- ರಾಜ್ಯದ 28 ಕ್ಷೇತ್ರ ನಾವು ಗೆಲ್ಲುತ್ತೇವೆ ಎಂದ ಮಾಜಿ ಸಿಎಂ । 2 ಲಕ್ಷ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಗೆಲ್ತಾರೆಂದು ಭವಿಷ್ಯ
- - - ಕನ್ನಡಪ್ರಭ ವಾರ್ತೆ ದಾವಣಗೆರೆರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ನಾನು ಘಂಟಾಘೋಷವಾಗಿ ಹೇಳುತ್ತೇನೆ. ಕಾಂಗ್ರೆಸ್ಸಿನವರಿಗೆ ತಾಕತ್ತಿದ್ದರೆ ತಾವು ಗೆಲ್ಲುವ ಒಂದೆರೆಡು ಕ್ಷೇತ್ರಗಳ ಹೆಸರು ಹೇಳಲಿ ನೋಡೋಣ ಎಂದು ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸವಾಲು ಹಾಕಿದರು.
ಮಾಯಕೊಂಡ ವಿಧಾನಸಭಾ ಕ್ಷೇತ್ರದ ತ್ಯಾವಣಿಗೆ ಗ್ರಾಮದಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಇಡೀ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಎಲ್ಲ 28 ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಲಿದ್ದು, ದಾವಣಗೆರೆಯಲ್ಲೂ ಗಾಯತ್ರಿ ಸಿದ್ದೇಶ್ವರ ಕನಿಷ್ಠ 1.5 ಲಕ್ಷದಿಂದ 2 ಲಕ್ಷಗಳ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದರು.ದೇಶದಲ್ಲಿ ಈಗ ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಲೋಕಸಭೆ ಚುನಾವಣೆ ನಂತರ ಇಡೀ ಕಾಂಗ್ರೆಸ್ ಧೂಳೀಪಟ ಆಗುತ್ತದೆ. ಇಷ್ಟು ವರ್ಷ ಹಣ, ಹೆಂಡ, ತೋಳ್ಬಲ, ಅಧಿಕಾರದ ಬಲದಿಂದ ಜಾತಿಯ ವಿಷಬೀಜ ಬಿತ್ತಿ ಅಧಿಕಾರಕ್ಕೆ ಬರುತ್ತಿದ್ದ ಕಾಂಗ್ರೆಸ್ಸಿನ ಆಟ ಇನ್ನು ಮುಂದೆ ನಡೆಯುವುದಿಲ್ಲ. ಜನತೆ ಬುದ್ಧಿವಂತರಾಗಿದ್ದಾರೆ. ನರೇಂದ್ರ ಮೋದಿ ಆಡಳಿತ ದೇಶದ ಜನತೆ ಮೆಚ್ಚಿದ್ದಾರೆ. ರಾಜ್ಯದ 28 ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವುದು, ಮೋದಿ ಮೂರನೇ ಬಾರಿಗೆ ಪ್ರಧಾನಿ ಆಗಿರುವುದು ಸೂರ್ಯ-ಚಂದ್ರರು ಇರುವುದು ಎಷ್ಟು ಸತ್ಯವೋ, ಅಷ್ಟೇ ಸತ್ಯ ಎಂದು ಅವರು ಹೇಳಿದರು.
ದಾವಣಗೆರೆಯಲ್ಲಿ ಗಾಯತ್ರಿ ಸಿದ್ದೇಶ್ವರ ಗೆಲ್ಲುವುದು, ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗುವುದು ಅಷ್ಟೇ ಸತ್ಯ. ಇಲ್ಲಿ ಸೇರಿದ ಜನಸಮೂಹ ಕಂಡರೆ ಗಾಯತ್ರಿ ಸಿದ್ದೇಶ್ವರ ಒಂದೂವರೆಯಿಂದ ಎರಡು ಲಕ್ಷ ಮತಗಳ ಅಂತರದ ಗೆಲುವು ದಾಖಲಿಸುತ್ತಾರೆ ಎಂಬುದು ಸ್ಪಷ್ಟವಾಗಿದೆ. ನೀವೆಲ್ಲರೂ ಇಂದಿನಿಂದಲೇ ಪ್ರತಿ ಗ್ರಾಮ, ನಗರ, ಪಟ್ಟಣದ ಮನೆ ಮನೆಗೆ ಹೋಗಿ, ಕೇಂದ್ರದ ಯೋಜನೆ ತಿಳಿಸಬೇಕು. ಮೋದಿ ಸರ್ಕಾರ, ವಿಕಸಿತ ಭಾರತ, ವಿಕಸಿತ ದಾವಣಗೆರೆ ನೀವು, ಇಲ್ಲಿನ ಮತದಾರರು ಮುನ್ನುಡಿ ಬರೆಯಬೇಕು ಎಂದು ಅವರು ಸಲಹೆ ನೀಡಿದರು.ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮಾತನಾಡಿ, ದೇಶದ 80 ಕೋಟಿ ಜನರಿಗೆ 5 ಕೆಜಿ ಉಚಿತ ಪಡಿತರ ನೀಡುತ್ತಿರುವುದು ನರೇಂದ್ರ ಮೋದಿ ಸರ್ಕಾರ. ಆದರೆ, ಅಕ್ಕಿ ಮೂಟೆ ಮೇಲೆ ಕಾಂಗ್ರೆಸ್ ತನ್ನ ಹೆಸರು ಹಾಕಿಸಿಕೊಳ್ಳುತ್ತಿದೆ. ಮೋದಿಗೆ ಸಮಾನವಾದ ನಾಯಕನಾಗಲೀ, ನಾಯಕತ್ವವಾಗಲೀ ಕಾಂಗ್ರೆಸ್ಸಿನಲ್ಲಿ ಇಲ್ಲ. ನಾವು ಧೈರ್ಯದಿಂದ ಹೇಳುತ್ತೇವೆ, ನಮ್ಮ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದೀಜಿ ಅಂತಾ. ಕಾಂಗ್ರೆಸ್ಸಿಗರಿದೆ ತಾಕತ್ತಿದ್ದರೆ ತಮ್ಮ ಅಭ್ಯರ್ಥಿ ಹೆಸರನ್ನು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.
ದೇಶದಲ್ಲಿ ನರೇಂದ್ರ ಮೋದಿ, ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಮಾಡಿದ ಕೆಲಸಗಳು, ದಾವಣಗೆರೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ತಂದ ಯೋಜನೆಗಳನ್ನು ಗಮನಿಸಿ, ಜನತೆ ಬಿಜೆಪಿಗೆ ಬೆಂಬಲಿಸುತ್ತಿದ್ದಾರೆ. ನೀವು ನೀಡುವ ಒಂದೊಂದು ಮತವು ದೇಶದ ಬದಲಾವಣೆ, ರಕ್ಷಣೆ, ಸುಭದ್ರತೆಗೆ ಅಡಿಪಾಯವಾಗುತ್ತದೆ. ಭಾರತವನ್ನು ವಿಶ್ವಗುರುವಾಗಿ ಮಾಡುತ್ತದೆ. ಮಹಿಳಾ ಸಬಲೀಕರಣ, ಯುವಶಕ್ತಿ ಬಲಪಡಿಸಲು ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕೆಂಬುದು ಜನರ ಸಂಕಲ್ಪ. ನೀವೆಲ್ಲರೂ ನನ್ನ ಕಮಲದ ಹೂವಿನ ಗುರುತಿಗೆ ಮತ ನೀಡಿ, ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.ಪಕ್ಷದ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ, ವಿಪ ಸದಸ್ಯ ರವಿಕುಮಾರ, ಮಾಜಿ ಶಾಸಕರಾದ ಮಾಡಾಳ್ ವಿರುಪಾಕ್ಷಪ್ಪ, ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ, ಪ್ರೊ. ಎನ್.ಲಿಂಗಣ್ಣ, ಎಂ.ಬಸವರಾಜ ನಾಯ್ಕ, ದೂಡಾ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್, ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಜೆಡಿಎಸ್ ಮುಖಂಡ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ, ಜೆಡಿಯು ರಾಜ್ಯಾಧ್ಯಕ್ಷ, ಮಾಜಿ ಶಾಸಕ ಮಹಿಮಾ ಜೆ.ಪಟೇಲ್. ಮುಖಂಡರಾದ ತೇಜಸ್ವಿ ವಿ.ಪಟೇಲ್, ಹಾರಿಕಾ ಮಂಜುನಾಥ, ಬಿಜೆಪಿ ಮುಖಂಡರಾದ ಮಾಡಾಳ ಮಲ್ಲಿಕಾರ್ಜುನ, ದೇವೇಂದ್ರಪ್ಪ, ಶಿವಾನಂದಮೂರ್ತಿ, ಜಿ.ಎಸ್.ಶ್ಯಾಮ ಮಾಯಕೊಂಡ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ ಸೇರಿದಂತೆ ಅನೇಕ ಮುಖಂಡರು, ಸಾವಿರಾರು ಕಾರ್ಯಕರ್ತರು ಇದ್ದರು.
- - - ಕೋಟ್ದಾವಣಗೆರೆ ಒಂದು ಕಾಲದಲ್ಲಿ ಕರ್ನಾಟಕದ ಮ್ಯಾಂಚೆಸ್ಟರ್ ಸಿಟಿಯಾಗಿತ್ತು. ಮುಂದಿನ ದಿನಗಳಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾಫ್ಟ್ವೇರ್ ಪಾರ್ಕ್, ವಿಮಾನ ನಿಲ್ದಾಣ, ಆರೋಗ್ಯ ಸುಧಾರಣೆ, ವಿಶೇಷ ಆರ್ಥಿಕ ವಲಯ ಸ್ಥಾಪಿಸುವ ಮೂಲಕ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು - ಬಿ.ಎಸ್.ಯಡಿಯೂರಪ್ಪ. ಮಾಜಿ ಸಿಎಂ - - - ಬಾಕ್ಸ್-1ಕಾಂಗ್ರೆಸ್ ನಾಯಕರು ಶ್ರೀರಾಮನ ವಿರೋಧಿಗಳು
ನರೇಂದ್ರ ಮೋದಿ ಈಗಾಗಲೇ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ದೇಶದ ಜನತೆ ನಮ್ಮ ಪ್ರಣಾಳಿಕೆ ಒಪ್ಪಿದ್ದಾರೆ. 2024ಕ್ಕೆ ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷವೇ ಇರುವುದಿಲ್ಲ. ಮೋದಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಿ, ರಾಮಲಲ್ಲಾನ ಪ್ರತಿಷ್ಟಾಪನೆ, ದೇವಾಲಯ ಉದ್ಘಾಟನೆಗೆ ಕಾಂಗ್ರೆಸ್ಸಿನ ನಾಯಕರಿಗೆ ಆಹ್ವಾನ ನೀಡಿದ್ದರು. ಆದರೆ, ಯಾವೊಬ್ಬ ಕಾಂಗ್ರೆಸ್ಸಿನ ನಾಯಕರೂ ಬರಲಿಲ್ಲ. ಕಾಂಗ್ರೆಸ್ಸಿನ ನಾಯಕರೆಲ್ಲಾ ಶ್ರೀರಾಮನ ವಿರೋಧಿಗಳು ಎಂದು ಬಿಎಸ್ವೈ ಟೀಕಿಸಿದರು.ಅಂಬೇಡ್ಕರ್ ವಿರೋಧಿ: ಕಾಂಗ್ರೆಸ್ ಪಕ್ಷವು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿರೋಧಿಯಾಗಿದೆ. ನಿನ್ನೆಯಷ್ಟೇ ಅಂಬೇಡ್ಕರ್ ಜಯಂತಿ ಮಾಡಿದ್ದೇನೆ. ಕಾಂಗ್ರೆಸ್ಸಿಗರು ಅಂಬೇಡ್ಕರ್ಗೆ ಭಾರತ ರತ್ನ ಗೌರವ ನೀಡಲಿಲ್ಲ. ಪರಿಶಿಷ್ಟ ಜಾತಿ-ಪಂಗಡಗಳ ವಿರೋಧಿ ಕಾಂಗ್ರೆಸ್ ಪಕ್ಷವಾಗಿದೆ. ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿಟ್ಟಿದ್ದ 11 ಸಾವಿರ ಕೋಟಿಗೂ ಅದಿಕ ಹಣವನ್ನು ಬೇರೆಯದ್ದಕ್ಕೆ ವ್ಯಯಿಸಿ, ಪರಿಶಿಷ್ಟರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದೆ ಎಂದು ದೂರಿದರು.
- - --15ಕೆಡಿವಿಜಿ13, 14, 15, 16, 17, 18:
ದಾವಣಗೆರೆ ಲೋಕಸಭಾ ಕ್ಷೇತ್ರದ ತ್ಯಾವಣಿಗೆಯಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಪ್ರಚಾರ ಸಭೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿದರು.