ವರುಣದೇವನ ಪ್ರಾರ್ಥಿಸುತ್ತಿರುವ ಬೆನಹಾಳದ ಭಾಗೀರಥಿಯರು!

KannadaprabhaNewsNetwork |  
Published : Jul 20, 2026, 01:15 AM IST
18ಜಿಡಿಜಿ7 | Kannada Prabha

ಸಾರಾಂಶ

ಕಳೆದ ನಾಲ್ಕು ದಿನಗಳಿಂದ ಇಲ್ಲಿನ ರೈತ ಮಹಿಳೆಯರು ಮಳೆರಾಯನನ್ನು ಒಲಿಸಿಕೊಳ್ಳಲು ನಿರಂತರ ಜಾಗರಣೆ ಮಾಡುತ್ತಾ, ಜಾನಪದ ಸೊಗಡಿನ ಪದಗಳನ್ನು ಕಟ್ಟಿ ವರುಣದೇವನಿಗೆ ಮೊರೆ ಇಡುತ್ತಿದ್ದಾರೆ.

ಸಂಜೀವಕುಮಾರ ಹಿರೇಮಠ

ಹೊಳೆಆಲೂರು: ಮುಗಿಲ ಕಡೆಗೆ ಕಣ್ಣು ನೆಟ್ಟು, ಬಿರಿದು ಹೋಗುತ್ತಿರುವ ಭೂಮಿಯ ಒಡಲನ್ನು ನೋಡುತ್ತಾ, ಬೆಳೆದ ಬೆಳೆ ಕಣ್ಣೆದುರೇ ಒಣಗುತ್ತಿರುವುದನ್ನು ಕಂಡು ಕಂಗಾಲಾಗಿರುವ ಅನ್ನದಾತನ ಪರವಾಗಿ ಈಗ ಗ್ರಾಮೀಣ ಮಹಿಳೆಯರು ದೇವರ ಮೊರೆ ಹೋಗಿದ್ದಾರೆ.

ಆಧುನಿಕ ಜಗತ್ತು ಎಷ್ಟೇ ಮುಂದುವರಿದಿದ್ದರೂ, ಪ್ರಕೃತಿಯನ್ನು ದೇವರೆಂದು ನಂಬುವ ಭಾರತೀಯ ಸಂಸ್ಕೃತಿಯ ಅನಾದಿ ಕಾಲದ ಆಚರಣೆಯೊಂದಕ್ಕೆ ಸಮೀಪದ ಬೆನಹಾಳ ಗ್ರಾಮ ಸಾಕ್ಷಿಯಾಗಿದೆ. ಕಳೆದ ನಾಲ್ಕು ದಿನಗಳಿಂದ ಇಲ್ಲಿನ ರೈತ ಮಹಿಳೆಯರು ಮಳೆರಾಯನನ್ನು ಒಲಿಸಿಕೊಳ್ಳಲು ನಿರಂತರ ಜಾಗರಣೆ ಮಾಡುತ್ತಾ, ಜಾನಪದ ಸೊಗಡಿನ ಪದಗಳನ್ನು ಕಟ್ಟಿ ವರುಣದೇವನಿಗೆ ಮೊರೆ ಇಡುತ್ತಿದ್ದಾರೆ.

ಹಿರಿಯರ ಹಾದಿಯಲ್ಲಿ ಜಾಗರಣೆ: ಸಾಮಾನ್ಯವಾಗಿ ಮಳೆ ಕೈಕೊಟ್ಟಾಗ ಭಜನೆ, ವಿಶೇಷ ಪೂಜೆ, ಜಾಗರಣೆ ಮಾಡುವುದು ಗ್ರಾಮೀಣ ಭಾಗದಲ್ಲಿ ವಾಡಿಕೆ. ಆದರೆ ಬೆನಹಾಳ ಗ್ರಾಮದ ಮಾರುತೇಶ್ವರ ನಾಟ್ಯ ಸಂಘದ ಆವರಣದಲ್ಲಿ ನಡೆಯುತ್ತಿರುವ ಈ ದೃಶ್ಯ ಮಾತ್ರ ಇಡೀ ಭಾಗದ ಗಮನ ಸೆಳೆಯುತ್ತಿದೆ. ಪ್ರತಿದಿನ ರಾತ್ರಿ ಕತ್ತಲಾಗುತ್ತಿದ್ದಂತೆ ನೂರಕ್ಕೂ ಹೆಚ್ಚು ಗ್ರಾಮೀಣ ಮಹಿಳೆಯರು ಒಂದೆಡೆ ಸೇರುತ್ತಾರೆ. ತಡರಾತ್ರಿ 2 ಗಂಟೆ ವರೆಗೂ ಒಣಗುತ್ತಿರುವ ಹೊಲಗಳ ಚಿಂತೆಯಲ್ಲಿ ಮಳೆರಾಯನ ಕೃಪೆಗಾಗಿ ಪ್ರಾರ್ಥಿಸುತ್ತಿದ್ದಾರೆ.

ಪದಗಳಲ್ಲಿದೆ ನೋವು: ಕೇವಲ ಉಪವಾಸ, ಜಾಗರಣೆಯಷ್ಟೇ ಅಲ್ಲದೇ ಮಹಿಳೆಯರು ಮಳೆರಾಯನ ಮೇಲೆ ತಾವೇ ಸ್ವತಃ ಜಾನಪದ ಶೈಲಿಯಲ್ಲಿ ಭಾವನಾತ್ಮಕ ಪದಗಳನ್ನು ಕಟ್ಟಿ ಹಾಡುತ್ತಿದ್ದಾರೆ. ಬಿತ್ತನೆಗಾಗಿ ಸಾಲ-ಸೋಲ ಮಾಡಿ, ಬೆವರು ಹರಿಸಿ ಬೆಳೆಸಿದ ಬೆಳೆಗಳು ಕೈಗೆ ಬರುವ ಹೊತ್ತಿಗೆ ಮಳೆಯಿಲ್ಲದೆ ಒಣಗುತ್ತಿರುವುದನ್ನು ಕಂಡು ನೊಂದ ಜೀವಗಳು ಹಾಡುವ ಈ ಪದಗಳು, ಕೇವಲ ಗೀತೆಯಾಗಿರದೇ ರೈತ ಸಮುದಾಯದ ಒಡಲೊಳಗಿನ ನೋವಾಗಿದೆ.

ನಂಬಿಕೆಯೇ ಬದುಕಿನ ಆಧಾರ: ರೈತನ ಬದುಕು ಸಾಗುವುದೇ ಮಳೆಯ ಆಧಾರದ ಮೇಲೆ. ಸದ್ಯದ ಪರಿಸ್ಥಿತಿಯಲ್ಲಿ ಮಳೆಯಾಗದಿದ್ದರೆ ಇಡೀ ವರ್ಷದ ಸಂಸಾರದ ನೊಗ ಹೊರುವುದು ಕಷ್ಟಸಾಧ್ಯ. ಈ ನಂಬಿಕೆಯ ಬಲದ ಮೇಲೆ, ಹೆಣ್ಣುಮಕ್ಕಳ ಕರುಳಿನ ಕರಗಿಗೆ ದೇವರು ಖಂಡಿತವಾಗಿಯೂ ಓಗೊಟ್ಟು ಮಳೆ ಸುರಿಸುತ್ತಾನೆ ಎನ್ನುವ ಅಚಲವಾದ ವಿಶ್ವಾಸ ಈ ಹೆಣ್ಣುಮಕ್ಕಳ ಕಣ್ಣುಗಳಲ್ಲಿದೆ. ವಿಜ್ಞಾನದ ಯುಗದಲ್ಲೂ ಪ್ರಕೃತಿ ಮತ್ತು ಮಾನವನ ನಡುವಿನ ಅವಿನಾಭಾವ ಸಂಬಂಧವನ್ನು ಸಾರುವ ಬೆನಹಾಳ ಗ್ರಾಮದ ಈ ತಾಯಂದಿರ ಶ್ರದ್ಧೆ ಹಾಗೂ ಪ್ರಾರ್ಥನೆಗೆ ವರುಣದೇವ ಶೀಘ್ರದಲ್ಲೇ ತಂಪೆರೆಯಲಿ ಎಂಬುದೇ ಸದ್ಯದ ಆಶಯ.ಮಳೆ ಬರುವ ನಂಬಿಕೆ ಇದೆ...

ಹಿಂದಿನ ಕಾಲದಲ್ಲಿ ಮಳೆ ಬಾರದಿದ್ದಾಗ ಹಿರಿಯರು ಹೀಗೆ ಜಾಗರಣೆ ಕುಳಿತು ಮಳೆರಾಯನನ್ನು ಕರೆಯುತ್ತಿದ್ದರು. ಆಗ ವರುಣದೇವ ಒಲಿದು ಭಿನ್ನಹಕ್ಕೆ ಓಗೊಟ್ಟು ಧರೆಗೆ ಇಳಿಯುತ್ತಿದ್ದನಂತೆ. ಅದೇ ನಂಬಿಕೆಯನ್ನು ಇಟ್ಟುಕೊಂಡು ನಾವು ಕೂಡ ಹಿರಿಯರ ವಾಣಿಯಂತೆ ಜಾಗರಣೆ ಮಾಡುತ್ತಿದ್ದೇವೆ ಎನ್ನುತ್ತಾರೆ ಬೆನಹಾಳ ಗ್ರಾಮದ ರೈತ ಮಹಿಳೆಯರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಯುರ್ವೇದ ಜೀವನಶೈಲಿಯಿಂದ ಆರೋಗ್ಯಕರ ಬದುಕು
ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ