ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಕೊತ್ತತ್ತಿ ಹೋಬಳಿ ಎರಡನೇ ವೃತ್ತದ ತಗ್ಗಹಳ್ಳಿಯಲ್ಲಿ ನಿರ್ಮಿಸಿರುವ ನೂತನ ನಾಡ ಕಚೇರಿ ಉದ್ಘಾಟಿಸಿ ಮಾತನಾಡಿ, ಗ್ರಾಪಂ ಅಧಿಕಾರಿಗಳು ಜನರನ್ನು ಅಲೆದಾಡಿಸದೆ ಸಣ್ಣ ಪುಟ್ಟ ವ್ಯತ್ಯಾಸ ಸರಿಪಡಿಸಿಕೊಂಡು ಸಾರ್ವಜನಿಕರ ಕೆಲಸ ಮಾಡಬೇಕು. ಕೆಲಸ ಮಾಡದ ಪಿಡಿಒಗಳು ತಮ್ಮ ಕುರ್ಚಿ ಬಿಟ್ಟು ಹೋಗುವಂತೆ ಸೂಚಿಸಿದರು.
ತಗ್ಗಹಳ್ಳಿ ನಾಡಕಚೇರಿ ಕಟ್ಟಡಕ್ಕೆ ಸ್ಥಳ ದಾನ ಮಾಡಿದ ಲೇ. ಗುರುಮಲ್ಲಪ್ಪ ಕುಟುಂಬಕ್ಕೆ ಋಣಿಯಾಗಿ ಅವರ ಹೆಸರನ್ನು ಶಾಶ್ವತವಾಗಿ ಉಳಿಸುವ ಕೆಲಸ ಮಾಡುತ್ತೇವೆ. ನಾನು ಎರಡನೇ ಬಾರಿ ಶಾಸಕರಾಗಿದ್ದ ಅವಧಿಯಲ್ಲಿ ನಾಡ ಕಚೇರಿ ಕಟ್ಟಡ ಕಟ್ಟಲು ಪ್ರಾರಂಭವಾಗಿತ್ತು. ಈಗ ಇಲ್ಲಿಯೇ ಉಳಿಸುವ ಕೆಲಸ ಆಯಿತು ಎಂದರು.ತಗ್ಗಹಳ್ಳಿ ಹಾಗೂ ಕೊತ್ತತ್ತಿ ವ್ಯಾಪ್ತಿಯಲ್ಲಿ 10 ಸಾವಿರ ಪೌತಿ ಖಾತೆಗಳಿವೆ. ರೈತರು ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಸರಿ ಮಾಡಿಕೊಂಡು ಪೌತಿ ಖಾತೆ ಮಾಡಿಸಿಕೊಳ್ಳಬೇಕು. ಏ.25 ಕೊತ್ತತ್ತಿ, ಮೇ 3 ಸೂಗನಹಳ್ಳಿ, ಮೇ 13 ಮಂಗಲ ಗ್ರಾಪಂ ವ್ಯಾಪ್ತಿ ಜನಸ್ಪಂದನ ಕಾರ್ಯಕ್ರಮದಲ್ಲಿ ಪ್ರಯೋಜನ ಪಡೆಯಬೇಕು ಎಂದರು.
ಇದೇ ವೇಳೆ ನಾಡಕಚೇರಿಗೆ ನಿವೇಶನ ನೀಡಿದ ಲೇ.ಗುರುಮಲ್ಲಪ್ಪರವರ ಕುಟುಂಬಸ್ಥರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ, ತಗ್ಗಹಳ್ಳಿ ನಾಡಕಚೇರಿ ಉಪ ತಹಸೀಲ್ದಾರ್ ಡಿ.ತಮ್ಮಣ್ಣಗೌಡ, ನಿರ್ಮಿತಿ ಕೇಂದ್ರ ಯೋಜನಾ ವ್ಯವಸ್ಥಾಪಕ ಬಿ.ಜಯಪ್ರಕಾಶ್, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಮುಖಂಡ ತಗ್ಗಹಳ್ಳಿ ಕೃಷ್ಣ, ಜಿಪಂ ಮಾಜಿ ಸದಸ್ಯ ಮಂಜುನಾಥ್ ಸೇರಿದಂತೆ ಇತರರು ಹಾಜರಿದ್ದರು.