ಹೊಸಪೇಟೆ: ಪಕ್ಷದ ವೇದಿಕೆಯಲ್ಲಿ ಬಳ್ಳಾರಿ ಪಾದಯಾತ್ರೆ ಕುರಿತು ಇನ್ನೂ ಚರ್ಚೆ ಆಗಿಲ್ಲ. ಪಕ್ಷದ ಹೈಕಮಾಂಡ್ ಹೇಳಿದ್ರೇ ಮಾತ್ರ ಪಾದಯಾತ್ರೆ ಮಾಡುತ್ತೇವೆ. ಇನ್ನೂ ಹೈಕಮಾಂಡ್ ಪಾದಯಾತ್ರೆಗೆ ಗ್ರಿನ್ ಸಿಗ್ನಲ್ ನೀಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತಿಳಿಸಿದರು.
ಮೈಸೂರು ಪಾದಯಾತ್ರೆ ಬಳಿಕ ಕಾಂಗ್ರೆಸ್ ನಾಯಕರಲ್ಲಿ ನಡುಕ ಹುಟ್ಟಿದೆ. ನಮ್ಮ ಪಾದಯಾತ್ರೆ ಎಲ್ಲಿಗೆ ಹೋಗುತ್ತದೆಯೋ ಅದಕ್ಕಿಂತ ಮುನ್ನ ಕಾಂಗ್ರೆಸ್ನವರು ಅಲ್ಲಿಗೆ ಹೋಗಿದ್ದಾರೆ. ನಾನು ಕಳ್ಳ ಅಲ್ಲ ಎಂದು ಸಿಎಂ ಹೇಳುತ್ತಿದ್ದಾರೆ. ಪಾದಯಾತ್ರೆ ಬಳಿಕ ಭಯ ಬಂದಿದೆ. ಈಗ ನಾವು ದೂರು ಕೊಟ್ಟಿದ್ದೇವೆ. ಚೆಂಡು ರಾಜ್ಯಪಾಲರ ಅಂಗಳದಲ್ಲಿದೆ. ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದರೆ ಮುಂದೆ ಗೊತ್ತಾಗಲಿದೆ ಎಂದರು.
ಇದು ಬರೀ 14 ಸೈಟ್ ಹಗರಣವಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿನಲ್ಲಿ ಮೂರ್ನಾಲ್ಕು ಸಾವಿರ ಕೋಟಿ ರು. ಮೊತ್ತದ ದೊಡ್ಡ ಹಗರಣ ನಡೆದಿದೆ. ರಾಜಭವನಕ್ಕೆ ತೆರಳಿ ದೂರು ಕೊಟ್ಟಿದ್ದೇವೆ. ಪಕ್ಷ ಅವಕಾಶ ನೀಡಿದರೆ ರಾಷ್ಟ್ರಪತಿ ಭವನ ಕದ ತಟ್ಟುತ್ತೇವೆ. ರಾಷ್ಟ್ರಪತಿ ಬಳಿ ದೂರು ಕೊಂಡೊಯ್ಯುತ್ತೇವೆ ಎಂದರು.ಮಾಜಿ ಶಾಸಕ ಸಿ.ಪಿ. ಯೋಗೇಶ್ವರ ಜತೆಗೆ ಮಾತನಾಡಿದ್ದೇವೆ. ಅವರ ಮನೆಗೆ ಹೋಗಿದ್ದೇನೆ, ಪಕ್ಷದ ಚೌಕಟ್ಟಿನಲ್ಲಿರಿ ಎಂದಿರುವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಅವರು ಕೂಡ ಪಕ್ಷದ ಜತೆಗೆ ಇರಲಿದ್ದಾರೆ ಎಂದರು.
ಸಂವಿಧಾನ ರಕ್ಷಣೆ ಮಾಡ್ತೇವೆ ಎಂದು ಪತ್ನಿ ಹೆಸರಲ್ಲಿ ಸಿದ್ದರಾಮಯ್ಯ ಸೈಟ್ ಮಾಡ್ತಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಎಲ್ಲೂ ಸಹಿ ಮಾಡಿಲ್ಲ. ಆಗಿನ ಮುಡಾ ಅಧ್ಯಕ್ಷರು ಸಹಿ ಮಾಡಿದ್ದಾರೆ. ಅವರು ತಪ್ಪು ಮಾಡಿದರೆ ಅವರ ಮೇಲೂ ಕ್ರಮ ಆಗಲಿ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಈ ಹಿಂದೆ ನಾವು ಹೇಳಿಕೆ ನೀಡಿದ್ದೇವೆ ಎಂದು ಆರೋಪಿಸುತ್ತಾರೆ. ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿ ಅವರ ಬಗ್ಗೆ ಹೇಳಿಕೆ ನೀಡಿರಲಿಲ್ವಾ? ಜೆಡಿಎಸ್- ಬಿಜೆಪಿ ಮೈತ್ರಿ ಆಗಿದ್ದು, ಹಾಲು, ಜೇನಿನಂತೆ ಇದ್ದೇವೆ ಎಂದರು.