ರೋಣ: ವಿದ್ಯಾರ್ಥಿಗಳಿಗೆ ಕೇವಲ ಪಠ್ಯದ ಜ್ಞಾನವಷ್ಟೇ ಸಾಲದು. ಅವರು ಸತ್ಪ್ರಜೆಗಳಾಗುವಲ್ಲಿ ಶಿಸ್ತು, ಸದೃಢ ಆರೋಗ್ಯ ಹಾಗೂ ಕ್ರೀಡಾ ಮನೋಭಾವನೆಯನ್ನು ಬೆಳೆಸುವಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಅತ್ಯಂತ ಅನನ್ಯ. ಇಂತಹ ಕಾರ್ಯ ಮಾಡಿದ ದೈಹಿಕ ಶಿಕ್ಷಕ ಜೆ.ಎಸ್. ಪಾಟೀಲ ಅವರ ಸೇವೆ ಶ್ಲಾಘನೀಯ ಎಂದು ಹೊಳೆಆಲೂರಿನ ಯಚ್ಚರೇಶ್ವರ ಮಠದ ಯಚ್ಚರೇಶ್ವರ ಸ್ವಾಮೀಜಿ ತಿಳಿಸಿದರು.ತಾಲೂಕಿನ ಹುಲ್ಲೂರು ಗ್ರಾಮದಲ್ಲಿ ಜರುಗಿದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಸಮಾರಂಭ ಹಾಗೂ ಬೆನಹಾಳ ಸಿ.ಬಿ. ಪಾಟೀಲ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಜೆ.ಎಸ್. ಪಾಟೀಲರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ದೈಹಿಕ ಶಿಕ್ಷಕ ಜೆ.ಎಸ್. ಪಾಟೀಲ ಅವರು ಹುಲ್ಲೂರು, ಬೆನಹಾಳ, ಹಿರೇಹಾಳ ಸೇರಿದಂತೆ ವಿವಿಧೆಡೆ 38 ವರ್ಷ ಸುದೀರ್ಘ ಸೇವಾವಧಿಯಲ್ಲಿ ನೂರಾರು ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಕ್ರೀಡಾ ರಂಗದಲ್ಲಿ ಉತ್ತೇಜನ ನೀಡಿದ್ದಾರೆ. ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿದಾರರಾಗಿಯೂ ಸೇವೆ ಸಲ್ಲಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ತಾಪಂ ಮಾಜಿ ಉಪಾಧ್ಯಕ್ಷ ದಶರಥ ಗಾಣಿಗೇರ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ಜಿ. ದಾನಪ್ಪಗೌಡ್ರ, ಪ್ರಾಥಮಿಕ ಶಾಲಾ ನೌಕರರ ಸಂಘ ಅಧ್ಯಕ್ಷ ವೈ.ಡಿ. ಗಾಣಿಗೇರ, ಮುದಿಯಪ್ಪ ಕರಡಿ, ಶರಣಬಸಯ್ಯ ಹಿರೇಮಠ ನಿಜಗುಣಯ್ಯ ಹಿರೇಮಠ, ಆಶಾ ಪಾಟೀಲ, ನಾಗರಾಜ ಹುಡೇದ, ಶರತ ದೇಸಾಯಿ, ಮಂಜುನಾಥ ಓಂಕಳಿ ಮುಂತಾದವರು ಉಪಸ್ಥಿತರಿದ್ದರು. ಸಿ.ಎಂ. ವಡಗೇರಿ ನಿರೂಪಿಸಿ, ವಂದಿಸಿದರು.ಇಂದು ಅಡವೀಂದ್ರಸ್ವಾಮಿ ಮಠದಲ್ಲಿ ಶಿವಾನುಭವ
ಗದಗ: ನಗರದ ಮುಳಗುಂದ ನಾಕಾದ ಹತ್ತಿರ ಇರುವ ಅಡವೀಂದ್ರಸ್ವಾಮಿ ಮಠದಲ್ಲಿ ಜು. 7ರಂದು ಸಂಜೆ 6.30ಕ್ಕೆ 349ನೇ ಮಾಸಿಕ ಶಿವಾನುಭವ ಜರುಗಲಿದೆ. ಅಡ್ನೂರು ಬೃಹನ್ಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅಡವೀಂದ್ರಸ್ವಾಮಿ ಮಠದ ಧರ್ಮದರ್ಶಿ ಮಹೇಶ್ವರ ಸ್ವಾಮಿಗಳು ಕಾರ್ಯಕ್ರಮದ ಸಮ್ಮುಖ ವಹಿಸುವರು. ಶಿವಾನುಭವ ಸಮಿತಿಯ ಅಧ್ಯಕ್ಷ ಹಿರಿಯ ಸಾಹಿತಿ ಡಾ. ರಾಜೇಂದ್ರ ಎಸ್. ಗಡಾದ ಅಧ್ಯಕ್ಷತೆ ವಹಿಸುವರು.ಹುಬ್ಬಳ್ಳಿ ಕೆಎಲ್ಇ ಟೆಕ್ನಾಲಾಜಿಕಲ್ ಯುನಿವರ್ಸಿಟಿಯ ಪ್ರೊ. ವಿರುಪಾಕ್ಷಯ್ಯ ಹೊಸಳ್ಳಿಮಠ ಅವರು ಕೇದಾರ, ಬದರಿನಾಥ ಪುಣ್ಯಕ್ಷೇತ್ರಗಳ ದರ್ಶನದ ಮಹಿಮೆ ಕುರಿತು ಉಪನ್ಯಾಸ ನೀಡುವರು. ಇದೇ ಸಂದರ್ಭದಲ್ಲಿ ಹಲವರಿಗೆ ಶ್ರೀಗುರು ರಕ್ಷೆ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.