ನರಗುಂದ: ಶಾಲಾ ಆವರಣ ಮತ್ತು ಹೊಲಗಳ ಬದು ಸೇರಿದಂತೆ ತಾಲೂಕಿನಾದ್ಯಂತ 8600 ಗಿಡಗಳನ್ನು ನೆಡಲಾಗುತ್ತಿದೆ. ನೆಟ್ಟ ಗಿಡಗಳ ಸಂರಕ್ಷಣಾ ಜವಾಬ್ದಾರಿಯನ್ನು ಪ್ರತಿ ವಿದ್ಯಾರ್ಥಿಗೂ ಹಾಗೂ ಜನರಿಗೆ ನೀಡಬೇಕು. ಗಿಡಗಳ ಬೆಳೆಸುವಿಕೆ ಮತ್ತು ಸಂರಕ್ಷಿಸುವಿಕೆ ಕೇವಲ ಅರಣ್ಯ ಇಲಾಖೆ ಜವಾಬ್ದಾರಿ ಆಗಬಾರದು ಎಂದು ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.
ಕನ್ಹೇರಿ ಕಾಡಸಿದ್ದೇಶ್ವರ ಮಠದ ಆವರಣದಲ್ಲಿ 300 ಎಕರೆ ರೈತರ ಫಾರ್ಮ್ ಮಾಡಲಾಗಿದೆ. ಅಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗಿಡಗಳನ್ನು ನೆಡಲಾಗಿದೆ. ಕೊಲ್ಲಾಪುರ ಭಾಗದಲ್ಲಿ ಹೆಚ್ಚು ಬಿಸಿಲಿದ್ದರೆ, ಕನ್ಹೇರಿ ಮಠದ ಆವರಣದಲ್ಲಿ ಬಿಸಿಲಿನ ತಾಪಮಾನ ಕಡಿಮೆ ಇರುತ್ತದೆ. ಹೆಚ್ವಿನ ಗಿಡಗಳು ಜನರ ಆರೋಗ್ಯವನ್ನು ಸಂರಕ್ಷಣೆ ಮಾಡಲಿದೆ ಎಂದರು.ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಅವರ ಸಂಪುಟದಲ್ಲಿ ಅರಣ್ಯ ಸಚಿವ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವನಾಗಿದ್ದೆ. ಆಗ ಬಿಎಸ್ವೈ ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಖಾತೆಯನ್ನು ಮಾತ್ರ ವಹಿಸಿಕೊಳ್ಳಬೇಕೆಂದು ತಿಳಿಸಿದರು. ಗಣಿ ಖಾತೆಯಿಂದ ರಾಜ್ಯಕ್ಕೆ ವರ್ಷದಲ್ಲಿ 4500 ಕೋಟಿ ರು. ಸಂಪನ್ಮೂಲ ಕ್ರೋಡೀಕರಿಸಿ ಕೊಟ್ಟಿದ್ದೇನೆ. ಅರಣ್ಯ ಇಲಾಖೆಯಡಿ ತಾಲೂಕಿನಾದ್ಯಂತ ಸಾವಿರಾರು ಗಿಡಗಳನ್ನು ನೆಡಲಾಗಿದೆ ಎಂದರು.
ಪ್ರೌಢಶಾಲೆ ಹಾಗೂ ಪ್ರಾಥಮಿಕ ವಿಭಾಗದ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನ ಸಂಪೂರ್ಣ ಕಲ್ಲು, ಮಣ್ಣು, ಕಸಕಡ್ಡಿಗಳಿಂದ ಕೂಡಿದೆ. ಈ ವ್ಯವಸ್ಥೆ ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರಲಿದೆ. ಸರಿಯಾದ ಕಾಂಪೌಂಡ್ ಇಲ್ಲ, ಪಬ್ಲಿಕ್ ಶಾಲಾ ಕಟ್ಟಡ ನಿರ್ಮಿಸಿದ ಇಬ್ಬರೂ ಗುತ್ತಿಗೆದಾರರು ತಾವು ಪತ್ರ ಬರೆದು ಕೊಟ್ಟಂತೆ ಕೆಲಸವನ್ನು ಮಾಡಿಲ್ಲ. ಮಕ್ಕಳ ಶೈಕ್ಷಣಿಕ ಬೆಳವಣಿಗೆ ದೃಷ್ಟಿಯಿಂದ ಶಾಲಾ ಪ್ರದೇಶವನ್ನು ಸುಂದರಗೊಳಿಸಬೇಕೆಂದು ಗುತ್ತಿಗೆದಾರರಿಗೆ ಫೋನ್ ಕರೆ ಮೂಲಕ ತಿಳಿಸಿದರು.ವಲಯ ಅರಣ್ಯಾಧಿಕಾರಿ ಸಿ.ಜಿ. ಮುದ್ದನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್ಡಿಎಮ್ಸಿ ಅಧ್ಯಕ್ಷ ಮಹಾದೇವ ಭೋಸಲೆ, ಬಿಇಒ ಎಂ.ಎಚ್. ಕಂಬಳಿ, ತಾಪಂ ಇಒ ಶ್ರೀಧರ ಚಿನಗುಳಿ, ಪಿಡಿಒ ಮಂಜುನಾಥ ಗಣಿ, ಅರಣ್ಯಾಧಿಕಾರಿ ಮುತ್ತಪ್ಪ ಗಡ್ಡಿ, ಪಿಯುಸಿ ವಿಭಾಗದ ಮುಖ್ಯ ಶಿಕ್ಷಕ ಖಾನಾಪೂರ, ಈರಪ್ಪ ಸುಂಕದ, ಮುಖ್ಯ ಶಿಕ್ಷಕ ಎಸ್.ವೈ. ಪಾಟೀಲ, ಭೀಮಪ್ಪ ಕಡ್ಲಿಕೊಪ್ಪ, ಗುರಪ್ಪ ಆದೆಪ್ಪನವರ, ಎಸ್.ಎಸ್. ಜಕಬಾಳ, ರಾಚಪ್ಪ ಅಳಗವಾಡಿ, ಶಿವು ಕಲ್ಲಾಪೂರ, ಮುಖ್ಯ ಶಿಕ್ಷಕ ಎಸ್.ವೈ. ಪಾಟೀಲ ಸ್ವಾಗತಿಸಿದರು. ಶಿಕ್ಷಕಿ ಗೀತಾ ಪೂಜಾರ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಎಸ್.ಎಸ್. ಪಾಟೀಲ ವಂದಿಸಿದರು.