ವಿಶ್ವಕರ್ಮ ಯೋಜನೆಯ ಸದುಪಯೋಗ ಪಡೆಯಿರಿ: ಸುಧಾಕರ್‌

KannadaprabhaNewsNetwork |  
Published : Apr 14, 2026, 01:15 AM IST
ಸಿಕೆಬಿ-2 ನಗರದ ಕನ್ನಡ ಭವನದಲ್ಲಿನಡೆದ ಪಿಎಂ ವಿಶ್ವಕರ್ಮ ಟೂಲ್‌ಕಿಟ್‌ ವಿತರಣೆ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಸಂಸದ ಡಾ.ಕೆ.ಸುಧಾಕರ್‌  ಫಲಾನುಭವಿಗಳಿಗೆ  ಟೂಲ್‌ಕಿಟ್‌ ವಿತರಿಸಿದರು | Kannada Prabha

ಸಾರಾಂಶ

ಕರಕುಶಲ ಕರ್ಮಿಗಳು ಈಗಿನ ಬೇಡಿಕೆಗೆ ತಕ್ಕಂತೆ ಎಂತಹ ಸೇವೆ ಹಾಗೂ ಉತ್ಪನ್ನಗಳನ್ನು ನೀಡಬಹುದು ಎಂಬುದನ್ನು ಕೇಂದ್ರ ಸರ್ಕಾರದ ವಿಶ್ವಕರ್ಮ ಯೋಜನೆ ಕಲಿಸುತ್ತದೆ. ಆದ್ದರಿಂದ ಯುವಜನರು ಯೋಜನೆಯ ಸದುಪಯೋಗ ಪಡೆಯಬೇಕು ಎಂದು ಸಂಸದ ಡಾ.ಕೆ.ಸುಧಾಕರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕರಕುಶಲ ಕರ್ಮಿಗಳು ಈಗಿನ ಬೇಡಿಕೆಗೆ ತಕ್ಕಂತೆ ಎಂತಹ ಸೇವೆ ಹಾಗೂ ಉತ್ಪನ್ನಗಳನ್ನು ನೀಡಬಹುದು ಎಂಬುದನ್ನು ಕೇಂದ್ರ ಸರ್ಕಾರದ ವಿಶ್ವಕರ್ಮ ಯೋಜನೆ ಕಲಿಸುತ್ತದೆ. ಆದ್ದರಿಂದ ಯುವಜನರು ಯೋಜನೆಯ ಸದುಪಯೋಗ ಪಡೆಯಬೇಕು ಎಂದು ಸಂಸದ ಡಾ.ಕೆ.ಸುಧಾಕರ್‌ ಹೇಳಿದರು.

ಭಾರತ ಸರ್ಕಾರ, ಎಂಎಸ್ಎಂಇ, ಮತ್ತು ಅಂಚೆ ಇಲಾಖೆ ವತಿಯಿಂದ ನಗರದ ಕನ್ನಡ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಪಿಎಂ ವಿಶ್ವಕರ್ಮ ಟೂಲ್‌ಕಿಟ್‌ ವಿತರಣೆ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಟೂಲ್‌ಕಿಟ್‌ ವಿತರಿಸಿ ಮಾತನಾಡಿ, ಇಂದಿನ ಅಗತ್ಯಕ್ಕೆ ತಕ್ಕಂತೆ ಹೇಗೆ ಉತ್ಪಾದಿಸಬಹುದು ಎಂಬುದನ್ನು ವಿಶ್ವಕರ್ಮ ಯೋಜನೆಯಲ್ಲಿ ಹೇಳಿಕೊಡಲಾಗುತ್ತದೆ. ಹಳೇ ಕಾಲದ ವಿನ್ಯಾಸದಂತೆಯೇ ಉತ್ಪನ್ನಗಳನ್ನು ತಯಾರಿಸಿದರೆ ಅದಕ್ಕೆ ಬೇಡಿಕೆ ಬರದೇ ಹೋಗಬಹುದು. ಉದಾಹರಣೆಗೆ, ಈಗಿನ ಮಹಿಳೆಯರ ಅಭಿರುಚಿಗೆ ತಕ್ಕಂತೆ ಸೀರೆಗಳನ್ನು ತಯಾರಿಸಿದರೆ ಅದಕ್ಕೆ ಉತ್ತಮ ಬೆಲೆ ಹಾಗೂ ಬೇಡಿಕೆ ಸಿಗುತ್ತದೆ. ಇಂತಹ ಯೋಜನೆಯನ್ನು ಬಳಸಿಕೊಳ್ಳಬೇಕು. ಯುವಜನರು ಉದ್ಯೋಗ ಅರಸದೆ ಉದ್ಯೋಗ ನೀಡುವವರಾಗಬೇಕು ಎಂದು ಕರೆ ನೀಡಿದರು.

ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಬಾಲರಾಮನ ವಿಗ್ರಹವನ್ನು ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ರೂಪಿಸಿದ್ದಾರೆ. ಅವರು ಮನಸ್ಸು ಮಾಡಿದ್ದರೆ ಬೇರೆ ಉದ್ಯೋಗ ಮಾಡಬಹುದಿತ್ತು. ಆದರೆ ಅದನ್ನು ಬಿಟ್ಟು ಶಿಲ್ಪ ವೃತ್ತಿಯನ್ನೇ ಆರಿಸಿಕೊಂಡು ಪ್ರಾವೀಣ್ಯತೆ ಪಡೆದುಕೊಂಡರು. ತಮ್ಮ ವೃತ್ತಿಯಲ್ಲಿ ವಿಭಿನ್ನವಾದ ಕೌಶಲ್ಯ ಬೆಳೆಸಿಕೊಂಡಿರುವುದರಿಂದ ಅವರಿಗೆ ಇಷ್ಟು ಸಾಧನೆ ಮಾಡಲು ಸಾಧ್ಯವಾಗಿದೆ. ತೆಲಂಗಾಣದ ಮೆಹಬೂಬ್‌ನಗರದ ಕ್ಷೌರಿಕ ಅಶ್ವಿನಿ ರಾಮಕೃಷ್ಣ ರಸ್ತೆಬದಿಯಲ್ಲಿ ಸಲೂನ್‌ ಇಟ್ಟುಕೊಂಡಿದ್ದರು. ಅದು ಹಳೆಯದಾಗಿದ್ದರಿಂದ ಗ್ರಾಹಕರು ಹೆಚ್ಚಾಗಿ ಬರುತ್ತಿರಲಿಲ್ಲ. ಅವರು ವಿಶ್ವಕರ್ಮ ಯೋಜನೆಯಡಿ ತರಬೇತಿ ಪಡೆದು, ಯುವಸಮೂಹವನ್ನು ಆಕರ್ಷಿಸುವಂತೆ ಕ್ಷೌರದಂಗಡಿ ನಿರ್ಮಿಸಿದರು. ಈಗ ಅನೇಕ ಗ್ರಾಹಕರು ಅವರ ಅಂಗಡಿಗೆ ಬರುತ್ತಿದ್ದು, ಆ ಊರಿನಲ್ಲಿ ಬಹಳ ಖ್ಯಾತಿ ಪಡೆದಿದ್ದಾರೆ ಎಂದರು.

ಕರಕುಶಲ ವೃತ್ತಿಯಲ್ಲಿ ಇರುವವರು ವಹಿವಾಟನ್ನು ಇನ್ನಷ್ಟು ಬೆಳೆಸಿಕೊಳ್ಳಲು ಹಾಗೂ ತರಬೇತಿ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ವಿಶ್ವಕರ್ಮ ಯೋಜನೆ ಜಾರಿ ಮಾಡಿದೆ. ಇದರಡಿ ಆರಂಭಿಕ ಹಂತದಲ್ಲಿ 1 ಲಕ್ಷ ರೂ. ಹಾಗೂ ನಂತರ ಒಟ್ಟು 2 ಲಕ್ಷ ರೂ. ಸಾಲ ನೀಡಲಾಗುತ್ತಿದೆ. ಕರಕುಶಲ ವೃತ್ತಿ ಎಂದರೆ ಕೇವಲ ಉದ್ಯೋಗವಲ್ಲ, ಇದು ನಮ್ಮ ದೇಶದ ಸಂಸ್ಕೃತಿ, ಪರಂಪರೆ ಹಾಗೂ ಹೆಗ್ಗುರುತು. ಕಮ್ಮಾರ, ಬಡಗಿ, ಶಿಲ್ಪಿ, ಅಕ್ಕಸಾಲಿಗರು, ಚಮ್ಮಾರರು, ಮೇಸ್ತ್ರಿ, ಬುಟ್ಟಿ ತಯಾರಕರು, ಬೊಂಬೆ ತಯಾರಕರು ಹೀಗೆ ಅನೇಕ ಉದ್ಯೋಗಿಗಳು ನಮ್ಮ ಸಮಾಜದ ಬೆನ್ನುಲುಬು. ಆದರೆ ಈ ಸಮುದಾಯ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ ಎಂದು ಅನೇಕರು ಅರಿತಿಲ್ಲ. ಇದನ್ನು ಅರಿತು ಅವರಿಗೆ ಗೌರವ ನೀಡಬೇಕು ಎಂದರು.

ಆರ್ಥಿಕ ಚೈತನ್ಯದ ಯೋಜನೆ:

ಬೆಂಗಳೂರನ್ನು ನಿರ್ಮಿಸಿದ ನಾಡಪ್ರಭು ಕೆಂಪೇಗೌಡರು ಅಕ್ಕಿಪೇಟೆ, ಚಿಕ್ಕಪೇಟೆ, ಬಳೇಪೇಟೆ, ಅರಳೇಪೇಟೆ ಸೇರಿ ಸುಮಾರು 50 ಪೇಟೆಗಳನ್ನು ನಿರ್ಮಿಸಿದ್ದರು. ವಂಶಪಾರಂಪರ್ಯವಾಗಿ ಕರಕುಶಲ ವೃತ್ತಿ ಮಾಡುತ್ತಾ ಬಂದವರಿಗೆ ಅವರು ಸಂತೆಗಳನ್ನು ನಿರ್ಮಿಸಿದ್ದರು. ಗ್ರಾಮೀಣ ಸ್ವಾವಲಂಬನೆ ಬಗ್ಗೆ ಹೇಳಿದ್ದ ಮಹಾತ್ಮ ಗಾಂಧೀಜಿ, ಕರಕುಶಲಕರ್ಮಿಗಳಿಂದ ಗ್ರಾಮೀಣ ಆರ್ಥಿಕತೆ ಬೆಳೆಯುತ್ತದೆ ಎಂದು ನಂಬಿದ್ದರು. ಸ್ಥಳೀಯ ಉದ್ಯಮಗಳನ್ನು ಬೆಳೆಸುವುದು ಅವರ ಆದ್ಯತೆಯಾಗಿತ್ತು. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ಕರಕುಶಲಕರ್ಮಿಗಳಿಗೆ ವಿಶ್ವಕರ್ಮ ಯೋಜನೆಯಡಿ ಒತ್ತು ನೀಡಿದ್ದಾರೆ.

ಸಾಂಪ್ರದಾಯಿಕ ಕರಕುಶಲ ಕಲೆಯನ್ನು ಉಳಿಸಿ ಆರ್ಥಿಕ ಚೈತನ್ಯ ನೀಡುವುದು ವಿಶ್ವಕರ್ಮ ಯೋಜನೆಯ ಉದ್ದೇಶ. 18 ಬಗೆಯ ವೃತ್ತಿಗಳಿಗೆ ಇದರಲ್ಲಿ ಪ್ರೋತ್ಸಾಹ ನೀಡಲಾಗುತ್ತಿದೆ. ಕರಕುಶಲ ಕರ್ಮಿಗಳಿಗೆ ಕೇವಲ 5% ಬಡ್ಡಿದರದ ಸಾಲ ದೊರೆಯುತ್ತದೆ. ಉಳಿದ ಹಣವನ್ನು ಕೇಂದ್ರ ಸರ್ಕಾರ ಪಾವತಿಸುತ್ತದೆ. ಇದರಲ್ಲಿ ಸಂಪೂರ್ಣ ಉಚಿತವಾಗಿ ತರಬೇತಿ ನೀಡಲಾಗುತ್ತದೆ. ಈವರೆಗೆ 1.49 ಲಕ್ಷ ಜನರಿಗೆ 1,190 ಕೋಟಿ ರೂ. ಸಾಲ ಸಿಕ್ಕಿದೆ ಎಂದು ಹೇಳಿದರು.ವೋಕಲ್‌ ಫಾರ್‌ ಲೋಕಲ್‌ ಎಂಬಂತೆ, ಎಲ್ಲ ಕರಕುಶಲ ಕರ್ಮಿಗಳು ಹಳ್ಳಿಯಿಂದ ಜಾಗತಿಕ ಮಟ್ಟಕ್ಕೆ ಬೆಳೆಯಬೇಕು. ಚೀನಾದ ಬೊಂಬೆಗಳು ಈಗ ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದಿವೆ. ಆದರೆ ನಮ್ಮಲ್ಲೇ ಚನ್ನಪಟ್ಟಣ ಹಾಗೂ ಕಿನ್ನಾಳ ಆಟಿಕೆಗಳ ಉದ್ಯಮವಿದೆ ಎಂಬುದನ್ನು ಮರೆತಿದ್ದೇವೆ. ಆದ್ದರಿಂದ ಇವುಗಳನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಬೇಕಿದೆ. ನಮ್ಮ ಹಳ್ಳಿಗಳಲ್ಲೇ ನಾವು ಇನ್ನೂ ಗುರುತಿಸದ ಅನೇಕ ಉತ್ಪನ್ನಗಳಿವೆ. ಅವುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯ ಮಾಡಲು ಎಲ್ಲರೂ ಶ್ರಮಿಸಬೇಕೆಂದರು.

ಪ್ರತಿ ಕರಕುಶಲ ಕರ್ಮಿಗಳ ಜೊತೆ ನಾನು ಸಂವಾದ ಮಾಡಿ, ಎಲ್ಲರ ಅಭಿಪ್ರಾಯ ಹಾಗೂ ಸಲಹೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸುತ್ತೇನೆ. ಈ ಕಾರ್ಯಕ್ರಮದ ವೇಳೆಯಲ್ಲಿ ಕಾರ್ಮಿಕ ಸಂಘಟನೆಯವರು ನನ್ನನ್ನು ಭೇಟಿ ಮಾಡಿ, 1600 ಸದಸ್ಯರಿಗೆ ತರಬೇತಿ ಹಾಗೂ ಸಾಲ ಕೊಡಿಸಿ ಎಂದು ಕೋರಿದ್ದಾರೆ. ಇಂತಹ ಪ್ರಚಾರ ಕಾರ್ಯಕ್ರಮಗಳನ್ನು ಏರ್ಪಡಿಸಿದರೆ ಈ ರೀತಿ ಎಲ್ಲರಲ್ಲೂ ಜಾಗೃತಿ ಬರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸುಮಾರು 300 ಕರಕುಶಲಕರ್ಮಿಗಳಿಗೆ ಟೂಲ್‌ಕಿಟ್‌ ವಿತರಣೆ ಮಾಡಲಾಯಿತು. ಈವರೆಗೆ 11,000ಕ್ಕೂ ಹೆಚ್ಚು ಮಂದಿಗೆ ವಿತರಿಸಿದ್ದು, ಇವತ್ತಿನದೂ ಸೇರಿ ಒಟ್ಟು ಸುಮಾರು 12,000 ಮಂದಿಗೆ ಟೂಲ್‌ಕಿಟ್‌ ವಿತರಿಸಲಾಗಿದೆ.

ಈ ವೇಳೆ ಎಂಎಸ್ಎಂಇ ನಿರ್ದೇಶಕ ದೇವರಾಜ್, ಅಂಚೆ ಇಲಾಖೆಯ ಉಪ ನಿರ್ದೇಶಕ ದಯಾನಂದ್, ಸಹಾಯಕ ನಿರ್ದೇಶಕ ನರಸಿಂಹನ್,ಲೀಡ್ ಬ್ಯಾಂಕ್ ವ್ಯವಸ್ಥಾಪಕ ವೆಂಕಟಕೃಷ್ಣ, ನಗರಸಭೆ ಮಾಜಿ ಅಧ್ಯಕ್ಷ ಎ.ಗಜೇಂದ್ರ, ಮುಖಂಡರಾದ ಮುನಿರಾಜು, ಸಂತೋಷ್, ಬಾಬು, ಶಶಿಕುಮಾರ್, ಶ್ರೀನಾಥ್, ರಾಮಣ್ಣ, ಅನಿಲ್,ಅಂಚೆ ಸಿಬ್ಬಂದಿ, ಫಲಾನುಭವಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿಗಳಿಂದ ಸಾಮಾಜಿಕ, ಆರ್ಥಿಕ ಶಕ್ತಿ: ಸಿದ್ದು
ಪಶುವೈದ್ಯೆ ಸಮೀಕ್ಷಾ ಸಾವಿಗೆ ಕಾರಣವಾಗಿದ್ದ ನೀರಾನೆ ಸಾವು