ಅಳ್ನಾವರ: ತಾವೇ ಮಾಡಿಕೊಂಡ ಸ್ವಯಂಕೃತ ಭ್ರಷ್ಟಾಚಾರದಲ್ಲಿ ಮುಖ್ಯಮಂತ್ರಿ ಸಿಲುಕಿಕೊಂಡಿದ್ದು ಯಾವುದೇ ಕ್ಷಣದಲ್ಲಾದರೂ ರಾಜೀನಾಮೆ ಕೊಡಬಹುದು. ಆಂತರಿಕ ಕಚ್ಚಾಟದಿಂದ ರಾಜ್ಯ ಸರ್ಕಾರದ ಪತನವೂ ಆಗಬಹುದು ಎಂದು ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಭವಿಷ್ಯ ನುಡಿದರು.
ಅಳ್ನಾವರ ಮಂಡಳದ ಮುಗದ ಗ್ರಾಮದಲ್ಲಿ ಆಯೋಜಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆಡಳಿತ ವೈಫಲ್ಯದಿಂದ ಕೂಡಿದ್ದು ಅಭಿವೃದ್ಧಿ ಮರೀಚಿಕೆಯಾಗಿದೆ ಎಂದರು.
ಅತಿ ಹೆಚ್ಚು ಸದಸ್ಯತ್ವ ಹೊಂದಿರುವ ರಾಜಕೀಯ ಪಕ್ಷಗಳ ಪೈಕಿ ಬಿಜೆಪಿ ಜಗತ್ತಿನಲ್ಲಿ ಮುಂಚೂಣಿಯಲ್ಲಿದ್ದು ಕಾರ್ಯಕರ್ತರ ಅಡಿಪಾಯದಡಿ ಬೆಳೆದು ನಿಂತಿರುವ ಏಕೈಕ ಪಕ್ಷವಾಗಿದೆ. ಭೂತ ಮಟ್ಟದಲ್ಲಿ ಬಿಜೆಪಿ ಪಕ್ಷಕ್ಕೆ ಚುನಾವಣಾ ಏಜೆಂಟರು ಸಿಗದ ಕಾಲವೊಂದಿತ್ತು. ಆದರೆ, ಈಗ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಇದಕ್ಕೆಲ್ಲ ಕಾರ್ಯಕರ್ತರ ಪರಿಶ್ರಮವೇ ಕಾರಣ ಎಂದರು.
ಮುಖಂಡ ನಾಗರಾಜ ಛಬ್ಬಿ ಮಾತನಾಡಿ, ನಿಜವಾದ ಕಾರ್ಯಕರ್ತರನ್ನು ಹೊಂದಿರುವ ಬಿಜೆಪಿ ಸಾಮಾಜಿಕ, ಧಾರ್ಮಿಕವಾಗಿ ಎಲ್ಲರನ್ನು ಸಮಾನವಾಗಿ ಕಾಣುತ್ತದೆ. ಕಾರ್ಯಕರ್ತರ ಸುಭದ್ರ ಅಡಿಪಾಯದಡಿ ಬೆಳೆದು ನಿಂತಿರುವ ಪಕ್ಷವನ್ನು ಸೋಲಿಸಲು ನಡೆಸುತ್ತಿರುವ ಕಾಂಗ್ರೆಸ್ ಷಡ್ಯಂತ್ರಗಳನ್ನು ಜನರು ಅರಿತುಕೊಂಡಿದ್ದಾರೆ ಎಂದರು.
ನರೇಂದ್ರ ಮೋದಿ ಅವರ ಜನಪ್ರಿಯ ಕಾರ್ಯಕ್ರಮಗಳನ್ನು ಮನೆ-ಮನೆಗೆ ತಲುಪಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಮಾಡಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಸದಸ್ಯರು ಹೆಚ್ಚಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು
ಮಂಡಳ ಅಧ್ಯಕ್ಷ ಕಲ್ಮೇಶ ಬೇಲೂರ ಪ್ರಾಸ್ತಾವಿಕ ಮಾತನಾಡಿದರು. ಹಿರಿಯರಾದ ಕಲ್ಲಪ್ಪ ಹಟ್ಟಿ ಹಾಗೂ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಸವರಾಜ ಗುಂಡಗೋವಿ ಮಾತನಾಡಿದರು. ಭಾರತ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಭರತೇಶ ಪಾಟೀಲ, ಕಿರಣ ಪಾಟೀಲ ಕುಲಕರ್ಣಿ, ಶಿವಾಜಿ ಡೊಳ್ಳಿನ, ನಿಂಗಪ್ಪ ಘಾಟೀನ, ಡಾ. ಸಂಜಯ ಚಂದರಗಿಮಠ, ಶ್ರೀಕಾಂತ ಕ್ಯಾತಪ್ಪನವರ, ಮಹಾರುದ್ರ ಗುಡೆನ್ನವರ, ಕಲ್ಲಪ್ಪ ನೀರಲಗಿ, ಮಂಜುನಾಥ ಶೆರೆವಾಡ, ಮಲ್ಲಪ್ಪ ಗಾಣಿಗೇರ, ಸಂದೀಪ ಪಾಟೀಲ, ಯಲ್ಲಾರಿ ಹುಬ್ಬಳಿಕರ, ಪ್ರವೀಣ ಪವಾರ, ಪ್ರಕಾಶ ಗಾಣಿಗೇರ, ಲಿಂಗರಾಜ ಮೂಲಿಮನಿ ಮತ್ತಿತರರು ಇದ್ದರು
ಕ್ಷೇತ್ರಕ್ಕೆ ತಮ್ಮ ಕೊಡುಗೆ ತಿಳಿಸಿ
ರಾಜ್ಯ ಸರ್ಕಾರ ಆರ್ಥಿಕ ದಿವಾಳಿತನದಿಂದ ಕುಂಠಿತಗೊಂಡಿರುವ ಅಭಿವೃದ್ಧಿ ಮರೆ ಮಾಚಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಬೈಯಿಸುವುದನ್ನು ಬಿಟ್ಟು ಕ್ಷೇತ್ರಕ್ಕೆ ತಮ್ಮ ಕೊಡುಗೆ ಏನು ಎಂಬುದನ್ನು ಸಚಿವ ಸಂತೋಷ ಲಾಡ್ ಅವಲೋಕನ ಮಾಡಿಕೊಳ್ಳಲಿ ಎಂದು ಬಿಜೆಪಿ ಮುಖಂಡ ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಹೇಳಿದರು.
ಮುಗದ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಡ್ ಕೇವಲ ಪ್ರಚಾರ ಪ್ರೀಯರಾಗಿದ್ದಾರೆ. ಮಾಡಲು ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳಿವೆ. ಆದರೆ, ಸರ್ಕಾರದ ಬಳಿ ಹಣವಿಲ್ಲ. ಅದನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅತಿಯಾದ ಮಳೆಯಿಂದ ಬೆಳೆಗಳೆಲ್ಲ ಹಾಳಾಗಿವೆ. ರೈತರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಪರಿಹಾರ ನೀಡಲು ಸರ್ಕಾರಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದ್ದು ಮುಂಬರುವ ದಿನಗಳಲ್ಲಿ ತಾಲೂಕು ಕೇಂದ್ರಗಳಲ್ಲಿ ಪಕ್ಷದ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.
ಬಿಜೆಪಿ ಮುಖಂಡರು ಜನರೊಂದಿಗೆ ಇದ್ದು ಅವರ ಕಷ್ಟ-ಸುಖಗಳಲ್ಲಿ ಭಾಗಿಯಾಗಿ ಅಭಿವೃದ್ಧಿಗಾಗಿ ಹೋರಾಟ ನಡೆಸುತ್ತೇವೆ ಎಂದ ಛಬ್ಬಿ, ರೈತರ ಪರವಾಗಿ ಧ್ವನಿ ಎತ್ತಿ ಪರಿಹಾರಕ್ಕಾಗಿ ಒತ್ತಾಯಿಸಲಾಗುವುದು. ಹದಗೆಟ್ಟಿರುವ ರಸ್ತೆ ದುರಸ್ತಿಗೆ ಆಗ್ರಹಿಸಲಾಗುವುದು ಎಂದರು.