಗೆ ಜನರು ಬೆಂಬಲಿಸಲು ಮುಂದಾಗಿದ್ದಾರೆ ಎಂದರು.
ಮುಂದಿನ 3 ವರ್ಷಗಳ ಅವಧಿಗೆ ನಮ್ಮ ತಂಡ ಆಯ್ಕೆಯಾದ ದಿನದಿಂದಲೇ ಈ ಎಲ್ಲ ಕಾರ್ಯಗಳಿಗೆ ಚಾಲನೆ ನೀಡಲಾಗುವುದು. ಒಂದಿಷ್ಟೂ ಸಂಘದ ಗೌರವಕ್ಕೆ ಧಕ್ಕೆ ಆಗದಂತೆ ಎಲ್ಲರ ಜತೆಯಾಗಿ ಸಂಘವನ್ನು ಬಲಿಷ್ಟಗೊಳಿಸುವುದೇ ನಮ್ಮ ಧ್ಯೇಯವಾಗಿದೆ. ಅದರಂತೆ ನಡೆಯುತ್ತೇವೆ ಎಂಬ ಭರವಸೆಯೂ ಇದೆ ಎಂದರು.ಕೋಶಾಧ್ಯಕ್ಷ ಸ್ಥಾನದ ಅಭ್ಯರ್ಥಿ ವೀರಣ್ಣ ಯಳಲ್ಲಿ ಮಾತನಾಡಿ, ನಮ್ಮ ತಂಡ ರಚನೆಯಾದ ದಿನದಿಂದಲೇ ಸಾಹಿತಿಗಳು, ಬರಹಗಾರರು ಸೇರಿ ಎಲ್ಲ ವರ್ಗದ ಜನರನ್ನು ಭೇಟಿ ಮಾಡಿ ಮತ ಯಾಚಿಸಿದ್ದೇವೆ. ಬಹುತೇಕರು ನಮ್ಮ ಯೋಜನೆಗಳನ್ನು ಗಮನಿಸಿ ಬೆಂಬಲ ಸೂಚಿಸಿದ್ದಾರೆ. ಅವರ ಆಶಯಕ್ಕೆ ಧಕ್ಕೆಯಾಗದಂತೆ ಕಾರ್ಯ ನಿರ್ವಹಿಸುತ್ತೇವೆ ಎಂದರು. ಬಳಿಕ ಉಪ್ಪಿನ ಬೆಟಗೇರಿಯಲ್ಲಿ ಪ್ರಚಾರ ನಡೆಸಿದರು.