ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯ ಸಚಿವ ಸಂಪುಟದಲ್ಲಿ ಒಳಮೀಸಲಾತಿ ಅನುಷ್ಠಾನಕ್ಕೂ ಮುನ್ನ ಲೋಪದೋಷಗಳನ್ನು ಸರಿಪಡಿಸದಿದ್ದರೆ ಮಾದಿಗ ಸಮುದಾಯ ಧಂಗೆ ಏಳಬೇಕಾಗುತ್ತದೆ ಎಂದು ಮಾದಿಗ ಸಮಾಜದ ಹಿರಿಯ ಮುಖಂಡ ಆಲೂರು ನಿಂಗರಾಜ ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದರು.ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಸಮಾಜದ ಮುಖಂಡರು, ಸಮಾಜ ಬಾಂಧವರ ಸಭೆಯಲ್ಲಿ ಮಾತನಾಡಿ, ಮಾದಿಗ ಜನಾಂಗಕ್ಕೆ ಒಳಮೀಸಲಾತಿ ಸಮಾಧಾನವನ್ನು ತಂದಿಲ್ಲ. ಒಳಮೀಸಲಾತಿ ಅನುಷ್ಟಾನಕ್ಕೆ ಮುನ್ನ ಅದರಲ್ಲಿನ ಲೋಪದೋಷ ಸರಿಪಡಿಸಿ ಎಂದರು.
ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿಯಲ್ಲಿ ಸಮನಾಂತರ ಮೀಸಲಾತಿ ನೀಡದಿರುವುದು ನಮ್ಮ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದೆ. ನ್ಯಾಯಮೂರ್ತಿ ನಾಗಮೋಹನ ದಾಸ್ ವರದಿ, ಮಾಧುಸ್ವಾಮಿ ವರದಿ, ಸದಾಶಿವ ಆಯೋಗಗಳ ವರದಿಗಳನ್ನು ಸರ್ಕಾರವು ಪರಿಗಣನೆಗೆ ತೆಗೆದುಕೊಳ್ಳದೇ, ಮಾದಿಗ ಸಮುದಾಯಕ್ಕೆ ಸಮಾಧಾನ ತರುವಂತಹ ಒಳ ಮೀಸಲಾತಿ ತರದೇ, ಬಲಗೈ ಸಮುದಾಯದವರೆ ಮೇಲುಗೈ ಸಾಧಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ರಾಜ್ಯ ಕಾಂಗ್ರೆಸ್ ಸರ್ಕಾರ ಬಲಗೈ ಸಮುದಾಯದ ಕೈಗೊಂಬೆಯಾಗಿದೆ. ಅತೀ ಹಿಂದುಳಿದ ಮಾದಿಗ ಸಮುದಾಯವನ್ನು ಕಾಂಗ್ರೆಸ್ ಸರ್ಕಾರ ಕಡೆಗಣಿಸಿದೆ. ಮಾದಿಗ ಸಮುದಾಯವನ್ನು ಪರಿಗಣಿಸಬೇಕಾದರೆ ಶ್ರೇಣೀಕೃತ ಅತೀ ಹಿಂದುಳಿದ ಶ್ರೇಣಿಕೃತವಾಗಿ ಮಾದಿಗರನ್ನು ಪರಿಗಣಿಸಬೇಕಾಗಿತ್ತು. ಆದರೆ, ಬಲಗೈ ಸಮುದಾಯವನ್ನು ಅತೀ ಹಿಂದುಳಿದ ಶ್ರೇಣಿಕೃತವಾಗಿ ಮಾಡಿಕೊಂಡಿರುವುದು ಮಾದಿಗ ಸಮುದಾಯಕ್ಕೆ ಮಾಡಿರುವ ವಂಚನೆಯಾಗಿದೆ ಎಂದು ದೂರಿದರು.
ಸಿದ್ದರಾಮಯ್ಯ ಸಚಿವ ಸಂಪುಟ ಆ.19ರಂದು ನಿರ್ಣಯ ಕೈಗೊಂಡು, ಒಳಮೀಸಲಾತಿ ಅಂಗೀಕರಿಸುವ ಮುನ್ನ ಮಾದಿಗ ಸಮುದಾಯಕ್ಕೆ ಆದ ಅನ್ಯಾಯವನ್ನು ಸರಿಪಡಿಸಿ ಅನುಷ್ಠಾನಗೊಳಿಸಬೇಕು. ಈ ವರದಿಯನ್ನು ರಾಜಕೀಯ ಮೀಸಲಾತಿ, ಶೈಕ್ಷಣಿಕ ಮೀಸಲಾತಿ, ಆರ್ಥಿಕ ವಿಚಾರ ಒಳಗೊಂಡಂತೆ ಮುಂಬರುವ ಚುನಾವಣೆ ಗಮನದಲ್ಲಿಟ್ಟುಕೊಂಡು, ಮಾದಿಗ ಸಮುದಾಯದವರಿಗೆ ಸಚಿವ ಸಂಪುಟದಲ್ಲಿ ಆದ ಅನ್ಯಾಯವನ್ನೂ ಸರಿಪಡಿಸಿ, ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.ಒಂದು ವೇಳೆ ಒಳ ಮೀಸಲಾತಿ ಅನುಷ್ಠಾನದಲ್ಲಿ ವ್ಯತ್ಯಾಸಗಳು ಕಂಡು ಬಂದರೆ ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಮಾದಿಗ ಸಮುದಾಯ ಧಂಗೆ ಏಳಬೇಕಾಗುತ್ತದೆ. ರಾಜ್ಯ ಸರ್ಕಾರ ಅದಕ್ಕೆ ಅವಕಾಶ ನೀಡದೇ, ಮಾದಿಗ ಸಮುದಾಯಕ್ಕೆ ಆದ ಅನ್ಯಾಯ ಸರಿಪಡಿಸುವ ಕೆಲಸ ಮಾಡಬೇಕು ಎಂದರು.
ಸಮಾಜದ ಮುಖಂಡರಾದ ಗಾಂಧಿನಗರ ಎಂ.ಹಾಲೇಶ, ಎಚ್.ಮಲ್ಲೇಶ, ರಾಘವೇಂದ್ರ ಕಡೆಮನಿ, ಮಂಜು ಪೈಲ್ವಾನ್, ಸಿ.ಬಸವರಾಜ, ಎಲ್.ಎಂ.ಎಚ್.ಸಾಗರ್, ಚಿದಾನಂದಪ್ಪ, ಎಂ.ರವಿ, ಮಲ್ಲಪ್ಪ, ಉದಯಪ್ರಕಾಶ, ಚಿದಾನಂದಪ್ಪ, ಚಿಕ್ಕನಹಳ್ಳಿ ಲಿಂಗರಾಜ, ದುಶ್ಯಂತ್, ಬಿ.ದುಗ್ಗಪ್ಪ, ಅಂಜಿನಪ್ಪ, ಪ್ರಕಾಶ, ಶಿವಶಂಕರ, ಎಸ್.ಎಂ.ಹಾಲೇಶಕುಮಾರ, ಪ್ರದೀಪ, ವಸಂತಕುಮಾರ ಬಿ.ಕಲ್ಪನಹಳ್ಳಿ ಇತರರು ಇದ್ದರು.