ಶಂಕಿತ ನಕ್ಸಲ್‌ ಕೃಷ್ಣಮೂರ್ತಿ ಕೋರ್ಟ್‌ಗೆ: 2 ಪ್ರಕರಣ ವಿಚಾರಣೆ

KannadaprabhaNewsNetwork |  
Published : Feb 01, 2024, 02:05 AM IST
ಫೊಟೋ: 31ಎಸ್‌ಎಂಜಿಕೆಪಿ08ಶಿವಮೊಗ್ಗ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಬುಧವಾರ ಶಂಕಿತ ನಕ್ಸಲ್‌ ಕೃಷ್ಣಮೂರ್ತಿಯನ್ನು ತೀರ್ಥಹಳ್ಳಿ ಪೊಲೀಸರು ಕರೆ ತಂದಿದ್ದರು.  | Kannada Prabha

ಸಾರಾಂಶ

ಕೇರಳ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಮಾವೋವಾದಿ ಶಂಕಿತ ನಕ್ಸಲ್‌ ಕೃಷ್ಣಮೂರ್ತಿಯನ್ನು ತೀರ್ಥಹಳ್ಳಿ ಪೊಲೀಸರು ಶಿವಮೊಗ್ಗ ಜಿಲ್ಲಾ ಸತ್ರ ನ್ಯಾಯಾಲಯ ಎದುರು ಬುಧವಾರ ಹಾಜರುಪಡಿಸಿದರು. ಕೇರಳದ ತ್ರಿಶೂರ್ ಜಿಲ್ಲೆಯ ವಿಯೂರ್ ಜೈಲಿನಿಂದ ಮಂಗಳವಾರ ರಾತ್ರಿ ಬಿ.ಜಿ. ಕೃಷ್ಣಮೂರ್ತಿಯನ್ನು ಶಿವಮೊಗ್ಗಕ್ಕೆ ಪೊಲೀಸರು ಕರೆತಂದಿದ್ದಾರೆ. ಬುಧವಾರ ಬೆಳಗ್ಗೆ ಕಲಾಪ ಆರಂಭ ಆಗುತ್ತಿದ್ದಂತೆ ಪೊಲೀಸರು 2007ರಲ್ಲಿ ಹೊಸಗದ್ದೆಯಲ್ಲಿ ಬಸ್ ಸುಟ್ಟ ಪ್ರಕರಣ, 2009ರಲ್ಲಿ ಅರಣ್ಯ ಗೇಟ್ ಧ್ವಂಸ ಹಾಗೂ ಬಿದರಗೋಡು ಅರುಣಕುಮಾರ್ ಮನೆಯಲ್ಲಿ ಜೀಪ್ ಸುಟ್ಟು ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕೇರಳ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಮಾವೋವಾದಿ ಶಂಕಿತ ನಕ್ಸಲ್‌ ಕೃಷ್ಣಮೂರ್ತಿಯನ್ನು ತೀರ್ಥಹಳ್ಳಿ ಪೊಲೀಸರು ಶಿವಮೊಗ್ಗ ಜಿಲ್ಲಾ ಸತ್ರ ನ್ಯಾಯಾಲಯ ಎದುರು ಬುಧವಾರ ಹಾಜರುಪಡಿಸಿದರು.

ಕೇರಳದ ತ್ರಿಶೂರ್ ಜಿಲ್ಲೆಯ ವಿಯೂರ್ ಜೈಲಿನಿಂದ ಮಂಗಳವಾರ ರಾತ್ರಿ ಬಿ.ಜಿ. ಕೃಷ್ಣಮೂರ್ತಿಯನ್ನು ಶಿವಮೊಗ್ಗಕ್ಕೆ ಪೊಲೀಸರು ಕರೆತಂದಿದ್ದಾರೆ. ಬುಧವಾರ ಬೆಳಗ್ಗೆ ಕಲಾಪ ಆರಂಭ ಆಗುತ್ತಿದ್ದಂತೆ ಪೊಲೀಸರು 2007ರಲ್ಲಿ ಹೊಸಗದ್ದೆಯಲ್ಲಿ ಬಸ್ ಸುಟ್ಟ ಪ್ರಕರಣ, 2009ರಲ್ಲಿ ಅರಣ್ಯ ಗೇಟ್ ಧ್ವಂಸ ಹಾಗೂ ಬಿದರಗೋಡು ಅರುಣಕುಮಾರ್ ಮನೆಯಲ್ಲಿ ಜೀಪ್ ಸುಟ್ಟು ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿ ಸಲ್ಲಿಸಿದರು.

ಮೂರು ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಮಂಜುನಾಥ್ ನಾಯಕ್‌ ಅವರು ಬಸ್ ಸುಟ್ಟ ಪ್ರಕರಣ ಹಾಗೂ ಅರಣ್ಯ ಗೇಟ್‌ ಧ್ವಂಸ ಪ್ರಕರಣ ವಿಚಾರಣೆ ನಡೆಸಿದರು. ಜೀಪ್‌ ಸುಟ್ಟ ಪ್ರಕರಣ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದರು. ಅಲ್ಲದೇ, ಅನಾರೋಗ್ಯದ ಹಿನ್ನೆಲೆ ಕೃಷ್ಣಮೂರ್ತಿಗೆ ಜೈಲಿನಲ್ಲಿ ಚಿಕಿತ್ಸೆ ನೀಡಲು ಕೋರ್ಟ್‌ ಅವಕಾಶ ನೀಡಿದೆ. ಸರ್ಕಾರ ಪರವಾಗಿ ಅಭಿಯೋಜಕ ಸುರೇಶ್ ವಾದ ಮಂಡಿಸಿದರು. ಆರೋಪಿ ಪರ ಕೆ.ಪಿ.ಶ್ರೀಪಾಲ್ ವಾದ ಮಂಡಿಸಿದರು.

2021ರ ನವೆಂಬರ್‌ನಲ್ಲಿ ಕೇರಳ ಪೊಲೀಸರಿಂದ ಬಂಧಿತನಾಗಿದ್ದ ಬಿ.ಜಿ. ಕೃಷ್ಣಮೂರ್ತಿ ಕೇರಳದ ತ್ರಿಶೂರ್ ಜಿಲ್ಲೆಯ ವಿಯೂರ್ ಜೈಲಿನಲ್ಲಿದ್ದರು. ಮಂಗಳವಾರ ರಾತ್ರಿ ಶಿವಮೊಗ್ಗಕ್ಕೆ ಬಾಡಿ ವಾರಂಟ್‌ ಮೇಲೆ ಕರೆ ತಂದಿದ್ದ ತೀರ್ಥಹಳ್ಳಿ ಪೊಲೀಸರು ಬಿಗಿ ಬಂದೋಬಸ್ತ್‌ನಲ್ಲಿ ಕೋರ್ಟ್‌ಗೆ ಹಾಜರುಪಡಿಸಿದರು.

ಕಿಕ್ಕಿರಿದ ನ್ಯಾಯಾಲಯ:

ಬಿ.ಜಿ. ಕೃಷ್ಣಮೂರ್ತಿ ನ್ಯಾಯಾಲಯಕ್ಕೆ ಹಾಜರಾಗುವ ಬಗ್ಗೆ ಮೊದಲೇ ತಿಳಿದಿದ್ದರಿಂದ ಬುಧವಾರ ಶಿವಮೊಗ್ಗ ನ್ಯಾಯಾಲಯ ಆವರಣ ಕಿಕ್ಕಿರಿದಿತ್ತು. ಶಿವಮೊಗ್ಗದಲ್ಲಿ ಕಾನೂನು ಪದವಿ ಪಡೆದಿದ್ದ ಕೃಷ್ಣಮೂರ್ತಿ ಕೆಲವರ್ಷ ಶಿವಮೊಗ್ಗದಲ್ಲಿ ಪತ್ರಕರ್ತನಾಗಿ, ಪ್ರಗತಿ ಪರ ಸಂಘಟನೆಗಳಲ್ಲಿ ಕೆಲಸ ಮಾಡಿದ್ದರಿಂದ ಅವರನ್ನು ನೋಡಲು ಪರಿಚಿತರು ನ್ಯಾಯಾಲಯಕ್ಕೆ ಬಂದಿದ್ದರು. ಪೋಲಿಸ್ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು.

ಬಿ.ಜಿ.ಕೆ. ವಿರುದ್ಧ ಇರುವ ಪ್ರಕರಣಗಳಿವು:

ತೀರ್ಥಹಳ್ಳಿ ಠಾಣೆಯ ಅಪರಾಧ ಸಂಖ್ಯೆ 94/06, 174/07, ಆಗುಂಬೆ ಪೊಲೀಸ್ ಠಾಣೆಯ 12/09, 51/09 ಹಾಗೂ 03/12 ಪ್ರಕರಣಗಳಲ್ಲಿ ಬಿಜಿಕೆ ಆರೋಪಿಯಾಗಿದ್ದಾನೆ. ಎನ್‌ಕೌಂಟರ್‌ನಲ್ಲಿ ಹತನಾದ ಸಾಕೇತ್ ರಾಜನ್ ಬಳಿಕ ನಕ್ಸಲ್ ನಾಯಕನಾಗಿ ಗುರುತಿಸಿಕೊಂಡಿದ್ದ ಬಿ.ಜಿ.ಕೃಷ್ಣಮೂರ್ತಿ, 2021ರ ನವೆಂಬರ್‌ನಲ್ಲಿ ಕೇರಳ ಪೊಲೀಸರಿಂದ ಬಂಧಿತನಾಗಿದ್ದ. ಚಿಕ್ಕಮಗಳೂರು ಜಿಲ್ಲೆಯ ನೆಮ್ಮಾರು ಬುಕ್ಕಡಿಬೈಲ್ ಗ್ರಾಮದ ಬಿ.ಜಿ.ಕೃಷ್ಣಮೂರ್ತಿ ವಿರುದ್ದ ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾದ 5 ಕೇಸ್‌ಗಳಲ್ಲೂ ಪ್ರಮುಖ ಆರೋಪಿಯಾಗಿದ್ದಾನೆ.

ತೀರ್ಥಹಳ್ಳಿ ಪೊಲೀಸ್ ಠಾಣೆಯ ಕೇಸ್ ನಂ 94/06ರಲ್ಲಿ ಬಿಜಿಕೆ ಎ-2 ಆರೋಪಿಯಾಗಿದ್ದಾನೆ. ಆಗುಂಬೆ ಸಮೀಪದ ಉಳ್ಮಡಿ ಗ್ರಾಮದ ತಿಮ್ಮಪ್ಪ ಗೌಡ ಎಂಬವರಿಗೆ ಬೆದರಿಕೆ ಹಾಕಲಾಗಿತ್ತು. ಗದ್ದೆಯಲ್ಲಿ ನೀರಿನ ಕಾಲುವೆ ಬಿಡುವಂತೆ 2006 ಮಾರ್ಚ್ 17ರಂದು ಮನೆಗೆ ಬಂದಿದ್ದ ನಕ್ಸಲ್ ಗ್ಯಾಂಗ್ ಜೀವ ಬೆದರಿಕೆ ಹಾಕಿತ್ತು. ಕಾಲುವೆ ಬಿಡದಿದ್ದರೆ ಜೀವ ತೆಗೆಯುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಾಗಿತ್ತು.

ತೀರ್ಥಹಳ್ಳಿ ಪೊಲೀಸ್ ಠಾಣೆಯ ಕೇಸ್ ನಂ 174/07ರಲ್ಲಿ, ಸರ್ಕಾರಿ ಬಸ್‌ಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಎ-3 ಆರೋಪಿಯಾಗಿದ್ದಾನೆ. ತೀರ್ಥಹಳ್ಳಿಯ ತಲ್ಲೂರಂಗಡಿ ಬಳಿ 2007ರ ಜುಲೈ 1ರಂದು ಬೆಂಗಳೂರಿಗೆ ಹೋಗುತ್ತಿದ್ದ ಕೆಎಸ್ಆರ್‌ಟಿಸಿ ಬಸ್ಸಿಗೆ ಡಿಸೇಲ್ ಸುರಿದು ಬೆಂಕಿ ಹಚ್ಚಿದ್ದರು. ಮಾವೋವಾದಿ ಜಿಂದಾಬಾದ್- ನಕ್ಸಲೈಟ್ ಜಿಂದಾಬಾದ್ ಎಂದು ಕೂಗುತ್ತಿದ್ದ ಗ್ಯಾಂಗ್, ಪೊಲೀಸರು- ಪತ್ರಿಕೆಯವರಿಗೆ ಕೊಡುವಂತೆ ಬಸ್‌ನಲ್ಲಿದ್ದವರಿಗೆ ಕರಪತ್ರ ಕೊಟ್ಟಿತ್ತು.

ಆಗುಂಬೆ ಠಾಣೆಯ ಕೇಸ್ ನಂ. 12/09ರಲ್ಲಿ, ಬಿಜಿಕೆ ಎ-1 ಆರೋಪಿಯಾಗಿದ್ದಾನೆ. ತೀರ್ಥಹಳ್ಳಿಯ ಬಿದರಗೋಡು ಗ್ರಾಮದ ಬಿ.ಕೆ.ಅರುಣ್ ಕುಮಾರ್ ಮನೆ ಮೇಲೆ 2009ರ ಫೆಬ್ರವರಿ 1ರ ರಾತ್ರಿ 10 ಗಂಟೆಗೆ 8 ಜನರ ತಂಡ ದಾಳಿ ಮಾಡಿತ್ತು. ಅರುಣ್ ಅವರ ಪತ್ನಿಯನ್ನು ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದರು. ಸಿಂಗಲ್ ಬ್ಯಾರಲ್ ಮತ್ತು ಡಬ್ಬಲ್ ಬ್ಯಾರಲ್ ಗನ್ ತೋರಿಸಿ, ₹1000 ಕೊಂಡೊಯ್ದಿದ್ದ ಗ್ಯಾಂಗ್, ಅಡಕೆ ಚೀಲ, ಸೋಫಾ ಹಾಗೂ ಬಜಾಜ್ ಬೈಕನ್ನು ಡಿಸೇಲ್ ಹಾಕಿ ಸುಟ್ಟಿತ್ತು.

ಆಗುಂಬೆ ಠಾಣೆಯ ಕೇಸ್ ನಂ. 51/09ರಲ್ಲಿ ಎ-1 ಆರೋಪಿಯಾಗಿದ್ದಾನೆ. ಇದರಲ್ಲಿ ಬಂಧಿತ ಆರೋಪಿಗಳ ಮಾಹಿತಿ ಅನುಸಾರ ಸ್ಥಳ ಪರಿಶೀಲನೆ ಮಾಡಿ ಹಲವು ವಸ್ತುಗಳನ್ನು ಪೊಲೀಸರು ಸೀಜ್ ಮಾಡಿದ್ದರು. ಉಳ್ಮಡಿ ಸಮೀಪದ ನೆಕರ್ಕೆ ಗುಡ್ಡ ಹಾಗೂ ಮಾಕೋಡು ದಟ್ಟಾರಣ್ಯದಲ್ಲಿ ಮಾವೋವಾದಿ ಸಂಘಟನೆಯ ಪುಸ್ತಕಗಳು, 9ಎಂಎಂ ಬಂದೂಕು, ಡಿಟೋನೇಟರ್, ಮೂರು 303 ರೈಫಲ್‌ನ 40 ಜೀವಂತ ಗುಂಡು, 7.62 ಎಂಎಂನ 70 ಜೀವಂತ ಗುಂಡು, 9 ಎಂಎಂನ 20 ಜೀವಂತ ಗುಂಡು ವಶಪಡಿಸಿಕೊಳ್ಳಲಾಗಿತ್ತು. 2009ರ ಮೇ 30ರಂದು ಎ-3 ಸುರೇಶ್ ನಾಯ್ಕ್, ಎ-4 ಸರೋಜಾ ಮಾಹಿತಿ ಮೇರೆಗೆ ಶೋಧ ನಡೆಸಲಾಗಿತ್ತು.

ಆಗುಂಬೆ ಠಾಣೆಯ ಕೇಸ್ ನಂ- 03/12ರಲ್ಲಿ ಬಿಜಿಕೆ ಎ-2 ಆರೋಪಿ. ಮಲ್ಲಂದೂರು ಬಳಿ ಎಎನ್ಎಫ್ ತಂಡ ಕೂಂಬಿಂಗ್ ನಡೆಸುತ್ತಿದ್ದ ವೇಳೆ ನಕ್ಸಲರು ಗುಂಡು ಹಾರಿಸಿದ್ದರು. 2012ರ ಜನವರಿ 6ರಂದು ಆಗುಂಬೆ ನಕ್ಸಲ್ ಕ್ಯಾಂಪ್‌ನ ಡಿಆರ್‌ಪಿಐ ವೆಂಕಟೇಶಪ್ಪ ನೇತೃತ್ವದಲ್ಲಿ ಹೋಗಿದ್ದ ತಂಡದ ಕಾರ್ಯಾಚರಣೆ ವೇಳೆ ನಕ್ಸಲರು ಕಾಣಿಸಿಕೊಂಡಿದ್ದು, ಈ ವೇಳೆ ಬೆನ್ನುಹತ್ತಿದ್ದ ಎಎನ್ಎಫ್ ತಂಡದ ಮೇಲೆ ಗುಂಡು ಹಾರಿಸಿದ್ದಕ್ಕಾಗಿ ಪ್ರಕರಣ ದಾಖಲಾಗಿದೆ.

- - - ಕೋಟ್ ಬಿ.ಜಿ.ಕೃಷ್ಣಮೂರ್ತಿ ಅವರ ವಿರುದ್ಧ ಸುಮಾರು 62 ಪ್ರಕರಣಗಳಿವೆ. ಕೇರಳದಲ್ಲಿ 4, ಬೆಂಗಳೂರಿನಲ್ಲಿ 18, ಉಡುಪಿ, ಕಾರ್ಕಳ, ಶೃಂಗೇರಿ, ತೀರ್ಥಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. 2007, 2009 ಮತ್ತು 2021ರ 3 ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರನ್ನು ಶಿವಮೊಗ್ಗದ ನ್ಯಾಯಾಲಯಕ್ಕೆ ಹಾಜರಪಡಿಸಲಾಗಿತ್ತು. ವಿಚಾರಣೆ ಬಳಿಕ ಶಿವಮೊಗ್ಗ ಕಾರಾಗೃಹಕ್ಕೆ ಅವರನ್ನು ಕರೆದೊಯ್ದಿದ್ದು, ಗುರುವಾರ ವಿಚಾರಣೆ ಮುಂದುವರಿಯಲಿದೆ

- ಕೆ.ಪಿ.ಶ್ರೀಪಾಲ್, ಬಿ.ಜಿ.ಕೆ. ಪರ ವಕೀಲ

- - - -31ಎಸ್‌ಎಂಜಿಕೆಪಿ08:

ಶಂಕಿತ ನಕ್ಸಲ್‌ ಕೃಷ್ಣಮೂರ್ತಿಯನ್ನು ತೀರ್ಥಹಳ್ಳಿ ಪೊಲೀಸರು ಬುಧವಾರ ಪ್ರಕರಣಗಳ ವಿಚಾರಣೆಗಾಗಿ ಶಿವಮೊಗ್ಗ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಡಾನೆ ದಾಳಿಗೆ ಸೋಲಾರ್‌ ತಂತಿ ಬೇಲಿ ಹಾನಿ
ದೀಪ ಬೆಳಗಿ ಮನೆ-ಮನದ ಕತ್ತಲನ್ನು ಹೋಗಲಾಡಿಸಿ: ಕಮಲಾಕ್ಷಿ