ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಕಂಠಾಪುರದಲ್ಲಿ ಕಲುಷಿತ ನೀರು ಸೇವನೆ ಶಂಕೆ: 44 ಜನರು ಅಸ್ವಸ್ಥ

KannadaprabhaNewsNetwork | Published : Apr 24, 2024 2:18 AM

ಹೊಸದುರ್ಗ ತಾಲೂಕಿನ ಕಂಠಾಪುರ ಗ್ರಾಮದ 44 ಜನರಿಗೆ ಗಂಟಲು ನೋವು, ತಲೆನೋವು, ಜ್ವರ ಕಾಣಿಸಿಕೊಂಡಿದ್ದು, ಸಂಚಾರಿ ಆರೋಗ್ಯ ಘಟಕ ಹಾಗೂ ಆರ್.ಬಿ.ಎಸ್.ಕೆ ತಂಡದಿಂದ ಸೋಮವಾರ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಆರಂಭಿಸಿ ಚಿಕಿತ್ಸೆ ನೀಡಲಾಯಿತು.

ಕನ್ನಡಪ್ರಭವಾರ್ತೆ ಹೊಸದುರ್ಗ

ತಾಲೂಕಿನ ಕಂಠಾಪುರ ಗ್ರಾಮದ 44 ಜನರಿಗೆ ಗಂಟಲು ನೋವು, ತಲೆನೋವು, ಜ್ವರ ಕಾಣಿಸಿಕೊಂಡು ಅಸ್ವಸ್ಥರಾಗಿದ್ದು, ಸಂಚಾರಿ ಆರೋಗ್ಯ ಘಟಕ ಹಾಗೂ ಆರ್.ಬಿ.ಎಸ್.ಕೆ ತಂಡದಿಂದ ಸೋಮವಾರ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಆರಂಭಿಸಿ ಚಿಕಿತ್ಸೆ ನೀಡಲಾಯಿತು.

ಭಾನುವಾರ 7 ಮಂದಿ ಗಂಟಲು ಹಾಗೂ ತಲೆ ನೋವಿನಿಂದ ಜಾನಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದರು. ಸೋಮವಾರ ದಿಢೀರನೆ ಮತ್ತೆ 37 ಜನರ ಆರೋಗ್ಯದಲ್ಲಿ ಏರುಪೇರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.ಮಾಹಿತಿ ತಿಳಿದು ಸ್ಥಳಕ್ಕೆ ಬಂದ ತಾಲೂಕು ಹಾಗೂ ಜಿಲ್ಲಾ ಆರ್.ಆರ್.ಟಿ ತಂಡದವರು ಎರಡು ತಂಡಗಳನ್ನು ರಚಿಸಿ ಗ್ರಾಮದಲ್ಲಿ ಜ್ವರ ಕಾಣಿಸಿಕೊಂಡಿ ರುವುದರ ಹಿಂದಿನ ಕಾರಣ ಪತ್ತೆ ಹಚ್ಚಲು ಮುಂದಾಗಿದ್ದಾರೆ. ಕುಡಿಯುವ ನೀರಿನ ಬೋರ್‌ವೆಲ್‌ ಪಕ್ಕದಲ್ಲಿ ಮತ್ತು ಮೂರು ಕಡೆಗಳಲ್ಲಿ ಪೈಪ್‌ಲೈನ್ ಸೋರಿಕೆಯಾಗಿದ್ದು, ದುರಸ್ತಿ ಕಾರ್ಯ ನಡೆಯುತ್ತಿದೆ. ಗ್ರಾಮದ ನೀರಿನ ಮಾದರಿ ಹಾಗೂ ಜನರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ರೋಗಕ್ಕೆ ಕಾರಣ ತಿಳಿಯಬಹುದು. ಶುದ್ಧ ಕುಡಿಯುವ ನೀರು, ಪರಿಶುದ್ಧ ಆಹಾರ ಸೇವನೆ ಕುರಿತು ಕರಪತ್ರದ ಮೂಲಕ ಜನರಿಗೆ ಮಾಹಿತಿ ನೀಡಲಾಗಿದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ವೀರೇಂದ್ರ ಪಾಟೀಲ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಸಿಎಂಡಿ ವಿಭಾಗದ ಗಂಗಾಧರ್ ರೆಡ್ಡಿ, ಸಿರೀಶ್, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳ ಕಚೇರಿ ಮೇಲ್ವಿಚಾರಕರಾದ ವಿಶ್ವನಾಥ್, ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ಸಿದ್ದರಾಮಪ್ಪ ಹಾಗೂ ಮಲ್ಲಿಕಾರ್ಜುನ್, ಡಿಎಂಒ ಕಚೇರಿಯ ನಾಗರಾಜ್, ಆರ್.ಬಿ.ಎಸ್.ಕೆ ವೈದ್ಯೆ ಚೈತ್ರಾ, ಸಂಚಾರಿ ಆರೋಗ್ಯ ಘಟಕದ ವೈದ್ಯೆ ತುಳಸಿ ಮತ್ತು ತಂಡದವರು, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.