ಕನ್ನಡಪ್ರಭ ವಾರ್ತೆ ಶಿರಾ ದೇಶದ ಮಹತ್ವಾಕಾಂಕ್ಷೆ ಯೋಜನೆಯಾದ ಜೆಜೆಎಂ ಯೋಜನೆ ಉತ್ತಮವಾಗಿದ್ದು, ಎಲ್ಲರೂ ಹೊಸದಾಗಿ ನೀಡಿರುವ ನಲ್ಲಿಗಳಲ್ಲಿ ನೀರನ್ನು ಉಪಯೋಗಿಸಿಕೊಳ್ಳೋಣ ಎಂದು ಗ್ರಾಪಂ ಅಧ್ಯಕ್ಷೆ ಸುಷ್ಮ ಮೋಹನ್ ಹೇಳಿದರು.
ಪಿಡಿಒ ತುಳಸಿರಾಮ್ ಮಾತನಾಡಿ ಎಲ್ಲರೂ ನೀರನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಿ ಮತ್ತು ಯಾವುದೇ ನೀರಿನ ಸಮಸ್ಯೆ ಇದ್ದರೂ ಕೂಡ ನಮ್ಮ ಗಮಕ್ಕೆ ತನ್ನಿ ಎಲ್ಲರೂ ಯೋಜನೆಯಿಂದ ಆಗಿರುವ ನಲ್ಲಿಗಳಲ್ಲಿಯೇ ನೀರನ್ನು ಬಳಸಿ ಎಂದು ತಿಳಿಸಿದರು. ಜಲ ಜೀವನ್ ಮಿಷನ್ ಯೋಜನೆಯ ಐ.ಎಸ್.ಎ. ತಂಡ ಅಧಿಕಾರಿ ಮಧು.ಎನ್.ಆರ್ ಮಾತನಾಡಿ ಜೆಜೆಎಂ ಯೋಜನೆಯು ಪ್ರತಿ ಮನೆ ಮನೆಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಈ ಯೋಜನೆಯನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು. ನೀರನ್ನು ವ್ಯರ್ಥ ಮಾಡದೆ ಮಿತ ಬಳಕೆ ಮಾಡಬೇಕು. ಜಲ್ ಜೀವನ್ ಮಿಷನ್ ಯೋಜನೆಯಲ್ಲಿ ಗ್ರಾಮದಲ್ಲಿ ಒದಗಿಸಿರುವ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಮಾಡಿಕೊಂಡು. ಗ್ರಾಮದಲ್ಲಿ ನೈರ್ಮಲ್ಯ ಕಾಪಾಡಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಭಾಗ್ಯಮ್ಮ ರಂಗನಾಥ್, ಆಶಾ ಲೋಹಿತ್, ನವೀನ್, ನಾಗವೇಣಿ ವೆಂಕಟೇಶ್, ತುಳಸಿರಾಮ್, ಗ್ರಾ.ಪಂ. ಕಾರ್ಯದರ್ಶಿ ನಾಗರಾಜು, ಸುನಿಲ್ ಕುಮಾರ್ ಎಚ್ ಸೇರಿದಂತೆ ಹಲವರು ಹಾಜರಿದ್ದರು.