ಕನ್ನಡಪ್ರಭ ವಾರ್ತೆ ಸವಣೂರುಮಕ್ಕಳಿಗೆ ಮಾನವೀಯ ಮೌಲ್ಯಗಳು ಕುರಿತು ತಿಳಿಸುವಂತಹ ಕಾರ್ಯಕ್ರಮಗಳು ಆಗಬೇಕು ಎಂದು ಶಿರಬಡಗಿ ಗ್ರಾಪಂ ಅಧ್ಯಕ್ಷ ತೇಜಪ್ಪ ಕಡಿಮನಿ ಹೇಳಿದರು.ಶಿರಬಡಗಿ ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ವಿಶೇಷ ಗ್ರಾಮಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಿಗೆ ಸಂಬಂಧಿಸಿದಂತೆ ವಿಶೇಷ ಗ್ರಾಮಸಭೆ ಕೈಗೊಳ್ಳುವುದರೊಂದಿಗೆ ಬ್ಯಾಂಕ್ ವ್ಯವಹಾರದ ಕುರಿತು ಮಕ್ಕಳು ಮಾಹಿತಿ ಪಡೆಯಬಹುದು. ಬಾಲಕಾರ್ಮಿಕರ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ, ಕಾನೂನಿನ ಕುರಿತು ಪ್ರತಿ ಶಾಲೆಯಲ್ಲಿಯೂ ಪ್ರತಿವರ್ಷ ಕಾರ್ಯಕ್ರಮಗಳು ನಡೆಯಬೇಕು ಎಂದು ಹೇಳಿದರು. ಮಕ್ಕಳ ಹಕ್ಕುಗಳ ಕುರಿತು, ದತ್ತು ಪ್ರಕ್ರಿಯೆ ಕುರಿತು, ಬಾಲ ಕಾರ್ಮಿಕತೆ ಕುರಿತು, ಬಾಲ್ಯ ವಿವಾಹದ ಕುರಿತು ಅವರು ತಿಳಿಸಿದರು. ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆ, ಅವರಿಗೆ ಬೇಕಾದ ಸೌಲಭ್ಯಗಳ ಕುರಿತು ಚರ್ಚಿಸಲಾಯಿತು. ಶಾಲಾ ಆವರಣದಲ್ಲಿ ಕಸಕಡ್ಡಿ, ಮದ್ಯದ ಬಾಟಲಿ, ಗುಟ್ಕಾ ಚೀಟಿ, ಸಿಗರೇಟ್ ಎಸೆಯುವ ಕುರಿತು ವಿದ್ಯಾರ್ಥಿಗಳು ಗಮನ ಸೆಳೆದರು. ತಮಗೆ ಮುಂಜಾನೆ ಶಾಲೆಗೆ ಬಂದ ಕೂಡಲೇ ಸ್ವಚ್ಛತೆ ಕೈಗೊಳ್ಳುವುದೇ ದೊಡ್ಡ ಕೆಲಸವಾಗಿದೆ ಎಂದರು.ಶಾಲಾ ಆವರಣದ ಸುತ್ತ ನಡೆಯುವ ಅನೈತಿಕ ಚಟುವಟಿಕೆ ನಿಯಂತ್ರಣಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಜಿಲ್ಲಾ ಯೋಜನಾ ನಿರ್ದೇಶಕ ರಾಘವೇಂದ್ರ ಶಿರೂರು ಅವರು ಮಕ್ಕಳ ಸಹಾಯವಾಣಿಯ ಕುರಿತು ಮಾಹಿತಿ ನೀಡಿದರು. ಮಕ್ಕಳ ಸಹಾಯವಾಣಿಯನ್ನು ೧೦೯೮ ಎಂದು ನಾಮಕರಣ ಮಾಡಲು ಕಾರಣವಿದೆ. ಪ್ರೌಢಶಾಲೆಯ ತರಗತಿಯನ್ನು ಒಳಗೊಂಡಂತೆ ಮಕ್ಕಳ ಸಹಾಯವಾಣಿ ರಚಿಸಲಾಗಿದೆ ಎಂದು ಹೇಳಿದರು. ಬಾಲ ಕಾರ್ಮಿಕರ ಕುರಿತು ಮಾಹಿತಿ ನೀಡಿದ ಅವರು, ೧೪ ವರ್ಷದ ಒಳಗಿನ ಮಕ್ಕಳು ಮನೆಗೆಲಸ ಸಹ ಮಾಡುವಂತಿಲ್ಲ. ೧೬ರಿಂದ ೧೮ ವಯಸ್ಸಿನ ಮಕ್ಕಳು ಕಿಶೋರ ಕಾರ್ಮಿಕರಾದವರು ಶಾಲಾ ಅವಧಿಯ ನಂತರದಲ್ಲಿ ಅಪಾಯಕಾರಿ ಕೆಲಸ ನಿರ್ವಹಿಸುವಂತಿಲ್ಲ ಎಂದು ತಿಳಿಸಿದರು. ಜಿಲ್ಲೆಯಲ್ಲಿ ೫೨೧ ಶಾಲೆ ಬಿಟ್ಟ ಮಕ್ಕಳಿದ್ದು, ಅವರನ್ನು ಶಾಲೆಗೆ ಮರಳಿ ಕರೆಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಪಂ ಸದಸ್ಯ ತುಕಾರಾಮ ಮಾ. ನಾಯಕ್ ಮಾತನಾಡಿ, ಮಾನವೀಯ ಮೌಲ್ಯಯುತ ಶಿಕ್ಷಣ ಬೇಕಾಗಿದೆ. ಇಂದಿನ ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕೃತಿ ಸಂಸ್ಕಾರ ಮಾನವೀಯತೆ ಗುಣಗಳನ್ನು ಬೆಳೆಸಿಕೊಳ್ಳುವುದು ಉತ್ತಮ ಎಂದು ತಿಳಿಸಿದರು. ಗ್ರಾಪಂ ಸದಸ್ಯ ಶರಣಪ್ಪ ಪರಮ್ಮನವರ ಮಾತನಾಡಿದರು.
ಶಾಲಾ ಮಕ್ಕಳಿಂದ ವಿವಿಧ ಬೇಡಿಕೆ:ಗ್ರಾಪಂ ವ್ಯಾಪ್ತಿಯಲ್ಲಿ ಬರುವ ೫ ಶಾಲೆಯ ಮಕ್ಕಳು ತಮ್ಮ ಶಾಲೆಗೆ ಬೇಕಾದ ಮೂಲಭೂತ ಸೌಕರ್ಯಗಳ ಕುರಿತು ಪಟ್ಟಿ ಮಾಡಿ ಗ್ರಾಪಂ ಅಧ್ಯಕ್ಷರು, ಪಿಡಿಒ, ಕಾರ್ಯದರ್ಶಿ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸಲ್ಲಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕ ಕೃಷ್ಣ ಹುರಳಕುಪ್ಪಿ, ಮಕ್ಕಳ ಸಹಾಯವಾಣಿ ಮೇಲ್ವಿಚಾರಕರು ಪ್ರವೀಣ ಗೊಡ್ಡೆಮ್ಮಿ, ಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕ ರಾಘವೇಂದ್ರ ಸಿರೂರ್, ಕರ್ನಾಟಕ ಮಹಿಳಾ ಸಾಮಖ್ಯ ಸುನಂದಾ ಚಿನ್ನಪುರ, ಪಿಡಿಒ ಸಂಕಪ್ಪನವರ, ಗ್ರಾಪಂ ಕಾರ್ಯದರ್ಶಿ ಶ್ರೀನಿವಾಸ ಎನ್.ಕೆ., ಸದಸ್ಯರಾದ ಮೌಲಾಸಾಬ್ ನದಾಫ್, ಲಲಿತಾ ತುಕಾರಾಮ ನಾಯಕ, ಶಾಲಾ ಮುಖ್ಯೋಪಾಧ್ಯಾಯ ಪ್ರಶಾಂತ, ಸಹ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಪಂ ವ್ಯಾಪ್ತಿಯ ಶಾಲಾ ಮಕ್ಕಳು ಉಪಸ್ಥಿತರಿದ್ದರು.ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ, ಕಾರ್ಮಿಕ ಇಲಾಖೆ, ಕರ್ನಾಟಕ ಮಹಿಳಾ ಸಾಮಖ್ಯ, ಆರ್ಥಿಕ ಸಾಕ್ಷರತಾ ಕೇಂದ್ರ, ಗ್ರಾಪಂ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.