ಬಿಡದಿ ಸೊಸೈಟಿಯ 12 ಸ್ಥಾನಗಳಲ್ಲೂ ಕೈ ಬೆಂಬಲಿತರ ಗೆಲುವು: ಶಾಸಕ ಬಾಲಕೃಷ್ಣ

KannadaprabhaNewsNetwork |  
Published : Apr 11, 2026, 01:15 AM IST
10ಕೆಆರ್ ಎಂನ್ 1.ಜೆಪಿಜಿಬಿಡದಿಯ ಹೊರವಲಯದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಶಾಸಕ ಬಾಲಕೃಷ್ಣ ಮಾತನಾಡಿದರು. | Kannada Prabha

ಸಾರಾಂಶ

ಬಿಡದಿ ರೈತರ ವಿವಿದ್ದೋದ್ದೇಶ ಸಹಕಾರ ಸಂಘದ ಚುನಾವಣೆ ನಾಳೆ (ಏ.12) ಬಾನಂದೂರು ರಸ್ತೆಯಲ್ಲಿರುವ ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. 3207 ಸಾಲಗಾರರ ಕ್ಷೇತ್ರದ ಮತದಾರರು, 1074 ಸಾಲಗಾರರಲ್ಲದ ಕ್ಷೇತ್ರದ ಮತದಾರರಿದ್ದಾರೆ.

ಕನ್ನಡಪ್ರಭ ವಾರ್ತೆ ರಾಮನಗರ

ಬಿಡದಿ ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಜವಾಬ್ದಾರಿ ತೆಗೆದುಕೊಂಡು ಒಗ್ಗಟ್ಟಿನಿಂದ ಶ್ರಮಿಸಿದರೆ 12 ಸ್ಥಾನಗಳಲ್ಲೂ ಗೆಲುವು ಸಾಧಿಸಲು ಸಾಧ್ಯವಾಗಲಿದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

ಬಿಡದಿಯ ಹೊರವಲಯದಲ್ಲಿ ಶುಕ್ರವಾರ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಅತಿ ದೊಡ್ಡ ಸಹಕಾರ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ರೈತರ ಸೇವಾ ಸಹಕಾರ ಸಂಘವನ್ನು ಸುಮಾರು 47 ವರ್ಷಗಳ ಹಿಂದೆ ಸ್ಥಾಪಿಸಿ ಅಂದಿನಿಂದ ಅಧಿಕಾರ ಅನುಭವಿಸಿದ ಜೆಡಿಎಸ್ ಬೆಂಬಲಿತ ಅಧ್ಯಕ್ಷರು ಹಾಗೂ ನಿರ್ದೇಶಕರು, ತಮ್ಮ ಅಧಿಕಾರದ ಅನುಕೂಲಕ್ಕಾಗಿ ಈ ಸಂಘವನ್ನು ಎರಡು ಬಾರಿ ಅಮಾನತುಗೊಳಿಸಿದರು. ಜೊತೆಗೆ ಯಾವುದೇ ಅಭಿವೃದ್ಧಿ ಕಂಡಿಲ್ಲ ಎಂದು ಟೀಕಿಸಿದರು.

ಈಗ ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದು, ಜಿಲ್ಲಾ ಬಿಡಿಸಿಸಿ ಬ್ಯಾಂಕ್ ಸಹ ಕಾಂಗ್ರೆಸ್ ಪಕ್ಷದ ಹಿಡಿತದಲ್ಲಿದೆ. ಸೊಸೈಟಿ ಮೂಲಕ ಬಿಡದಿ ಭಾಗದ ರೈತರಿಗೆ ಹೆಚ್ಚಿನ ಸಾಲ ಸೌಲಭ್ಯಗಳನ್ನು ನೀಡಲು ಸಾಧ್ಯವಾಗುತ್ತದೆ. ಹಾಗಾಗಿ ಕಾಂಗ್ರೆಸ್ ಬೆಂಬಲಿತ 12 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ರೈತರಿಗೆ ಸೇವೆ ಮಾಡಲು ಒಂದು ಅವಕಾಶ ಮಾಡಿ ಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜು ಮಾತನಾಡಿ, ಎಲ್ಲರೂ ತಂಡದ ಎಲ್ಲ ಅಭ್ಯರ್ಥಿಗಳಿಗೆ ಮತ ಕೇಳಿ, ಒಂದು ವೇಳೆ ಒಬ್ಬರು ಸೋತರೆ ಇಡೀ ಸಿಂಡಿಕೇಟ್ ಸೋತಂತೆ, ಮತ ಕೇಳುವಾಗ ಗೊಂದಲ ಮಾಡಿಕೊಳ್ಳದೆ ಸಾಲಗಾರರಲ್ಲದ 1 ಸ್ಥಾನಕ್ಕೆ, ಮೀಸಲಾತಿಯಡಿ ಇರುವ ಸಾಲಗಾರರ 11 ಸ್ಥಾನಗಳಿಗೆ ಪ್ರತ್ಯೇಕವಾಗಿ ಮತ ಕೇಳಿ, 12 ಅಭ್ಯರ್ಥಿಗಳ ಗೆಲುವಿನ ಹಿಂದೆ ಮುಖಂಡರ ಶ್ರಮ ಹೋರಾಟ ಇರಲಿ. ಈ ಚುನಾವಣೆ ಕಾಂಗ್ರೆಸ್ ಪಕ್ಷದ ಮುಖಂಡರುಗಳ ಚುನಾವಣೆಯಾಗಿದೆ ಎಂಬುದನ್ನು ಮರೆಯಬೇಡಿ ಎಂದು ತಿಳಿಸಿದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು ಮಾತನಾಡಿ, ₹1 ಕೋಟಿ ಇದ್ದ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ಪ್ರಸ್ತುತ ₹3.5 ಕೋಟಿ ಸಾಲವನ್ನು ರೈತರಿಗೆ ಅನುಕೂಲವಾಗುವಂತೆ ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಬೆಳೆ ಸಾಲ, ಕುರಿ, ಕೋಳಿ, ಹಂದಿ ಸಾಕಾಣಿಕೆ, ಹೈನುಗಾರಿಕೆ, ಸ್ವಸಹಾಯ ಸಂಘಗಳಿಗೆ ಹೆಚ್ಚು ಸಾಲ ನೀಡಿ ಅವರನ್ನು ಆರ್ಥಿಕವಾಗಿ ಬಲಗೊಳಿಸಲು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಆರ್ಶೀವಾದ ಮಾಡಿ ಎಂದರು.

ಸಭೆಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ರಮೇಶ್, ಶೇಷಗಿರಿಹಳ್ಳಿ ವೆಂಕಟೇಶ್, ಬೆಟ್ಟಸ್ವಾಮಿ, ನರಸಿಂಹಯ್ಯ, ಪುಟ್ಟಯ್ಯ, ಕರಡಿಗೌಡನದೊಡ್ಡಿ ಉಮಾಶಂಕರ್, ಬಾನಂದೂರು ನಂಜುಂಡಿ, ರಂಗಸ್ವಾಮಿ ಸೇರಿದಂತೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು, ಕಾಂಗ್ರೆಸ್ ಪಕ್ಷದ ಮುಖಂಡರುಗಳು ಭಾಗವಹಿಸಿದ್ದರು.

----

ನಾಳೆ ಮತದಾನ

ರಾಮನಗರ; ಬಿಡದಿ ರೈತರ ವಿವಿದ್ದೋದ್ದೇಶ ಸಹಕಾರ ಸಂಘದ ಚುನಾವಣೆ ನಾಳೆ (ಏ.12) ಬಾನಂದೂರು ರಸ್ತೆಯಲ್ಲಿರುವ ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. 3207 ಸಾಲಗಾರರ ಕ್ಷೇತ್ರದ ಮತದಾರರು, 1074 ಸಾಲಗಾರರಲ್ಲದ ಕ್ಷೇತ್ರದ ಮತದಾರರಿದ್ದಾರೆ. ಮತದಾನ ಮಾಡಲು ಸಂಘದಿಂದ ನೀಡಿರುವ ಗುರುತಿನ ಪತ್ರ ಕಡ್ಡಾಯವಾಗಿ ತರಬೇಕು. ಸುಗಮ ಮತದಾನ ಪ್ರಕ್ರಿಯೆ ನಡೆಸಲು ಸಾಲಗಾರರಲ್ಲದ ಕ್ಷೇತ್ರಕ್ಕೆ 2 ಕೊಠಡಿಗಳು, ಸಾಲಗಾರರ ಕ್ಷೇತ್ರಕ್ಕೆ ಮತದಾನ ಮಾಡಲು ೮ ಕೊಠಡಿಗಳು ಸೇರಿ ಒಟ್ಟು 10 ಕೊಠಡಿಗಳಲ್ಲಿ ಮತದಾನ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ರಿಟರ್ನಿಂಗ್ ಅಧಿಕಾರಿ ಮಂಜುನಾಥ್ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಸರೀಘಟ್ಟ ಚೌಡೇಶ್ವರಿ ದೇವಿ ಜಾತ್ರಾಮಹೋತ್ಸವ
ಗ್ರಾಮೀಣ ಜನರಿಗೆ ಗ್ರಾಮ-ನೆಟ್ ಭಾರತ ಯೋಜನೆ ವರದಾನ