ದಾಬಸ್ಪೇಟೆ: ಸೋಂಪುರ ಹೋಬಳಿಯ ಶಿವಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್ ತೆರಳಿದ್ದ ಟೆಕ್ಕಿ ಅದ್ವೈತ್ ಉಪಾಧ್ಯಾಯ ಮೂರನೇ ದಿನವೂ ಪತ್ತೆಯಾಗದೆ ಐದು ತಂಡಗಳು ಹುಡುಕಾಟವನ್ನು ಮುಂದುವರೆಸಿದ್ದಾರೆ.
ನೆಲಮಂಗಲ ನಗರ ಠಾಣೆ ಇನ್ಸ್ ಪೆಕ್ಟರ್ ಭರತ್ ಗೌಡರ ನೇತೃತ್ವದಲ್ಲಿ ಕಾಡುಗೋಡಿ, ದಾಬಸ್ಪೇಟೆ, ನೆಲಮಂಗಲ ಪೊಲೀಸರು ಸೇರಿದಂತೆ 30 ಎಸ್ಡಿಆರ್ಎಫ್, 1 ಎನ್ಡಿಆರ್ಎಫ್ ತಂಡ, 15 ಅರಣ್ಯ ರಕ್ಷಕರು, 30ಕ್ಕೂ ಹೆಚ್ಚು ಪೊಲೀಸರು, 10 ಜನ ಸ್ವಯಂಸೇವಕರು, 5 ಜನ ಅಧಿಕಾರಿಗಳನ್ನೊಳಗೊಂಡ 5 ತಂಡ ರಚಿಸಿ ಶಾಂತಲಾ ಡ್ರಾಫ್, ಮೈಥಿಲ ತೀರ್ಥ, ಕಪಿಲ ತೀರ್ಥ, ಕಣ್ವತೀರ್ಥ, ಮುದ್ವಿರೇಶ್ವರ ದೇವಾಲಯ, ಗಿರಿ ಪ್ರದಕ್ಷಿಣೆ ರಸ್ತೆ ಸೇರಿದಂತೆ ಬೆಟ್ಟದ ಸುತ್ತಲೂ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
8 ಡ್ರೋನ್, ಥಾರ್ಮಲ್ ಡ್ರೋನ್ ಕಾರ್ಯಾಚರಣೆ:ಸೋಮವಾರ ಸಂಜೆಯವರೆಗೂ ಹೈ ರೆಸುಲ್ಯೂಷನ್ ಡ್ರೋನ್ ಕ್ಯಾಮರಾ ಬಾಡಿ ಫೌಂಡ್ ಮೆಟಲ್ ಡಿಟೆಕ್ಟರ್ ಕ್ಯಾಮರಾ ಶೋಧಿಸಿದರೂ ಪತ್ತೆಯಾಗಿಲ್ಲ. ಮಂಗಳವಾರವೂ ಶೋಧ ಕಾರ್ಯ ಮುಂದುವರಿಯಲಿದೆ. ಶಾಂತಲಾ ಡ್ರಾಪ್ ಬಳಿ ಪೊಲೀಸರು ಹೆಚ್ಚು ಶೋಧಿಸುತ್ತಿದ್ದಾರೆ.
ಅದ್ವೈತ್ಗೆ ಇತ್ತೀಚೆಗಷ್ಟೇ ಮದುವೆ ನಿಶ್ಚಯವಾಗಿ ನಿಶ್ಚಿತಾರ್ಥವೂ ನಡೆದಿತ್ತು. ಆತ ಶಿವಗಂಗೆ ಬೆಟ್ಟ ಹತ್ತುತ್ತಿದ್ದಂತೆ ಅಲ್ಲಿನ ಫೋಟೋವೊಂದನ್ನು ನಿಶ್ಚಯವಾಗಿದ್ದ ಯುವತಿಗೆ ಕಳುಹಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಕಾಡುಗೋಡಿಯ ಅದ್ವೈತ್ ನಿವಾಸದಲ್ಲಿ ಪರಿಶೀಲಿಸಿದ ವೇಳೆ ದೊರೆತಿರುವ ಆತನ ಲ್ಯಾಪ್ಟಾಪ್ನಲ್ಲಿ ಇಂಟರ್ನೆಟ್ನಲ್ಲಿ ಚಾಟ್ ಜಿಪಿಟಿ ಹಾಗೂ ಎಐ ಮೂಲಕ ಆತ್ಮಹತ್ಯೆ ಬಗ್ಗೆ ಸರ್ಚ್ ಮಾಡಿದ್ದಾನೆ. ಶಿವಗಂಗೆಯ ಶಾಂತಲಾ ಡ್ರಾಪ್ ಬಗ್ಗೆಯೂ ಇಂಟರ್ನೆಟ್ನಲ್ಲಿ ಹುಡುಕಾಡಿದ್ದು, ಶಿವಗಂಗೆಯ ಶಾಂತಲಾ ಡ್ರಾಪ್ನಿಂದ ಬಿದ್ದರೆ ಎಷ್ಟು ಸಮಯಕ್ಕೆ ಸಾವು ಸಂಭವಿಸಬಹುದು ಎಂಬ ಬಗ್ಗೆ ಅದ್ವೈತ್ ಮಾಹಿತಿ ಹುಡುಕಿದ್ದರೆಂದು ಬೆಳಕಿಗೆ ಬಂದಿದೆ. ಅದ್ವೈತ್ ಆ.4ರಂದು ಕೂಡ ಶಿವಗಂಗೆ ಬೆಟ್ಟಕ್ಕೆ ಬಂದು ಶಾಂತಲಾ ಡ್ರಾಪ್ ಪರಿಶೀಲಿಸಿಕೊಂಡು ಹೋಗಿದ್ದಲ್ಲದೆ ತನ್ನ ಬಳಿಯಿದ್ದ ಡ್ರೋನ್ನಿಂದಲೂ ವೀಕ್ಷಿಸಿರುವ ಮಾಹಿತಿಯೂ ಲಭ್ಯವಾಗಿದೆ.
ಕಪಿಲ ತೀರ್ಥದ ಬಳಿಯಿರುವ ಶಾಂತಲಾ ಡ್ರಾಪ್ಗೆ ಹೋಗಲು ಪೊಲೀಸರು ಸೇರಿ ಎಲ್ಲರೂ ಹರ ಸಾಹಸಪಡಬೇಕಾದ ಪರಿಸ್ಥಿತಿ ಇದೆ. ಬೆಟ್ಟ ಹತ್ತುವಾಗ ಬಂಡೆಗಳು ಜಾರುತ್ತಿದ್ದು, ಅದಲ್ಲದೆ ಬೆಟ್ಟದಲ್ಲಿ ಕಾಡು ಪ್ರಾಣಿಗಳನ್ನೂ ಲೆಕ್ಕಿಸದೆ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಪೋಟೋ 7 * 8 :