ಮೈಕ್ರೋ ಫೈನಾನ್ಸ್‌ಗಳ ಗೂಂಡಾಗಿರಿ ವಿರುದ್ಧ ಕ್ರಮ ಕೈಗೊಳ್ಳಿ: ಎಚ್‌.ಸಿ.ಮಲ್ಲಪ್ಪ

KannadaprabhaNewsNetwork |  
Published : Jan 30, 2025, 12:30 AM IST
29ಕೆಡಿವಿಜಿ4-ದಾವಣಗೆರೆಯಲ್ಲಿ ಬುಧವಾರ ಕರ್ನಾಟಕ ರಾಜ್ಯ ಶೋಷಿತ ಸಮುದಾಯ ಹಿತರಕ್ಷಣ ಸಮಿತಿ ಜಿಲ್ಲಾಧ್ಯಕ್ಷ ಎಚ್.ಸಿ.ಮಲ್ಲಪ್ಪ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಆರ್‌ಬಿಐ ನಿಯಮ ಮೀರಿ ಸಾಲ ವಸೂಲು ಮಾಡುತ್ತಿರುವ ಮೈಕ್ರೋ ಫೈನಾನ್ಸ್‌ಗಳ ವಿರುದ್ಧ ಸರ್ಕಾರಗಳು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಆ ಮೂಲಕ ಜನರ ಜೀವ ಉಳಿಸುವಂತೆ ಕರ್ನಾಟಕ ರಾಜ್ಯ ಶೋಷಿತ ಸಮುದಾಯ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಎಚ್.ಸಿ.ಮಲ್ಲಪ್ಪ ದಾವಣಗೆರೆಯಲ್ಲಿ ಒತ್ತಾಯಿಸಿದ್ದಾರೆ.

- ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಸಾಲ ನೀಡಿಕೆ ಸರಳೀಕರಿಸಲು ಒತ್ತಾಯ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಆರ್‌ಬಿಐ ನಿಯಮ ಮೀರಿ ಸಾಲ ವಸೂಲು ಮಾಡುತ್ತಿರುವ ಮೈಕ್ರೋ ಫೈನಾನ್ಸ್‌ಗಳ ವಿರುದ್ಧ ಸರ್ಕಾರಗಳು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಆ ಮೂಲಕ ಜನರ ಜೀವ ಉಳಿಸುವಂತೆ ಕರ್ನಾಟಕ ರಾಜ್ಯ ಶೋಷಿತ ಸಮುದಾಯ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಎಚ್.ಸಿ.ಮಲ್ಲಪ್ಪ ಒತ್ತಾಯಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್‌ಗಳು ಸಾಲ ವಸೂಲಿ ಭರದಲ್ಲಿ ಭಾರತೀಯ ಕಾಲ ಪರಿಮಿತಿ ಅಧಿನಿಯಮ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ, ಸಾಲ ಪಡೆದ ಕುಟುಂಬಗಳಿಗೆ ಇನ್ನಿಲ್ಲದ ತೊಂದರೆ ನೀಡುತ್ತಿವೆ ಎಂದು ಟೀಕಿಸಿದರು.

ಮೈಕ್ರೋ ಫೈನಾನ್ಸ್ ವ್ಯಾಪ್ತಿಗೆ ಬರುವ ಸಂಘಗಳು, ಗ್ರಾಮೀಣ ಮಹಿಳೆಯರನ್ನು ಒಂದುಗೂಡಿಸಿ, ಗುಂಪು ಮಾಡುವ ಮೂಲಕ ಸಾಲ ನೀಡಲಾಗುತ್ತದೆ. ಒಂದು ತಿಂಗಳ ಕಂತನ್ನು ಗುಂಪಿನ ಯಾರೇ ಒಬ್ಬ ಸದಸ್ಯರು ಕಟ್ಟದಿದ್ದರೂ, ಉಳಿದವರು ಅದನ್ನು ಕಟ್ಟಬೇಕು. ಸಾಲ, ಕಂತು ವಸೂಲು ಮಾಡುವ ಮೈಕ್ರೋ ಫೈನಾನ್ಸ್ ಅಧಿಕಾರಿ, ಸಿಬ್ಬಂದಿ ಒತ್ತಡ ಹೇರಿ, ಹೆದರಿಸಿ, ಬೆದರಿಸಿ ಹಣ ವಸೂಲು ಮಾಡುವುದನ್ನು ಮೊದಲು ನಿಲ್ಲಿಸಬೇಕು ಎಂದರು.

ರಾಜ್ಯದ ಅನೇಕ ಕಡೆ ಮೈಕ್ರೋ ಫೈನಾನ್ಸ್‌ಗಳ ಸಾಲ ವಸೂಲಿ ಮಾಡುವವರ ಹಿಂಸೆ ತಾಳಲಾರದೇ ಊರುಬಿಟ್ಟು ಹೋದವರ ಬಗ್ಗೆ, ಸಾಲ ವಸೂಲಿ ಮಾಡುವವರ ಹಿಂಸೆ, ಮಾಡಿದ ಅವಮಾನ ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಮುಖ್ಯಮಂತ್ರಿ ಅಧ್ಯಕ್ಷತೆಯ ಸಚಿವ ಸಂಪುಟ ಸಭೆಯಲ್ಲೂ ಮೈಕ್ರೋ ಫೈನಾನ್ಸ್‌ಗಳ ದೌರ್ಜನ್ಯ, ಶೋಷಣೆ ತಡೆಯುವ ಬಗ್ಗೆ ಗಂಭೀರ ಚರ್ಚೆಯಾಗಿದ್ದು ಒಳ್ಳೆಯ ಬೆಳವಣಿಗೆ. ಮೊದಲು ಮೈಕ್ರೋ ಫೈನಾನ್ಸ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕೆಲಸಕ್ಕೆ ಸರ್ಕಾರ ಮುಂದಾಗಲಿ. ಈ ಬಗ್ಗೆ ಆಯಾ ಜಿಲ್ಲಾಧಿಕಾರಿಗೆ ಸೂಕ್ತ ಕಾನೂನು ಕ್ರಮ ಜರುಗಿಸಲು ರಾಜ್ಯ ಸರ್ಕಾರ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.

ವಕೀಲ ಕೆ.ಎಂ.ಅಂಜಿನಪ್ಪ ಮಾತನಾಡಿ, ಖಾಸಗಿ ಹಣಕಾಸು ಸಂಸ್ಥೆ, ಕೈಗಡ ಸಾಲ, ಮೈಕ್ರೋ ಫೈನಾನ್ಸ್‌ ಸಾಲ ಪಡೆದ ಜನರು ತೊಂದರೆ ಅನುಭವಿಸುವುದು, ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯುವ ನಿಟ್ಟಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ನೀಡಿಕೆ ಸರಳೀಕರಿಸಬೇಕು. ಸಣ್ಣ ಸಾಲ ನೀಡುವುದಕ್ಕೂ 13 ದಾಖಲೆಗಳನ್ನು ರಾಷ್ಟ್ರೀಕೃತ ಬ್ಯಾಂಕ್‌ ಕೇಳಿ, ಸಾಲ ಕೊಡಲು ವಿನಾಕಾರಣ ಅಲೆದಾಡಿಸುತ್ತವೆ. ಮೈಕ್ರೋ ಫೈನಾನ್ಸ್‌ಗಳು ಆಧಾರ್ ಕಾರ್ಡ್‌ ಪಡೆದು ಸಾಲ ನೀಡಿ, ಗೂಂಡಾಗಳ ಮೂಲಕ ಸಾಲ ವಸೂಲು ಮಾಡುತ್ತವೆ. ಅಂತಹ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಸಮಿತಿ ರಾಜ್ಯ ಗೌರವಾಧ್ಯಕ್ಷ ತುಪ್ಪದಹಳ್ಳಿ ಹನುಮಂತಪ್ಪ, ರೇಖಮ್ಮ ಪಲ್ಲಾಗಟ್ಟೆ, ವಕೀಲ ಮಂಜುನಾಥ, ರಾಘವೇಂದ್ರ, ಕಿರಣ್ ಇತರರು ಇದ್ದರು.

- - - -29ಕೆಡಿವಿಜಿ4:

ಮೈಕ್ರೋ ಫೈನಾನ್ಸ್‌ನವರ ಕಿರುಕುಳ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ದಾವಣಗೆರೆಯಲ್ಲಿ ಬುಧವಾರ ರಾಜ್ಯ ಶೋಷಿತ ಸಮುದಾಯ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಎಚ್.ಸಿ.ಮಲ್ಲಪ್ಪ ಸುದ್ದಿಗೋಷ್ಟಿಯಲ್ಲಿ ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ