ಒತ್ತುವರಿಯಾಗಿದ್ದ ಗ್ರಾಮಠಾಣಾ ಜಾಗ ತೆರವುಗೊಳಿಸಿದ ತಹಸೀಲ್ದಾರ್

KannadaprabhaNewsNetwork | Published : Oct 3, 2024 1:20 AM

ಒಂದೂವರೆ ವರ್ಷದ ಹಿಂದೆ ಪಂಚಾಯ್ತಿ ವ್ಯಾಪ್ತಿಗೆ ಸೇರಿರುವ ೧.೩೬ ಎಕರೆ ಗ್ರಾಮಠಾಣಾವನ್ನು ತೆರವು ಮಾಡಿ ಗ್ರಾಪಂಗೆ ನೀಡಿ ಎಂದು ಅತಿಕ್ರಮಣದಾರರಿಗೆ ತಿಳಿಹೇಳಲಾಗಿತ್ತಾದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಬೇಲೂರು: ಹಲವಾರು ವರ್ಷಗಳಿಂದ ಖಾಸಗಿ ಕಾಫಿ ಎಸ್ಟೇಟ್ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದ ಗ್ರಾಮಠಾಣಾ ಪ್ರದೇಶವನ್ನು ತಹಸೀಲ್ದಾರ್ ಎಂ.ಮಮತಾ ಖುದ್ದು ಸ್ಥಳಕ್ಕೆ ಭೇಟಿ ನೀಡಿ, ವಿವಿಧ ಅಧಿಕಾರಿಗಳ ಸಮ್ಮುಖದಲ್ಲಿ ಜೆಸಿಬಿ ಯಂತ್ರಗಳ ಸಹಾಯದಿಂದ ತೆರವು ಕಾರ್‍ಯಾಚರಣೆ ನಡೆಸಿ, ಆ ಪ್ರದೇಶವನ್ನು ಪುನಃ ಗ್ರಾಮ ಪಂಚಾಯಿಯು ತನ್ನ ಸುಪರ್ದಿಗೆ ತೆಗೆದುಕೊಂಡ ಘಟನೆಯು ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ನಾರ್ವೆ ಗ್ರಾಪಂ ವ್ಯಾಪ್ತಿಯ ಬ್ಯಾದನೆ ಗ್ರಾಮದಲ್ಲಿ ನಡೆದಿದೆ.

ತೆರವು ಕಾರ್ಯ ಉದ್ದೇಶಿಸಿ ನಾರ್ವೆ ಗ್ರಾಪಂ ಉಪಾಧ್ಯಕ್ಷ ಮಲ್ಲಿಕಾರ್ಜುನ ಸುಲಗಳಲೆ ಮಾತನಾಡಿ, ಒಂದೂವರೆ ವರ್ಷದ ಹಿಂದೆ ಪಂಚಾಯ್ತಿ ವ್ಯಾಪ್ತಿಗೆ ಸೇರಿರುವ ೧.೩೬ ಎಕರೆ ಗ್ರಾಮಠಾಣಾವನ್ನು ತೆರವು ಮಾಡಿ ಗ್ರಾಪಂಗೆ ನೀಡಿ ಎಂದು ಅತಿಕ್ರಮಣದಾರರಿಗೆ ತಿಳಿಹೇಳಲಾಗಿತ್ತಾದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನಾರ್ವೆ ಗ್ರಾಪಂ ವ್ಯಾಪ್ತಿಯ ಬ್ಯಾದನೆ, ಹೆಗ್ಗದ್ದೆ ಸೇರಿ ಹಲವು ಗ್ರಾಮಗಳ ವಸತಿ ರಹಿತರು ನಿವೇಶನವನ್ನು ಒದಗಿಸುವಂತೆ ಕೋರಿ ಒಟ್ಟು ೧೮೦ ಅರ್ಜಿಗಳು ಬಂದಿದ್ದವು. ಈ ನಿಟ್ಟಿನಲ್ಲಿ ವಸತಿ ರಹಿತರಿಗೆ ವಸತಿ ಒದಗಿಸುವ ಉದ್ದೇಶದಿಂದ ಅಕ್ರಮವಾಗಿ ಒತ್ತುವರಿ ಮಾಡಿರುವ ಗ್ರಾಮಠಾಣಾ ಪ್ರದೇಶಗಳನ್ನು ಗ್ರಾಪಂಯು ವಶಪಡಿಸಿಕೊಳ್ಳಲು ನಿರ್ಧರಿಸಿದೆ ಎಂದು ತಿಳಿಸಿದರು.

ನಾರ್ವೆ ಗ್ರಾಪಂ ಮಾಜಿ ಉಪಾಧ್ಯಕ್ಷ ಪೂರ್ಣೇಶ್ ಮಾತನಾಡಿ, ಶಾಸಕರ ಹಾಗೂ ಅಧಿಕಾರಿಗಳ ಸಹಕಾರದಿಂದ ಗ್ರಾಮಠಾಣಾ ಪ್ರದೇಶವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿದೆ. ಹಾಗಾಗಿ ಬ್ಯಾದನೆ ಗ್ರಾಮದಲ್ಲಿರುವ ಗ್ರಾಮಠಾಣಾ ಪ್ರದೇಶವನ್ನು ಇದೇ ಗ್ರಾಮದ ಗ್ರಾಮಸ್ಥರಿಗೆ ಮೀಸಲಿಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು.

ಕಾರ್‍ಯಾಚರಣೆ ವೇಳೆ ಪಿಡಿಒ ಚಂದ್ರಯ್ಯ, ಆರ್‌ಐ ಚಂದ್ರೆಗೌಡ,ತಾಪಂ ಇಒ ವಸಂತ್ ಕುಮಾರ್, ಗ್ರಾಪಂ ಅಧ್ಯಕ್ಷೆ ಮಾಲಾಶ್ರೀ, ಗ್ರಾಪಂ ಸದಸ್ಯರಾದ ಮಲ್ಲಿಕಾರ್ಜುನ್ ನಾರ್ವೆ, ಚಿದಾನಂದ್, ಮಂಜುನಾಥ್, ಪವಿತ್ರ, ಬೇಬಿ, ವೀಣಾ, ಮುಖಂಡರಾದ ಇಸ್ಮಾಯಿಲ್, ಸೋಮಯ್ಯ, ನಿಂಗರಾಜು, ಕಾರ್‍ಯದರ್ಶಿ ಚಾಮರಾಜ್,ಪೊಲೀಸ್ ಅಧಿಕಾರಿಗಳು ಹಾಗೂ ಬ್ಯಾದನೆ ಗ್ರಾಮಸ್ಥರು ಇದ್ದರು.