ಕನ್ನಡಪ್ರಭ ವಾರ್ತೆ ಬೆಳಗಾವಿ
ಮುಖ್ಯಮಂತ್ರಿ ಬದಲಾವಣೆ ಚರ್ಚೆ ವಿಚಾರ ಸದ್ಯ ಮುಗಿದ ಅಧ್ಯಾಯವಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ಚಿಕ್ಕೋಡಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಮುಖಂಡರು ದೆಹಲಿ, ಬೆಂಗಳೂರಿನಲ್ಲಿ ಸಾಕಷ್ಟು ವಿಚಾರಗಳನ್ನು ಹೇಳಿದ್ದಾರೆ. ಸದ್ಯ ಈ ವಿಷಯ ಮುಂದುವರಿಸುವ ಅವಶ್ಯಕತೆ ಇಲ್ಲ. ಯಾರು ಏನೇ ಹೇಳಿದರೂ ಸಿಎಂ ಬದಲಾವಣೆ ವಿಚಾರ ಮುಗಿದಿದೆ. ಈ ವಿಷಯ ಹೈಕಮಾಂಡ್ ಹಾಗೂ ಪಕ್ಷ ತೀರ್ಮಾನ ಮಾಡುವ ವಿಷಯ. ಯಾರೂ ಹಾದಿ ಬೀದಿಯಲ್ಲಿ ಚರ್ಚೆ ಮಾಡಲಾಗದು ಎಂದರು.
ಸಿಎಂ ಬದಲಾವಣೆ ಕುರಿತು ಯಾವುದೋ ಸಭೆ ಸಮಾರಂಭಗಳಲ್ಲಿ, ವೈಯಕ್ತಿಕವಾಗಿ ಹೇಳಿದರೆ ಮಹತ್ವ ಇರಲ್ಲ. ಇದು ಪಕ್ಷದ ವೇದಿಕೆಯಲ್ಲೇ ಚರ್ಚೆ ಆಗಬೇಕು. ಡಿಸಿಎಂಗಳ ಹೆಚ್ಚಳ ಮಾಡುವ ವಿಚಾರ ಚುನಾವಣೆಗೂ ಮುಂಚೆ ಕೂಗು ಇತ್ತು. ಅದನ್ನು ಮಾಡಬೇಕೇ ಇಲ್ಲ ಬೇಡವೇ ಎನ್ನುವ ವಿಚಾರ ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು ಎಂದು ತಿಳಿಸಿದರು.2028ರ ಚುನಾವಣೆ ಬಳಿಕ ನಾನು ಸಿಎಂ ಅಭ್ಯರ್ಥಿ. ಅವತ್ತಿನ ಪರಿಸ್ಥಿತಿ, ಸನ್ನಿವೇಶ ನೋಡಿಕೊಂಡು ನಾನು ಕ್ಲೇಮ್ ಹಾಕುತ್ತೇನೆ. ಆದರೆ ಈಗಲ್ಲ ಎಂದ ಅವರು, ಬೆಳಗಾವಿ ಜಿಲ್ಲೆ ವಿಭಜನೆ ಮಾಡುವ ಕುರಿತು ನಾವು ಸಹ ಪ್ರಯತ್ನ ಮಾಡುತ್ತಿದ್ದೇವೆ. ಧ್ವನಿ ಕೂಡ ಎತ್ತಿದ್ದೇನೆ. ಅವಕಾಶ ಬಂದೆ ಬರುತ್ತದೆ ಎಂಬ ನಂಬಿಕೆ ಇದೆ. ಕಾದು ನೋಡಬೇಕು. ಸರ್ಕಾರದ ಮೇಲೆ ಒತ್ತಡ ಹಾಕಿದ್ದೇವೆ ಎಂದು ಹೇಳಿದರು.
ದಲಿತ ಸಮುದಾಯದವರು ಮುಖ್ಯಮಂತ್ರಿ ಆಗುವ ವಿಚಾರ ಮಾತನಾಡಿದ ಅವರು, ಇದನ್ನು ನನ್ನ ಬಳಿ ಕೇಳಬೇಡಿ, ಸಿದ್ದರಾಮಯ್ಯ, ರಾಹುಲ್ ಗಾಂಧಿ ಅವರನ್ನೇ ಕೇಳಿ. ನಮ್ಮ ಕೆಲಸ ಹೊಸ ಕೆಲಸ, ಅಭಿವೃದ್ಧಿ ಬಗ್ಗೆ ಕೇಳಿ. ನಾನು ಅಷ್ಟಕ್ಕೇ ಮಾತ್ರ ಸೀಮಿತ ಎಂದ ಅವರು, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಾರ್ವಜನಿಕರ ಅನುಕೂಲಕ್ಕಾಗಿ ಈಗಿದ್ದ ಎಂಪಿ ಕಚೇರಿಯೇ ಯಥಾಸ್ಥಿತಿಯಾಗಿ ಮುಂದುವರೆಯಲಿದೆ ಎಂದು ಹೇಳಿದರು.