೨೦೨೪ನೇ ಸಾಲಿನ ಮೇ ೧೬ ಹಾಗೂ ಜುಲೈ ತಿಂಗಳಲ್ಲಿ ಆಚರಿಸಲ್ಪಡುವ ಡೆಂಘೀ ವಿರೋಧ ಮಾಸಾಚರಣೆ ಧ್ಯೇಯ ವಾಕ್ಯ ‘ಸಮುದಾಯದೊಂದಿಗೆ ಸೇರಿ ಡೆಂಘೀ ಜ್ವರವನ್ನು ನಿಯಂತ್ರಿಸೋಣ’ ಎಂಬುದಾಗಿದ್ದು, ಇದಕ್ಕೆ ನಾಗರಿಕರು ಸಹಕಾರ ಅಗತ್ಯ
ಕನ್ನಡಪ್ರಭ ವಾರ್ತೆ ಮಾಲೂರು
ಸಾರ್ವಜನಿಕರು ತಮ್ಮ ಮನೆಗಳಲ್ಲಿ ನೀರು ತುಂಬಿರುವ ಪರಿಕರಗಳನ್ನು ಸ್ವಚ್ಛಗೊಳಿಸಿ ಮಳೆ ನೀರು ಸಂಗ್ರಹವಾಗುವ ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಮಾಡುವುದರ ಮೂಲಕ ಡೆಂಘೀ ಜ್ವರ, ಚಿಕೂನ್ ಗುನ್ಯಾ ದಂತಹ ಸಾಂಕ್ರಾಮಿಕ ರೋಗಗಳು ತಡೆಗಟ್ಟಲು ಮುನ್ನೆಚ್ಚರಿಕೆ ವಹಿಸುವಂತೆ ತಾಲೂಕು ಆರೋಗ್ಯ ಅಧಿಕಾರಿ ಡಾ.ಕೆ.ರಮೇಶ್ ಬಾಬು ಹೇಳಿದರು.
ಪಟ್ಟಣದ ೨೧ನೇ ವಾರ್ಡಿನ ಎಡಿ ಕಾಲೋನಿಯಲ್ಲಿ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪುರಸಭೆ ವತಿಯಿಂದ ಡೆಂಘೀ ಜ್ವರ, ಚಿಕುನ್ ಗುನ್ಯಾ ರೋಗಗಳನ್ನು ತಡೆಗಟ್ಟಲು ನಾಗರಿಕರಿಗೆ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
]ನಾಗರಿಕರು ಪಾಲ್ಗೊಳ್ಳಬೇಕು
೨೦೨೪ನೇ ಸಾಲಿನ ಮೇ ೧೬ ಹಾಗೂ ಜುಲೈ ತಿಂಗಳಲ್ಲಿ ಆಚರಿಸಲ್ಪಡುವ ಡೆಂಘೀ ವಿರೋಧ ಮಾಸಾಚರಣೆ ಧ್ಯೇಯ ವಾಕ್ಯ ‘ಸಮುದಾಯದೊಂದಿಗೆ ಸೇರಿ ಡೆಂಘೀ ಜ್ವರವನ್ನು ನಿಯಂತ್ರಿಸೋಣ’ ಎಂಬುದಾಗಿದ್ದು, ಈ ಹಿನ್ನೆಲೆಯಲ್ಲಿ ಡೆಂಘೀ ಜ್ವರ ನಿಯಂತ್ರಣ ಕ್ರಮಗಳ ಅನುಷ್ಠಾನದಲ್ಲಿ ನಾಗರಿಕರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
ನಾಗರಿಕರು ತಮ್ಮ ತಮ್ಮ ಮನೆಗಳಲ್ಲಿ ಡ್ರಮ್, ತೆಂಗಿನ ಚಿಪ್ಪು, ಸಿಮೆಂಟ್ ತೊಟ್ಟಿ ಇನ್ನಿತರೆ ಕಡೆ ನೀರು ಸಂಗ್ರಹವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ತಾಲೂಕಿನಲ್ಲಿ ಇದುವರೆಗೂ ೫ ಡೆಂಘೀ ಪ್ರಕರಣಗಳು, ೫ ಚಿಕೂನ್ ಗುನ್ಯಾ ಪ್ರಕರಣಗಳು ಕಂಡು ಬಂದಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸಿ ಮೂರು ದಿನಗಳಿಗೊಮ್ಮೆ ನೀರಿನ ಪರಿಕರಗಳನ್ನು ಶುದ್ಧಗೊಳಿಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ತಿಳಿಸಿದರು.
ಪುರಸಭಾ ಸದಸ್ಯ ಎ ರಾಜಪ್ಪ, ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ಶಿಕ್ಷಣಾಧಿಕಾರಿ ಸರಸ್ವತಮ್ಮ, ತಾ.ಹಿರಿಯ ಆರೋಗ್ಯ ನಿರೀಕ್ಷಕ ಬಾನು ಸಾಗರ ವರ್ಮ, ಪಿಎಚ್ಸಿಒ ವನಜಾಕ್ಷಿ, ಆಶಾ ಕಾರ್ಯಕರ್ತೆಯರಾದ ಸುಮಿತ್ರ, ಸುಮಾ, ವರಲಕ್ಷ್ಮೀ, ಜ್ಯೋತಿ, ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.