ಕನ್ನಡಪ್ರಭ ಯುವ ಆವೃತ್ತಿ ಸದುಪಯೋಗ ಪಡೆಯಿರಿ: ಈಶ್ವರಪ್ಪ ಹಂಚಿನಾಳ

KannadaprabhaNewsNetwork |  
Published : Dec 14, 2025, 03:30 AM IST
13ಎಂಡಿಜಿ3, ಮುಂಡರಗಿ ಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ಕನ್ನಡಪ್ರಭ ಯುವ ಆವೃತ್ತಿ ದಾನಿ ನಾಗೇಶ ಹುಬ್ಬಳ್ಳಿಯವರನ್ನು ಕನ್ನಡಪ್ರಭ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.  | Kannada Prabha

ಸಾರಾಂಶ

ಮುಂಡರಗಿ ಪಟ್ಟಣದ ನಾಗರಹಳ್ಳಿ ದಿ ರೂರಲ್ ಅರ್ಬನ್ ಡೆವಲಪ್‌ಮೆಂಟ್ ಸೊಸೈಟಿ ಆಶ್ರಯದಲ್ಲಿ ಶನಿವಾರ ಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆ ಮಾಡಲಾಯಿತು.

ಮುಂಡರಗಿ: ಕನ್ನಡಪ್ರಭ ವಿದ್ಯಾರ್ಥಿಗಳಿಗಾಗಿ ಯುವ ಆವೃತ್ತಿಯನ್ನು ಹೊರ ತಂದಿದ್ದು, ಮಕ್ಕಳು ಅದನ್ನು ಓದಿ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೃಷಿ ಪಂಡಿತ ಹಾಗೂ ಸ್ವಾಮಿ ವಿವೇಕಾನಂದ ಶಾಲೆಯ ಆಡಳಿತ ಮಂಡಳಿ ಹಿರಿಯ ಸದಸ್ಯ ಈಶ್ವರಪ್ಪ ಹಂಚಿನಾಳ ಹೇಳಿದರು.

ಪಟ್ಟಣದ ನಾಗರಹಳ್ಳಿ ದಿ ರೂರಲ್ ಅರ್ಬನ್ ಡೆವಲಪ್‌ಮೆಂಟ್ ಸೊಸೈಟಿ ಆಶ್ರಯದಲ್ಲಿ ಶನಿವಾರ ಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆ ಹಾಗೂ ದಾನಿಗಳಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಾವು ಚಿಕ್ಕವರಿದ್ದಾಗ ಇಡೀ ಊರಿನಲ್ಲಿ ಹುಡುಕಿದರೆ 4ರಿಂದ 5 ಮನೆಗಳಿಗೆ ಮಾತ್ರ ದಿನಪತ್ರಿಕೆಗಳು ಬರುತ್ತಿದ್ದವು. ಅವರ ಮನೆಗೆ ಹೋಗಿ ಅವರು ಕೊಟ್ಟಾಗ ಓದಬೇಕಾಗಿತ್ತು. ಈಗ ಪ್ರತಿಯೊಬ್ಬರ ಕೈಯಲ್ಲಿ ದಿನ ಪತ್ರಿಕೆ ಕಾಣಬಹುದು ಎಂದರು.

ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಅಂಗೈಯಲ್ಲಿಯೇ ಆಕಾಶವನ್ನು ನೋಡಿ ಅಲ್ಲಿನ ವಿಸ್ಮಯ ತಿಳಿದುಕೊಳ್ಳುತ್ತೇವೆ. ಮಕ್ಕಳು ಈ ಆವೃತ್ತಿಯ ಸದುಪಯೋಗ ಪಡೆದುಕೊಂಡು ಎಸ್.ಎಸ್.ಎಲ್.ಸಿ. ದ್ವಿತೀಯ ಪಿಯುಸಿ ಪರೀಕ್ಷೆ ಹಾಗೂ ಐಎಎಸ್, ಕೆಎಎಸ್ ಪರೀಕ್ಷೆ ಬರೆದು ಉನ್ನತ ಹುದ್ದೆಗೇರುವಂತಾಗಬೇಕು ಎಂದರು.

ಶಾಲೆಯ ಆಡಳಿತಾಧಿಕಾರಿ ಪ್ರೊ. ಸಿ.ಎಸ್. ಅರಸನಾಳ, ಆಡಳಿತ ಮಂಡಳಿ ಸದಸ್ಯ ಕರಬಸಪ್ಪ ಹಂಚಿನಾಳ ಮಾತನಾಡಿ, ಕಳೆದ ಅನೇಕ ವರ್ಷಗಳಿಂದ ಕನ್ನಡಪ್ರಭ ಮಕ್ಕಳಿಗೆ ಪೂರಕವಾಗುವ ರೀತಿಯಲ್ಲಿ ಯುವ ಆವೃತ್ತಿ ಹೊರ ತರುತ್ತಿದ್ದು, ನಮ್ಮ ಮಕ್ಕಳು ಅದನ್ನು ಸಂಗ್ರಹಿಸಿಟ್ಟುಕೊಂಡು ಓದುತ್ತಿದ್ದಾರೆ. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಈ ಆವೃತ್ತಿ ಸಹಕಾರಿಯಾಗಿದೆ ಎಂದರು.

ಕನ್ನಡಪ್ರಭ ಜಿಲ್ಲಾ ವರದಿಗಾರ ಶಿವಕುಮಾರ ಕುಷ್ಟಗಿ ಮಾತನಾಡಿ, 50 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕನ್ನಡಪ್ರಭ ಪತ್ರಿಕೆ ಮಕ್ಕಳಿಗಾಗಿ ಏನನ್ನಾದರೂ ನೀಡಬೇಕೆನ್ನುವ ಉದ್ದೇಶದಿಂದ ಮೊಟ್ಟಮೊದಲ ಬಾರಿಗೆ ಯುವ ಆವೃತ್ತಿ ಹೊರತಂದಿದ್ದು, ರಾಜ್ಯಾದ್ಯಂತ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಇದು ಮಕ್ಕಳಿಗೆ ಹೆಚ್ಚು ಪೂರಕವಾಗಿದೆ. ಸ್ಪರ್ಧಾತ್ಮಕ ಪರೀಕ್ಷ ತಯಾರಿ ಮಾಡುವವರಿಗೆ ಕೈಪಿಡಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಕ್ಕಳಿಗೆ ನಿತ್ಯ 100 ಪ್ರತಿಗಳನ್ನು ನೀಡುತ್ತಿರುವ ದಾನಿಗಳು ಹಾಗೂ ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಅವರನ್ನು ಕನ್ನಡಪ್ರಭ ವತಿಯಿಂದ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿದ ನಾಗೇಶ ಹುಬ್ಬಳ್ಳಿ ಮಾತನಾಡಿ, ಮಕ್ಕಳಿಗೆ ಸಣ್ಣದೊಂದು ಸೇವೆ ಮಾಡಲು ಅವಕಾಶ ನೀಡಿದ ಕನ್ನಡಪ್ರಭಕ್ಕೆ ಹಾಗೂ ಶಾಲೆಯ ಆಡಳಿತ ಮಂಡಳಿಗೆ ಅಭಿನಂದಿಸಿದರು.

ಸಂಸ್ಥೆಯ ಉಪಾಧ್ಯಕ್ಷ ಎಸ್.ವಿ. ಪಾಟೀಲ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪರಮೇಶ ನಾಯಕ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ದೇವರಡ್ಡಿ ಇಮ್ರಾಪುರ, ಕನ್ನಡಪ್ರಭ ಗದಗ ಜಿಲ್ಲಾ ಪ್ರಸಾರಾಂಗ ವಿಭಾಗದ ಪ್ರಸಾದ್, ತಾಲೂಕು ವರದಿಗಾರ ಶರಣು ಸೊಲಗಿ ಹಾಗೂ ಶಾಲಾ ಶಿಕ್ಷಕರ ಬಳಗ ಉಪಸ್ಥಿತರಿದ್ದರು. ಡಿ.ಎಚ್. ಇಮ್ರಾಪುರ ಸ್ವಾಗತಿಸಿದರು. ಶಿಕ್ಷಕ ಗುಡದೀರಪ್ಪ ಲಿಂಗಶೆಟ್ಟರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ