ಸಕಲ ಸರ್ಕಾರಿ ಗೌರವದೊಂದಿಗೆ ಸೂರಜ್‌ ಹೆಗ್ಡೆ ಅಂತ್ಯಕ್ರಿಯೆ

KannadaprabhaNewsNetwork |  
Published : Jun 10, 2026, 01:45 AM IST
ಅಂತ್ಯಕ್ರಿಯೆ | Kannada Prabha

ಸಾರಾಂಶ

ಹೃದಯಾಘಾತದಿಂದ ನಿಧನರಾದ ಎಐಸಿಸಿ ಕಾರ್ಯದರ್ಶಿ, ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಸೂರಜ್ ಹೆಗ್ಡೆ ಅವರಿಗೆ ಮಂಗಳವಾರ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿದಾಯ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೃದಯಾಘಾತದಿಂದ ನಿಧನರಾದ ಎಐಸಿಸಿ ಕಾರ್ಯದರ್ಶಿ, ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಸೂರಜ್ ಹೆಗ್ಡೆ ಅವರಿಗೆ ಮಂಗಳವಾರ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿದಾಯ ಸಲ್ಲಿಸಲಾಯಿತು.

ಭಾನುವಾರ ರಾತ್ರಿ ಹೃದಯಾಘಾತದಿಂದ ನಿಧನರಾದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸೂರಜ್ ಹೆಗ್ಡೆ ಅವರಿಗೆ ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ ಅವರು ಅಂತಿಮ ನಮನ ಸಲ್ಲಿಸಿದರು.

ಸೋಮವಾರ ಅಂತಿಮ ನಮನ ಸಲ್ಲಿಸಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ.ಹರಿಪ್ರಸಾದ್ ಸೇರಿ ಕಾಂಗ್ರೆಸ್ ಪಕ್ಷದ ಮುಖಂಡರು ಬಿಇಎಲ್ ರಸ್ತೆಯ ನಿವಾಸದಲ್ಲಿ ಅಂತಿಮ ವಿದಾಯ ಹೇಳಿದರು. ಬಳಿಕ ಹೆಬ್ಬಾಳದ ಶಾಂತಿಧಾಮ ರುದ್ರಭೂಮಿಯಲ್ಲಿ ಸೂರಜ್‌ ಹೆಗ್ಡೆ ಅವರ ಅಂತ್ಯ ಸಂಸ್ಕಾರ ನಡೆಯಿತು.

ಕುಟುಂಬಕ್ಕೆ ರಾಗಾ ಸಾಂತ್ವನ:

ರಾಹುಲ್ ಗಾಂಧಿ ಅವರು ಸೂರಜ್ ಹೆಗಡೆ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಪುಷ್ಪ ನಮನ ಸಲ್ಲಿಸಿದರು. ಸೂರಜ್ ಹೆಗ್ಡೆ ಅವರ ಪತ್ನಿ ಶಿಲ್ಪಾ, ಪುತ್ರರಾದ ಸಮೃಧ್, ವಿಶೃತ್ ಹಾಗೂ ಕುಟುಂಬ ಸದಸ್ಯರಿಗೆ ರಾಹುಲ್ ಗಾಂಧಿ ಅವರು ಕೈ ಹಿಡಿದು ಸಾಂತ್ವನ ಹೇಳಿ, ಧೈರ್ಯ ತುಂಬಿದರು.

ಸರ್ಕಾರಿ ಗೌರವ ಅರ್ಪಣೆ:

ಸೂರಜ್‌ ಹೆಗ್ಡೆ ಅವರು ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷರಾಗಿ ರಾಜ್ಯಖಾತೆ ಸಚಿವ ಸ್ಥಾನಮಾನ ಹೊಂದಿದ್ದರು. ಹೀಗಾಗಿ ಸರ್ಕಾರಿ ಗೌರವ ನೀಡಲು ಸರ್ಕಾರ ಮಾಡಿದ್ದ ಆದೇಶದಂತೆ ಸೂರಜ್ ಹೆಗ್ಡೆ ಅವರ ನಿವಾಸ ಬಳಿಯೇ ಸಕಲ ಸರ್ಕಾರಿ ಗೌರವ ಅರ್ಪಿಸಲಾಯಿತು.

ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಪೊಲೀಸ್ ಬಂದೂಕು ಪಡೆ ಗೌರವ ಸಲ್ಲಿಸಿತು. ಬಳಿಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೂರಜ್ ಅವರ ಪತ್ನಿ ಶಿಲ್ಪಾ ಅವರಿಗೆ ರಾಷ್ಟ್ರಧ್ವಜ ಹಸ್ತಾಂತರಿಸಿದರು. ಈ ವೇಳೆ ರಾಹುಲ್‌ಗಾಂಧಿ ಸೇರಿ ಕಾಂಗ್ರೆಸ್‌ ನಾಯಕರು ಭಾಗವಹಿಸಿದ್ದರು.

ಭಾವುಕರಾದ ಡಿಕೆಶಿ:

ಸರ್ಕಾರಿ ಗೌರವದ ಬಳಿಕ ಧ್ವಜ ಹಸ್ತಾಂತರದ ವೇಳೆ ಶಿಲ್ಪಾ ಸೂರಜ್‌ ಹೆಗಡೆ ಉಮ್ಮಳಿಸಿ ಬಂದ ದುಃಖ ತಾಳಲಾರದೇ ಬಿಕ್ಕಿ, ಬಿಕ್ಕಿ ಅತ್ತರು. ಈ ವೇಳೆ ವೇಳೆ ಭಾವುಕರಾದ ಡಿ.ಕೆ.ಶಿವಕುಮಾರ್ ಅವರು ಸಂತೈಸಿದರು. ಇದಕ್ಕೂ ಮೊದಲು ಅಂತಿಮ ಗೌರವ ಸಲ್ಲಿಸಲು ಆಗಮಿಸಿದ ರಾಹುಲ್‌ಗಾಂಧಿ ಅವರನ್ನು ದೇವನಹಳ್ಳಿ ವಿಮಾನ ನಿಲ್ದಾಣದಿಂದ ಬರಮಾಡಿಕೊಂಡ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಅವರು ರಾಹುಲ್‌ಗಾಂಧಿ ಜತೆಗೆ ಒಂದೇ ಕಾರಿನಲ್ಲಿ ಬಿಇಎಲ್‌ ಬಳಿಗೆ ಆಗಮಿಸಿದರು. ಅಂತಿಮ ನಮನದ ನಂತರ ಮತ್ತೆ ವಿಮಾನ ನಿಲ್ದಾಣಕ್ಕೆ ತೆರಳಿ ಬೀಳ್ಕೊಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಿಂಗ ತಾರತಮ್ಯದ ವಿರುದ್ಧ ಒಕ್ಕೊರಲಿನ ಹೋರಾಟ ಅಗತ್ಯ
4 ವಿಧಗಳಲ್ಲಿ ತ್ಯಾಜ್ಯ ವಿಂಗಡಿಸದಿದ್ದರೆ ಪ್ರಕರಣ ದಾಖಲಿಸಿ ದಂಡ