ಶಿಗ್ಗಾಂವಿಯಲ್ಲಿ ಜು.12ರಿಂದ ಧನ್ಯವಾದ ಯಾತ್ರೆ-ಸಂಸದ ಬೊಮ್ಮಾಯಿ

KannadaprabhaNewsNetwork | Published : Jul 7, 2024 1:22 AM

ನನ್ನ ಮೇಲೆ ಶಿಗ್ಗಾಂವಿ ಜನರ ಋಣ ಇದೆ. ಜನತೆಗೆ ಕೃತಜ್ಞತೆ ಹೇಳಬೇಕು ಅಂತ ಇದೆ. ರಾಜಕೀಯ ಮೀರಿ ಈ ಕ್ಷೇತ್ರದ ಜನರ ಜೊತೆಗೆ ಅನೋನ್ಯತೆ ಇದೆ. ಬರುವ ಜು.12ರಿಂದ ಹಂತ ಹಂತವಾಗಿ ಧನ್ಯವಾದ ಯಾತ್ರೆ ಮಾಡುತ್ತೇನೆ. ಪ್ರತಿ‌ ಗ್ರಾಮದ ಜನರನ್ನು ಭೇಟಿಯಾಗಿ‌ ಧನ್ಯವಾದ ಹೇಳುತ್ತೇನೆ ಎಂದು ಗದಗ- ಹಾವೇರಿ ಲೋಕಸಭೆ ಸದಸ್ಯ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಶಿಗ್ಗಾಂವಿ: ನನ್ನ ಮೇಲೆ ಶಿಗ್ಗಾಂವಿ ಜನರ ಋಣ ಇದೆ. ಜನತೆಗೆ ಕೃತಜ್ಞತೆ ಹೇಳಬೇಕು ಅಂತ ಇದೆ. ರಾಜಕೀಯ ಮೀರಿ ಈ ಕ್ಷೇತ್ರದ ಜನರ ಜೊತೆಗೆ ಅನೋನ್ಯತೆ ಇದೆ. ಬರುವ ಜು.12ರಿಂದ ಹಂತ ಹಂತವಾಗಿ ಧನ್ಯವಾದ ಯಾತ್ರೆ ಮಾಡುತ್ತೇನೆ. ಪ್ರತಿ‌ ಗ್ರಾಮದ ಜನರನ್ನು ಭೇಟಿಯಾಗಿ‌ ಧನ್ಯವಾದ ಹೇಳುತ್ತೇನೆ ಎಂದು ಗದಗ- ಹಾವೇರಿ ಲೋಕಸಭೆ ಸದಸ್ಯ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ರಾಜಕೀಯವಾಗಿ ಬೆಳೆಯಲು ಮಹಾ ಜನತೆ ಆಶೀರ್ವಾದ ಇದೆ ಎಂದರು. ಶಿಗ್ಗಾಂವಿ ಉಪ ಚುನಾವಣೆಗೆ ಸಂಬಂಧಿಸಿದಂತೆ ಈಚೆಗೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಪ್ರತಿಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ‌ಸಮಿತಿ ಮಾಡಿದ್ದೇವೆ. ಪಕ್ಷ ಸಮೀಕ್ಷೆ ಮಾಡಿಸಿ ಅಭ್ಯರ್ಥಿ ಆಯ್ಕೆ ಮಾಡುತ್ತದೆ. ಚುನಾವಣೆ ಪ್ರಕ್ರಿಯೆ ನಡೆಯುತ್ತದೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ಮುನ್ನಡೆಯಾಗಿರುವ ಕುರಿತು ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ನಮಗೆ 9000 ಮತಗಳ ಹಿನ್ನಡೆ ಆಗಿರುವುದು ತಾತ್ಕಾಲಿಕ ಅದನ್ನು ಸರಿದೂಗಿಸುತ್ತೇನೆ. ನನಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ 36000 ಮತಗಳು ಲೀಡ್ ಬಂದಿದೆ ಹಾಗೆ ಮತ್ತೆ ಉಪ ಚುನಾವಣೆಯಲ್ಲಿ ಲೀಡ್ ತೆಗೆದುಕೊಳ್ಳುತ್ತೇವೆ ಎಂದರು.

ಇಡೀ ಸರ್ಕಾರವೇ ಬಂದು ಶಿಗ್ಗಾಂವಿ ಉಪಚುನಾವಣೆ ಮಾಡುತ್ತದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಅದನ್ನು ಸ್ವಾಗತ ಮಾಡುತ್ತೇನೆ. ಶಿಗ್ಗಾಂವಿ ತಾಲೂಕಿನ ಮತದಾರರು ಪ್ರಬುದ್ಧರಾಗಿದ್ದಾರೆ. ಕಾಂಗ್ರೆಸ್ ರಾಜಕಾರಣ ನೋಡಿ ನನಗೆ ಮನೋರಂಜನೆ ಆಗುತ್ತಿದೆ. ಇಲ್ಲಿ ಕಾಂಗ್ರೆಸ್ಸಿನಿಂದ ಪೋಸ್ಟರ್ ಭರಾಟೆ ನಡೆದಿದೆ. ಇಲ್ಲಿ ಪೋಸ್ಟರ್ ಹಾಕಿದವರು ಹಂಗೆ ಮನೆಗೆ ಹೋಗಿದ್ದಾರೆ. ಇಲ್ಲಿ ನಾನು ಪೋಸ್ಟರ್ ರಾಜಕೀಯ ಮಾಡಿಲ್ಲ. ''''ಘೋಡಾ ಹೈ ಮೈದಾನ್ ಹೈ'''' ಯಾರು ಎಲ್ಲಿ ಬೇಕಾದರೂ ನಿಲ್ಲಬಹುದು. ಭರತ್ ಬೊಮ್ಮಾಯಿ ಸ್ಪರ್ಧೆ ಬಗ್ಗೆ ಅಧಿಕೃತ ಚರ್ಚೆ ಆಗಿಲ್ಲ. ಹೀಗಾಗಿ ಅದರ ಬಗ್ಗೆ ಮಹತ್ವ ಕೊಡುವ ಅಗತ್ಯ ಇಲ್ಲ. ವೀಕ್ಷಕರು ಬಂದಾಗ ಅಭಿಪ್ರಾಯ ತೆಗೆದುಕೊಳ್ಳುತ್ತಾರೆ. ಆದರೆ, ನಾನೇ ಇಲ್ಲಿ ಎಲೆಕ್ಷನ್‌ಗೆ ನಿಂತ ಹಾಗೆ, ಯಾರೇ ಅಭ್ಯರ್ಥಿ ಆದರೂ ನಾನು ಸ್ಪರ್ಧೆ ಮಾಡಿದಾಗಿನಿಗಿಂತ ಹೆಚ್ಚಾಗಿ ಶ್ರಮ ಹಾಕಿ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಹೇಳಿದರು.