ಕನ್ನಡಪ್ರಭ ವಾರ್ತೆ ತ್ಯಾಗರ್ತಿ
ರೈತರ ಅಭ್ಯುದಯಕ್ಕಾಗಿ ಸರ್ಕಾರವು ಇಲಾಖೆಯ ಮುಖಾಂತರ ಹಲವಾರು ಸಹಕಾರಿ ಯೋಜನೆಗಳನ್ನು ಹಮ್ಮಿಕೊಂಡಿದ್ದು, ವಿಕಸಿತ ಕೃಷಿ ಸಂಕಲ್ಪ ಅಭಿಯಾನ 2025 ಒಂದಾಗಿದ್ದು, ಈ ಯೋಜನೆಯ ಸದುಪಯೋಗಪಡೆದುಕೊಂಡು ರೈತರು ಸದೃಢರಾಗಬೇಕೆಂದು ತ್ಯಾಗರ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರಭಾವತಿ ಲೋಕಪ್ಪ ಕರೆ ನೀಡಿದರು.ಸಾಗರ ತಾಲೂಕಿನ ತ್ಯಾಗರ್ತಿಯ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಶುಕ್ರವಾರ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಶಿವಮೊಗ್ಗ, ಕೃಷಿ ಇಲಾಖೆ ಸಾಗರ ಇವರ ಸಹಯೋಗದಲ್ಲಿ ಮುಂಗಾರು ಪೂರ್ವ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿ ವಿಜ್ಞಾನಿ ಭರತ್ಕುಮಾರ್ ರೈತರಿಗೆ ಮಾರ್ಗದರ್ಶನ ನೀಡಿ ಮಾತನಾಡಿ, ರೈತರು ಕೆಲವೇ ರಾಸಾಯನಿಕ ಗೊಬ್ಬರಗಳಿಗೆ ಮಾರು ಹೋಗುತ್ತಿದ್ದು, ಭೂಮಿಯ ಫಲವತ್ತತೆಯ ಆಧಾರದ ಮೇಲೆ ರಾಸಾಯನಿಕ ಗೊಬ್ಬರಗಳನ್ನು ಬಳಸಿದರೆ ಸದೃಢ ಸಮೃಧ್ಧಿಯ ಬೆಳೆ ಬೆಳೆಯಲು ಸಾಧ್ಯ ಎಂದು ಹೇಳಿದರು.ಆನಂದಪುರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರಿಜ್ವಾನ್ ಸಾಬ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ನಕಲಿ ಗೊಬ್ಬರಗಳ ಹಾವಳಿ ಹೆಚ್ಚಾಗುತ್ತಿದ್ದು, ರೈತರು ಖರೀದಿಸುವಾಗ ಎಚ್ಚರಿಕೆ ವಹಿಸಬೇಕು. ಅಲ್ಲದೇ ನೋಂದಾಯಿತ ರಸಗೊಬ್ಬರಗಳ ಮಳಿಗೆಗಳಿಂದ ಗೊಬ್ಬರ ಖರೀದಿಸಿದಾಗ ಆಧಾರ್ ನಂ. ತಪ್ಪದೇ ನೋಂದಾಯಿಸಿ ಹಣ ಪಾವತಿ ರಸೀದಿ ಪಡೆದುಕೊಂಡರೆ ನಕಲಿ ರಾಸಾಯನಿಕ ಗೊಬ್ಬರಗಳಾಗಿದ್ದರೂ ಅಂತಹ ಕಂಪನಿಗಳ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಂಡು ರೈತರಿಗೆ ನಷ್ಟವನ್ನು ಭರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ತ್ಯಾಗರ್ತಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಟಿ.ಕೆ. ಹನುಮಂತಪ್ಪ, ಉಪಾಧ್ಯಕ್ಷ ಕಿರಣ್ ಕುಮಾರ್, ನಿರ್ದೇಶಕರಾದ ಅಮೃತ್ರಾಜ್, ಇಸಾಕ್, ನಾಗೇಂದ್ರ, ಪರಸಪ್ಪ, ಲೋಕಪ್ಪ, ಗಣಪತಿ, ಲಿಂಗರಾಜ್, ಆಶಾನಾಗಮಣಿ, ಪಿಡಿಒ ರಾಜು ಉಪಸ್ಥಿತರಿದ್ದು, ಆತ್ಮಾ ಯೋಜನೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕರಾದ ವಿನಾಯಕ ರಾವ್ ಬೇಳೂರು, ಶಿವಮೊಗ್ಗ ಕೆವಿಕೆಯ ವಿಜ್ಞಾನಿಗಳಾದ ಅರುಣ್, ಶಿಲ್ಪಾ ಇವರು ರೈತರಿಗೆ ಮಾರ್ಗದರ್ಶನ ನೀಡಿದರು.