ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸುಂಟಿಕೊಪ್ಪ ಪೌರಕಾರ್ಮಿಕರ 3 ಪ್ರಮುಖ ಸಮಸ್ಯೆಗಳನ್ನು ಈಡೇರಿಸಲು ಸೆ.22 ರ ಗಡುವು ನೀಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ (ಸಿಐಟಿಯು) ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಎಚ್ಚರಿಕೆ ನೀಡಿದ್ದಾರೆ.ಪೌರ ಕಾರ್ಮಿಕರು ತಮ್ಮ ಅನುಮೋದನೆಗಾಗಿ ಹಾಗೂ ಕನಿಷ್ಠ ವೇತನಕ್ಕಾಗಿ ಆಗ್ರಹಿಸಿ ಬುಧವಾರ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಸಾಂಕೇತಿಕವಾಗಿ ಧರಣಿ ನಡೆಸಿ ಮಾತನಾಡಿದರು.ಪೌರಕಾರ್ಮಿಕರ ಸೇವೆಯನ್ನು ಖಾಯಂಗೊಳಿಸುವ ಅಧಿಕಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಇದೆ. ಆದರೆ ಅವರು ಸಬೂಬುಗಳನ್ನು ಹೇಳುತ್ತ ಕಾಲ ವಿಳಂಬ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಖಾಯಂಗೊಳಿಸುವ ಆದೇಶಕ್ಕೆ ಸೆಪ್ಟೆಂಬರ್ 21 ರೊಳಗೆ ಅನುಮೋದನೆ ನೀಡದಿದ್ದಲ್ಲಿ ಸೆ.22 ರ ಸೋಮವಾರ ದಂದು ಪೌರಕಾರ್ಮಿಕರೆಲ್ಲರೂ ಸ್ವಚ್ಛತಾಗಾರರು ಹಾಗೂ ನೀರುಗಂಟಿ ಕೆಲಸ ನಿರ್ವಹಿಸುವವರು ಒಂದು ದಿನದ ಸಾಂಕೇತಿಕ ಮುಷ್ಕರವನ್ನು ಮಾಡಲಿದ್ದೇವೆ. ಒಂದು ವೇಳೆ ಅನುಮೋದನೆ ದೊರೆಯದಿದ್ದಲ್ಲಿ ಅನಿರ್ದಿಷ್ಟವಧಿ ಮುಷ್ಕರಕ್ಕೆ ಮುಂದಾಗಲಿದ್ದೇವೆ ಎಂದು ಭರತ್ ಎಚ್ಚರಿಕೆ ನೀಡಿದರು.ಕೊಡಗು ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ಮಂದಿಯ ಅನುಮೋದನೆಗಳು ಬಾಕಿ ಉಳಿದುಕೊಂಡಿದೆ. ಸುಂಟಿಕೊಪ್ಪ 3 ಮಂದಿಯ ನೇಮಕಾತಿ ಮಾತ್ರಗೊಂಡಿದೆ ಎಂದರು.ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಹೆಚ್ಚಿನ ಆದಾಯವಿದ್ದು, ಸ್ವಚ್ಛತಾಗಾರ ಮತ್ತು ನೀರು ಗಂಟಿ, ಕಚೇರಿ ಸಿಬ್ಬಂದಿ ಕನಿಷ್ಠ ವೇತನ ಹೆಚ್ಚಳಗೊಳಿಸುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಉಪ್ಪಿನಿಂದ ಹಿಡಿದು ಕರ್ಪೂರದವರೆಗೂ ಸಾಮಾಗ್ರಿಗಳ ಬೆಲೆ ಗಗನಕ್ಕೇರಿದ್ದು, ಕೂಲಿ ವೇತನಗಳು ಕನಿಷ್ಠ ವೇತನ 31 ಸಾವಿರ ರು. ವೇತನ ಕನಿಷ್ಠ 23 ಸಾವಿರ ಅಥವಾ 21 ಸಾವಿರ ವೇತನವನ್ನು ನೀಡಬೇಕೆಂಬ ಎಂಬ ಆದೇಶವಿದ್ದರೂ ಈ ಪಂಚಾಯಿತಿಯಿಂದ ನೀಡಲಾಗುತ್ತಿಲ್ಲ ಎಂದು ಭರತ್ ದೂರಿಕೊಂಡರು. ಗ್ರಾಮ ಪಂಚಾಯಿತಿ ಕಾರ್ಮಿಕ ವೀರಭದ್ರ ಮಾತನಾಡಿ, ಸೆ. 22ರಂದು ಕಾರ್ಮಿಕರ ಧರಣಿಯು ನಡೆಯುವ ಹಿನ್ನೆಲೆಯಲ್ಲಿ ಸ್ವಚ್ಛತಾ ಕಾರ್ಯ, ನೀರು ಗಂಟಿಗಳ ಕಾರ್ಯ ಸೇರಿದಂತೆ ಇತರ ಕೆಲಸವನ್ನು ಸ್ಥ ಗಿತಗೊಳಿಸಲಾಗುವುದು. ಅಂದು ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿಕೊಂಡರು.ಪೌರಕಾರ್ಮಿಕರಿಗೆ ಮನೆ ಮತ್ತು ಕನಿಷ್ಠ ವೇತನ ಕೂಡ ಲಭ್ಯವಾಗುತ್ತಿಲ್ಲ. ಈ ಬೇಡಿಕೆಗಳನ್ನು ಸೇರಿಸಿಕೊಂಡು ಸೆ.22 ರ ಸಾಂಕೇತಿಕ ಮುಷ್ಕರವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ಈ ಸಂದರ್ಭ ಧರಣಿ ವೇಳೆ, ರಂಗಸ್ವಾಮಿ, ಗಾಯತ್ರಿ, ಮಣಿಕಂಠ, ಮುನಿಸ್ವಾಮಿ, ರಾಮಚಂದ್ರ, ವಿಶ್ವ, ರವಿ, ರಾಜ, ಮುರುಗೇಶ್, ರಮೇಶ, ಸಣ್ಣ, ಚಂದ್ರ ಮಣಿ. ಉಪಸ್ಥಿತರಿದ್ದರು.