ಮೈಸೂರು ಮೂಲದ ಸುಪ್ರೀತಾ ಜೆರಿಬ್ಲೇಜ್ಗೆ ಅವಕಾಶ ಸಾಧ್ಯತೆ---ಕನ್ನಡಪ್ರಭ ವಾರ್ತೆ ಮೈಸೂರು
ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ಭಾಗವಹಿಸಲಿರುವ ಮೊದಲ ದಂಪತಿ ಎಂಬ ಹೆಗ್ಗಳಿಕೆ ಮೈಸೂರು ಮೂಲದ ಸುಪ್ರೀತಾ - ಜೆರಿಬ್ಲೇಜ್ ಅವರಿಗೆ ಸಿಗುವ ಸಾಧ್ಯತೆ ಇದೆ.ಏಕೆಂದರೆ ಲೇ ಯಲ್ಲಿ ಆರ್ಮುಡ್ ಏರ್ ಡಿಫೆನ್ಸ್ನಲ್ಲಿ ಕ್ಯಾಪ್ಟನ್ ಆಗಿರುವ ಸುಪ್ರೀತಾ ಹಾಗೂ ಮದ್ರಾಸ್ ರೆಜಿಮೆಂಟ್ನಲ್ಲಿ ಮೇಜರ್ ಆಗಿರುವ ಜೆರಿ ಬ್ಲೇಜ್ ದಂಪತಿ ಗಣರಾಜ್ಯೋತ್ಸವ ಪರೇಡ್ನ ರಿಹರ್ಸಲ್ನಲ್ಲಿ ತೊಡಗಿಸಿಕೊಂಡಿದ್ದಾರೆ.
ಸುಪ್ರೀತಾ ಅವರು ಮೈಸೂರು ಸರ್ದಾರ್ ವಲ್ಲಬಾಯ್ ಪಟೇಲ್ ನಗರದ ನಿವಾಸಿ ಹಾಗೂ ತಲಕಾಡು ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಸಬ್ ಇನ್ಸ್ಪೆಕ್ಟರ್ ತಿರುಮಲೇಶ್ ಅವರ ಪುತ್ರಿ. ಒಂದರಿಂದ ಏಳನೇ ತರಗತಿವರೆಗೆ ಕೆ.ಆರ್. ನಗರದ ಸೆಂಟ್ ಜೋಸೆಫ್ ಶಾಲೆ, ಪಿಯುಸಿಯನ್ನು ಮೈಸೂರಿನ ಮರಿಮಲ್ಲಪ್ಪ ಕಾಲೇಜಿನಲ್ಲಿ ಓದಿದ್ದಾರೆ. ನಂತರ ಕುವೆಂಪುನಗರದಲ್ಲಿರುವ ಜೆಎಸ್ಎಸ್ ಕಾನೂನು ಕಾಲೇಜಿನಲ್ಲಿ ಬಿಬಿಎ ಎಲ್ಎಲ್ಬಿ ಪದವಿ ಗಳಿಸಿದರು. ಎನ್ಸಿಸಿ ಕೆಡೆಟ್ ಆಗಿದ್ದ ಅವರು 2016ರ ಗಣರಾಜ್ಯೋತ್ಸವ ಪರೇಡ್ನಲ್ಲಿಯೇ ಭಾಗವಹಿಸಿದ್ದರು. ನಂತರ ಪ್ರಸಾದ್ ಅವರ ಬಳಿ ಕಿರಿಯ ವಕೀಲರಾಗಿದ್ದರು. ನಂತರ ರಕ್ಷಣಾ ಇಲಾಖೆಯ ಪರೀಕ್ಷೆ ಬರೆದು 2021 ರಲ್ಲಿ ಆಯ್ಕೆಯಾದರು. ಮೊದಲಿಗೆ ಅನಂತನಾಗ್, ಜೋಧ್ಪುರ್ನಲ್ಲಿ ಕೆಲಸ ಮಾಡಿದರು.ಪ್ರಸ್ತುತ ಲೇ ಯಲ್ಲಿ ಕ್ಯಾಪ್ಟನ್ ಆಗಿದ್ದಾರೆ.ಬೆಂಗಳೂರಿನಲ್ಲಿ ನೆಲೆಸಿರುವ ನಿವೃತ್ತ ಕರ್ನಲ್ ರಿಚರ್ಡ್ ಬ್ಲೇಜ್, ನಿವೃತ್ತ ಲೆಫ್ಟಿನೆಂಟ್ ಕರ್ನಲ್ ವಿಜಯಲಕ್ಷ್ಮಿ ಅವರ ಪುತ್ರ ಜೆರಿ ಬ್ಲೇಜ್ ಅವರನ್ನು ಸುಪ್ರೀತಾ ವಿವಾಹವಾಗಿದ್ದಾರೆ.
ನಮ್ಮ ಮಗಳಿಗೆ ಗಣರಾಜ್ಯೋತ್ಸವ ಪರೇಡ್ನಲ್ಲಿ ಕಮಾಂಡರ್ ಆಗಿ ಕಾರ್ಯನಿರ್ವಹಿಸಬೇಕು ಎಂಬುದು ಬಹುದಿನಗಳ ಆಸೆ. ಮಗಳು- ಅಳಿಯು ಇಬ್ಬರು ತರಬೇತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಳಿಯ ಪರೇಡ್ನಲ್ಲಿ ಪಾಲ್ಗೊಳ್ಲುವುದು ಖಚಿತವಾಗಿದೆ. ಮಗಳದು ಇನ್ನೂ ಖಚಿತವಾಗಬೇಕಾಗಿದೆ ಎಂದು ಸುಪ್ರೀತಾ ಅವರ ತಂದೆ ತಿರುಮಲೇಶ್ ಶನಿವಾರ ಕನ್ನಡಪ್ರಭಕ್ಕೆ ತಿಳಿಸಿದರು.ಸುಪ್ರೀತಾ ನಮ್ಮ ಕಾಲೇಜಿನಲ್ಲಿ ಕಲಿಯುತ್ತಿರುವಾಗಲೇ ಅತ್ಯುತ್ತಮ ಎನ್ ಸಿಸಿ ಕೆಡೆಟ್ ಆಗಿ, ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಿದ್ದರು ಎಂದು ಜೆಎಸ್ಎಸ್ ಕಾನೂನು ಕಾಲೇಜಿನ ಸಿಇಒ ಪ್ರೊ.ಕೆ.ಎಸ್. ಸುರೇ ಸ್ಮರಿಸಿಕೊಂಡರು.