ಅತಿವೃಷ್ಟಿ, ಅನಾವೃಷ್ಟಿ ತಡೆಗೆ ಮುಂಜಾಗ್ರತಾ ಕ್ರಮ ಅನುಸರಿಸಿ: ಅಜಯಕುಮಾರ್

KannadaprabhaNewsNetwork | Published : Feb 11, 2025 12:47 AM

ಸಾರಾಂಶ

ವಿಪತ್ತು ನಿರ್ವಹಣೆಯ ಅಣಕು ಪ್ರದರ್ಶನ ಹಾಗೂ ಜಾಗೃತಿ ಕಾರ್ಯಕ್ರಮ ಶಾಲೆಯ ಸುರಕ್ಷತೆ ಕಾರ್ಯಕ್ರಮದಡಿ ಸೋಮವಾರ ಜರುಗಿತು.

ಶಾಲೆಯ ಸುರಕ್ಷತೆ ಕಾರ್ಯಕ್ರಮದಡಿ ಕಿಟ್‌ ವಿತರಣೆ, ಅಣಕು ಪ್ರದರ್ಶನ । ಎನ್‌ಡಿಆರ್‌ಎಫ್ ಇನ್‌ಸ್ಪೆಕ್ಟರ್‌ ಕನ್ನಡಪ್ರಭ ವಾರ್ತೆ ಗಂಗಾವತಿ

ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ಹಾಗೂ ಕಾಲೇಜು ವಿಭಾಗದ ಆವರಣದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಬೆಟಾಲಿಯನ್ 10ನೇ ತಂಡದಿಂದ ವಿಪತ್ತು ನಿರ್ವಹಣೆಯ ಅಣಕು ಪ್ರದರ್ಶನ ಹಾಗೂ ಜಾಗೃತಿ ಕಾರ್ಯಕ್ರಮ ಶಾಲೆಯ ಸುರಕ್ಷತೆ ಕಾರ್ಯಕ್ರಮದಡಿ ಸೋಮವಾರ ಜರುಗಿತು.

ಎನ್‌ಡಿಆರ್‌ಎಫ್ ಇನ್‌ಸ್ಪೆಕ್ಟರ್‌ ಅಜಯಕುಮಾರ್ ಮಾತನಾಡಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಬೆಟಾಲಿಯನ್ 10ನೇ ತಂಡದಿಂದ ಸಂಭವನೀಯ ವಿಪತ್ತು, ಪ್ರವಾಹ ಸ್ಥಳಗಳಿಗೆ ಆಗಮಿಸಿ ಸಮುದಾಯ ಜಾಗೃತಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಕೊಪ್ಪಳ ಜಿಲ್ಲೆಯ ನದಿ ಪಾತ್ರದ ಗ್ರಾಮಗಳಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ. ಸಂಭವನೀಯ ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ಗ್ರಾಮಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ತಿಳಿದುಕೊಳ್ಳಬೇಕು ಎಂದರು.

ಎನ್‌ಡಿಆರ್‌ಎಫ್‌ ತಂಡದಿಂದ ಶಾಲಾ ಸುರಕ್ಷತಾ ಕಾರ್ಯಕ್ರಮದಡಿ ಪ್ರೌಢಶಾಲಾ ವಿಭಾಗಕ್ಕೆ ₹25 ಸಾವಿರ ಮೌಲ್ಯದ ಸುರಕ್ಷತಾ ಕಿಟ್‌ ಮತ್ತು ವಿದ್ಯಾರ್ಥಿಗಳಿಗೆ ಬಿಸ್ಕೆಟ್, ಚಾಕೊಲೇಟ್‌ ನೀಡಿದರು.

ಗಂಗಾವತಿ ನಗರಸಭೆ ಅಧ್ಯಕ್ಷ ಮೌಲಾಸಾಬ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆ, ಪ್ರವಾಹ ರಕ್ಷಣೆ, ಪ್ರಕೃತಿ ವಿಕೋಪದಿಂದ ಆಗುವ ಅನಾಹುತ, ಅನಿಲ ಸೋರಿಕೆ ತಡೆಗಟ್ಟುವಿಕೆ, ಸುನಾಮಿ, ಭೂಕಂಪ, ಅಗ್ನಿ ಅವಘಡ ಹಾಗೂ ಸಿಡಿಲು ಬಡಿತದಿಂದ ರಕ್ಷಣೆ ಸೇರಿದಂತೆ ಕಟ್ಟಡ ಕುಸಿತ, ರಾಸಾಯನಿಕ ಪದಾರ್ಥಗಳಿಂದ ಆಗುವ ಅನಾಹುತಗಳು ಮತ್ತು ಇನ್ನಿತರ ಅನಾಹುತಗಳಿಂದ ಸಾರ್ವಜನಿಕರು ಯಾವ ರೀತಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಎನ್‌ಡಿಆರ್‌ಎಫ್‌ ತಂಡದ ಸದಸ್ಯ ಶಂಕರ ಧೂಪದಲ್ ಮಾಹಿತಿ ನೀಡಿದರು. ಎನ್‌ಡಿಆರ್‌ಎಫ್‌ ತಂಡದ ಸದಸ್ಯರು ಅಣಕು ಪ್ರದರ್ಶನ ನೀಡಿ ಅರಿವು ಮೂಡಿಸಿದರು.

ಗ್ರೇಡ್-೨ ತಹಸೀಲ್ದಾರ ಮಹಾಂತಗೌಡ, ನಗರಸಭೆ ವ್ಯವಸ್ಥಾಪಕ ಷಣ್ಮುಖಪ್ಪ, ಉಮಾ ಪಾಟೀಲ್, ಬಸಪ್ಪ ನಾಗೋಲಿ, ಬಸವರಾಜಯ್ಯ, ರವಿಕುಮಾರ್ ನಾಯಕವಾಡಿ, ಮಂಜುನಾಥ ಹಿರೇಮಠ, ಎನ್‌ಡಿಆರ್‌ಎಫ್‌ ತಂಡದ ಎಎಸ್‌ಐ ಸೋಮ್ ಬಿರ್ ಕುಮಾರ್, ಎನ್‌ಡಿಆರ್‌ಎಫ್‌ ತಂಡದ ಸದಸ್ಯರಾದ ವಜ್ರಚೇತನ, ಗಂಗಾಧರ ಚಿಕ್ಕೊಡಿ, ಕರುಣಾಮೂರ್ತಿ, ಶಶಿಕಾಂತ ಹಾಜರಿದ್ದರು.

Share this article