ಮಂಜುನಾಥ ಕೆ.ಎಂ.
ಬೇಸಿಗೆ ರಜೆಯ ಸಡಗರ, ಆಟ-ಪಾಠಗಳ ನೆನಪುಗಳು ಮತ್ತು ಅಜ್ಜ-ಅಜ್ಜಿಯರ ಮನೆಯ ಸಿಹಿ ಅನುಭವಗಳನ್ನು ಹೊತ್ತುಕೊಂಡಿದ್ದ ಸಾವಿರಾರು ವಿದ್ಯಾರ್ಥಿಗಳು ಅರಿವಿನ ಆಲಯಕ್ಕೆ ಆಗಮಿಸುತ್ತಿದ್ದಂತೆಯೇ ಶಿಕ್ಷಕರು ಹಾಗೂ ಸಿಬ್ಬಂದಿ ಹೂಗುಚ್ಛ ನೀಡಿ ಸ್ವಾಗತಿಸಿಕೊಂಡರು.
ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಸಿಹಿ ನೀಡಿ, ಹಣೆಗೆ ತಿಲಕವಿಟ್ಟು ಚಪ್ಪಾಳೆ ಮೂಲಕ ಆತ್ಮೀಯವಾಗಿ ಬರಮಾಡಿಕೊಳ್ಳುವ ಸಂಭ್ರಮದ ದೃಶ್ಯಗಳು ಕಂಡು ಬಂದವು. ತೆಂಗಿನ ಗರಿಗಳು, ವಿವಿಧ ಪುಷ್ಪಗಳಿಂದ ಶಾಲೆಗಳನ್ನು ಸಿಂಗರಿಸಲಾಗಿತ್ತು. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಹಬ್ಬದ ವಾತಾವರಣ ಕಂಡು ಬಂತು.ಹೊಸ ತರಗತಿಗೆ ಪಾದಾರ್ಪಣೆ ಮಾಡಿರುವ ಮಕ್ಕಳಲ್ಲಿ ಉತ್ಸಾಹ ಮನೆ ಮಾಡಿದ್ದರೆ, ಮೊದಲ ಬಾರಿಗೆ ಶಾಲೆಗೆ ಬಂದ ಪುಟಾಣಿಗಳಲ್ಲಿ ಕುತೂಹಲ ಮತ್ತು ಸಂಕೋಚ ಎರಡೂ ಗೋಚರಿಸಿತು. ಪೋಷಕರು ಸಹ ಮಕ್ಕಳನ್ನು ಶಾಲೆಗೆ ಕರೆತಂದು ಶಿಕ್ಷಕರೊಂದಿಗೆ ಮಾತುಕತೆ ನಡೆಸಿ ಹೊಸ ಶೈಕ್ಷಣಿಕ ವರ್ಷದ ಬಗ್ಗೆ ಮಾಹಿತಿ ಪಡೆದುಕೊಂಡರು.
ಶಾಲೆ ಆರಂಭದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಶಾಲಾ ಕೊಠಡಿಗಳ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ನಿರ್ವಹಣೆ, ವಿದ್ಯುತ್ ಸಂಪರ್ಕ ಸೇರಿದಂತೆ ಮೂಲಭೂತ ಸೌಕರ್ಯಗಳ ಪರಿಶೀಲನೆ ನಡೆಸಲಾಗಿದೆ. ಡಿಡಿಪಿಐ, ಕ್ಷೇತ್ರ ಶಿಕ್ಷಣಾಧಿಕಾರಿ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಸಿದ್ಧತೆಗಳ ಪರಿಶೀಲನೆ ನಡೆಸಿದ್ದಾರೆ. ಶಾಲೆಗಳಲ್ಲಿ ಪಠ್ಯಪುಸ್ತಕ ವಿತರಣೆ, ಸಮವಸ್ತ್ರ, ಇತರ ಶೈಕ್ಷಣಿಕ ಸೌಲಭ್ಯಗಳ ಒದಗಿಸಲು ಪೂರಕ ಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದರು.
ರಜೆಯ ಮಜಾ ಅನುಭವಿಸಿದ ಮಕ್ಕಳು ಮತ್ತೆ ಶಾಲೆಯತ್ತ ಹೆಜ್ಜೆ ಹಾಕಿದ ಮೊದಲ ದಿನ ರಾಜ್ಯಾದ್ಯಂತ ಸಂಭ್ರಮ, ಸಂತಸ ಮತ್ತು ಹೊಸ ಭರವಸೆಗಳ ವಾತಾವರಣವನ್ನು ನಿರ್ಮಿಸಿದ್ದು, ಶಾಲೆಗಳ ಅಂಗಳ ಮತ್ತೊಮ್ಮೆ ಮಕ್ಕಳ ಕಲರವದಿಂದ ಕಂಗೊಳಿಸಿತು.
ಬಳ್ಳಾರಿ ಜಿಲ್ಲೆಯಲ್ಲಿ ಸರ್ಕಾರಿ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಸೇರಿ ಒಟ್ಟು 720 ಶಾಲೆಗಳಿವೆ. ಅನುದಾನಿತ 76, ಅನುದಾನಿತ 439, ಇತರೆ 31 ಸೇರಿ ಒಟ್ಟು 1266 ಶಾಲೆಗಳಿವೆ. ಈ ಬಾರಿಯ ಶೈಕ್ಷಣಿಕ ವರ್ಷದ ಮಕ್ಕಳ ಪ್ರವೇಶಾತಿ ಪ್ರಕ್ರಿಯೆ ಶುರುವಾಗಿದೆ. ಖಾಸಗಿ, ಅನುದಾನಿತ ಸೇರಿದಂತೆ ಈವರೆಗೆ ಶೇ.35.85ರಷ್ಟು ಮಕ್ಕಳು ಪ್ರವೇಶ ಪಡೆದಿದ್ದಾರೆ. ಅಧಿಕೃತವಾಗಿ ಈ ವರ್ಷದ ಶೈಕ್ಷಣಿಕ ವರ್ಷ ಜೂನ್ 1ರಿಂದಲೇ ಶುರುಗೊಳ್ಳಬೇಕು. ಆದರೆ, ಖಾಸಗಿ ಶಾಲೆಗಳು ಕಳೆದ 15 ದಿನಗಳ ಹಿಂದೆಯೇ ಶೈಕ್ಷಣಿಕ ಚಟುವಟಿಕೆ ಶುರು ಮಾಡಿವೆ.