
ಕನ್ನಡಪ್ರಭ ವಾರ್ತೆ, ತುಮಕೂರು
ರಾಷ್ಟ್ರೀಯ ಅನುವಾದ ಮಿಷನ್, ಭಾರತೀಯ ಭಾಷೆಗಳ ಸಂಸ್ಥಾನ ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಜಂಟಿಯಾಗಿ ಹಮ್ಮಿಕೊಂಡಿದ್ದ ಮೂರು ದಿನಗಳ ಅನುವಾದ ಕೌಶಲ್ಯಾಭಿವೃದ್ಧಿ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಮಾನವ ಅನುವಾದಕರಿಗೆ ಬೇಡಿಕೆ ಅಥವಾ ಕೆಲಸ ಇಲ್ಲದೇ ಹೋಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆಯಾದರೂ, ಅಂಕಿ-ಅಂಶಗಳ ಪ್ರಕಾರ ಅನುವಾದಕರಿಗೆ ಉದ್ಯೋಗಾವಕಾಶಗಳು ಹೆಚ್ಚಾಗಿವೆ. ಅನುವಾದ ಕೇವಲ ಭಾಷಾ ಪಂಡಿತರಿಗೆ ಮಾತ್ರ ಸೀಮಿತವಾದುದಲ್ಲ. ಪ್ರಸ್ತುತ ದಿನಗಳಲ್ಲಿ ಎಲ್ಲ ವಲಯಗಳಲ್ಲೂ ಅನುವಾದದ ಅಗತ್ಯವಿರುವುದರಿಂದ, ಆಯಾ ಕ್ಷೇತ್ರಗಳ ಪರಿಣಿತರು ಅನುವಾದ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ಮುಖ್ಯವಾಗಿದೆ. ಆಕರ ಪಠ್ಯ ಮತ್ತು ಸ್ವೀಕಾರ ಪಠ್ಯಗಳ ಸೂಕ್ತ ಬಳಕೆಯನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವುದೇ ಈ ಕಾರ್ಯಾಗಾರದ ಪ್ರಮುಖ ಉದ್ದೇಶ ಎಂದರು.ಅನುವಾದ ಮಾಡುವಾಗ ಪಾರಿಭಾಷಿಕ ಮತ್ತು ಸ್ಥಳೀಯ ಭಾಷಾ ಸೊಗಡನ್ನು ಗಮನದಲ್ಲಿಟ್ಟುಕೊಳ್ಳಬೇಕು ಹಾಗೂ ಕ್ಲಿಷ್ಟ ಪದಗಳಿಗೆ ಸೂಕ್ತ ವಿವರಣೆ ನೀಡಬೇಕಾಗುತ್ತದೆ. ನಮ್ಮ ಭಾಷೆಯಿಂದ ಮತ್ತೊಂದು ಭಾಷೆಗೆ ಇದ್ದದ್ದನ್ನು ಇದ್ದ ಹಾಗೆಯೇ ತರ್ಜುಮೆ ಮಾಡುವುದು ಕಷ್ಟಸಾಧ್ಯ, ಆದರೆ ಅನ್ಯಭಾಷೆಯಿಂದ ನಮ್ಮ ಭಾಷೆಗೆ ಅದೇ ರೂಪದಲ್ಲಿ ತರುವುದು ಸುಲಭವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪರೀಕ್ಷಾಂಗ ಕುಲಸಚಿವ ಪ್ರೊ. ಮೋಹನ ಎಚ್. ಎಸ್. ಮಾತನಾಡಿ, ಭಾಷೆ ಎಂಬುದು ಕೇವಲ ಸಂವಹನದ ವಾಹಕವಲ್ಲ, ಅದೊಂದು ಸಾಂಸ್ಕೃತಿಕ ಜಗತ್ತು. ಅದನ್ನು ಓದಿ ಆಳವಾಗಿ ಅರ್ಥೈಸಿಕೊಳ್ಳಲು ಅನುವಾದದ ನೆರವು ಬೇಕೇ ಬೇಕು. ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಹೆಚ್ಚಾಗಬೇಕು ಮತ್ತು ಸಾಹಿತ್ಯದ ಬಗೆಗಿನ ಆಲೋಚನಾ ಕ್ರಮಗಳು ಬದಲಾಗಬೇಕು ಎಂದರು.