ಯಲಬುರ್ಗಾ:
ನೂತನ ಡಿಡಿಪಿಐ ಆಗಿ ಬಡ್ತಿ ಹೊಂದಿದ ಸೋಮಶೇಖರಗೌಡ ಪಾಟೀಲ್ ಅವರಿಗೆ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಶಿಕ್ಷಕರ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಗುರುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ ರೂಪುಗೊಳ್ಳಬೇಕಾದರೆ ಕ್ರಿಯಾಶೀಲತೆ ಅಳವಡಿಸಿಕೊಳ್ಳಬೇಕು. ಶಿಕ್ಷಕರ ಮೇಲೆ ಸಮುದಾಯದ ಭರವಸೆ ಹೆಚ್ಚಳವಾಗಬೇಕು. ಆ ನಿಟ್ಟಿನಲ್ಲಿ ವೃತ್ತಿ ಗೌರವ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ. ತಾಲೂಕಿನಲ್ಲಿ ಶಿಕ್ಷಣ ಕ್ಷೇತ್ರ ತುಂಬಾ ಸುಧಾರಣೆ ಕಂಡಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಬೇಕು. ಶಿಕ್ಷಣ ಇಲಾಖೆ ಮೂಲಕ ಸರ್ಕಾರ ಜಾರಿಗೊಳಿಸುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ ಎಂದರು.ತಾಲೂಕಿನಲ್ಲಿ ನಾನು ಬಿಇಒ ಆಗಿ ೧೧ ತಿಂಗಳು ಸೇವೆ ಸಲ್ಲಿಸುವ ಸೌಭಾಗ್ಯ ಸಿಕ್ಕಿದ್ದು ಖುಷಿ ತಂದಿದೆ. ಶಿಕ್ಷಕರ ಸಹಕಾರದಿಂದ ಇಲಾಖೆಯಲ್ಲಿ ಕೆಲ ಸುಧಾರಣೆ ತರಲು ಸಹಕಾರಿಯಾಗಿದೆ ಎಂದರು.
ಈ ವೇಳೆ ದೈಹಿಕ ಶಿಕ್ಷಣ ಪರಿವೀಕ್ಷಕ ವೀರಭದ್ರಪ್ಪ ಅಂಗಡಿ, ಶಿಕ್ಷಕರಾದ ಮಲ್ಲಿಕಾರ್ಜುನ ಬೇಲೇರಿ, ಶರಣಯ್ಯ ಸರಗಣಾಚಾರ, ಎಫ್.ಎಂ. ಕಳ್ಳಿ, ಸೂರ್ಯನಾರಾಯಣ, ಶಶಿಧರ ಮಾಲಿಪಾಟೀಲ, ಬಸವರಾಜ ಮುಳಗುಂದ, ಕಳಕಮಲ್ಲಪ್ಪ ಅಂತೂರ, ಸಂಗಪ್ಪ ರಾಜೂರ, ನಾಗರಾಜ ನಡುಲಕೇರಿ, ವೆಂಕಟೇಶ, ಸಂಗಯ್ಯ ಹಿರೇಮಠ ಸೇರಿದಂತೆ ಮತ್ತಿತರರು ಇದ್ದರು.