ಕನ್ನಡಪ್ರಭ ವಾರ್ತೆ ವಿಜಯಪುರ
ಸಮೀಪದ ಇಟ್ಟಂಗಿಹಾಳ- ಜಾಲಗೇರಿ ರಸ್ತೆಯಲ್ಲಿ ಶ್ರೀ ಸಂಸ್ಥೆಯಡಿ ನಿರ್ಮಿಸಲಾಗಿರುವ ವೇದ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆ ನೂತನ ಕಟ್ಟಡ ಲೋಕಾರ್ಪಣೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮೀಣ ಹಾಗೂ ಬಡವರ ಮಕ್ಕಳಗಾಗಿಯೇ ಇಷ್ಟು ದೊಡ್ಡ ಸಂಸ್ಥೆ ಕಟ್ಟಲಾಗಿದ್ದು, ಸಾವಿರಾರು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಲಾಗುತ್ತಿದೆ. ಬಂಥನಾಳ ಸಂಗನಬಸವ ಶಿವಯೋಗಿಗಳ ಭಕ್ತರಾದ ಶಿವಾನಂದ ಕೆಲೂರ ತಮ್ಮ ಕನಸಿನ ಕೂಸಾದ ವೇದ ಇಂಟರನ್ಯಾಷನಲ್ ಶಾಲೆ ನನಸು ಮಾಡುವ ಮೂಲಕ ಬಂಥನಾಳ ಶ್ರೀಗಳಿಗೆ ಅರ್ಪಿಸಿದ್ದಾರೆ. ಈ ಭಾಗದಲ್ಲಿನ ಪಾಲಕರೆಲ್ಲ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ದಕ್ಷಿಣ ಕರ್ನಾಟಕದ ಕಡೆಗೆ ಮುಖ ಮಾಡಿದ್ದ ಸಂದರ್ಭದಲ್ಲಿ ಯರನಾಳ ಶ್ರೀಗಳ ಮಾರ್ಗದರ್ಶನದಲ್ಲಿ ಇಲ್ಲಿಯೇ ಶಿಕ್ಷಣ ಸಂಸ್ಥೆ ಕಟ್ಟಿ, ದಕ್ಷಿಣ ಭಾಗದ ಜನರು ಇದೀಗ ಶಿಕ್ಷಣಕ್ಕಾಗಿ ಇಲ್ಲಿಗೆ ಬರುವಂತೆ ಮಾಡಿದ್ದಾರೆ. ನಿರಾಶ್ರಿತ ಮಕ್ಕಳಿಗೆ ವೇದ ಸಂಸ್ಥೆಯಲ್ಲಿ ಆಸರೆ ಯೋಜನೆ ಮೂಲಕ ಆಸರೆ ಒದಗಿಸುತ್ತಿರುವುದು ಎಲ್ಲರೂ ಹೆಮ್ಮೆಪಡುವ ವಿಚಾರ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಯರನಾಳ ವಿರಕ್ತಮಠದ ಶ್ರೀ ಗುರುಸಂಗನಬಸವ ಮಹಾಸ್ವಾಮೀಜಿ ಆಶೀವರ್ಚನ ನೀಡಿ, ಆಸರೆ ಎನ್ನುವ ಮೂಲಕ ಬಡ ವರ್ಗದ ವಿದ್ಯಾರ್ಥಿಗಳಿಗೆ ವೇದ ಅಕಾಡೆಮಿ ಶೈಕ್ಷಣಿಕ ನೆರವು ನೀಡುತ್ತಿರುವುದು ನಿಜಕ್ಕೂ ಅರ್ಥಪೂರ್ಣವಾದ ಕಾರ್ಯ. ಈ ರೀತಿಯ ಪವಿತ್ರ ಕಾರ್ಯ ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.ಸಾನ್ನಿಧ್ಯ ವಹಿಸಿದ್ದ ಶೇಗುಣಸಿ ಡಾ.ಮಹಾಂತ ಪ್ರಭು ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಪ್ರಸ್ತುತ ಎಐ ಅಬ್ಬರ ಅಧಿಕವಾಗಿದೆ. ವೈದ್ಯರಿಗೆ, ಇಂಜಿನಿಯರ್ ಅಷ್ಟೇ ಅಲ್ಲ ಸ್ವಾಮೀಜಿಗಳಿಗೂ ಕೆಲಸವಿಲ್ಲದಂತಾಗಿದೆ. ಗೊಂಬೆ ಪ್ರವಚನ ಮಾಡುತ್ತಿವೆ. ಅಂತಾರಾಷ್ಟ್ರೀಯ ದಿಗ್ಗಜ ಸಂಸ್ಥೆಗಳು ರೈತರ ಜಮೀನು ಸ್ವಾಧೀನಪಡಿಸಿಕೊಳ್ಳುವ ಅಂತಾರಾಷ್ಟ್ರೀಯ ಮಟ್ಟದ ದೊಡ್ಡ ಷಡ್ಯಂತ್ರ ನಡೆದಿದೆ. ಆದರೆ ಮುಂದೊಂದು ದಿನ ರೈತರೇ ಜಗತ್ತಿನ ಬಾಸ್ ಆಗುತ್ತಾರೆ, ರೈತರು ಜಮೀನು ಮಾರಾಟ ಮಾಡಬೇಡಿ, ವಿದೇಶಿ ಕಂಪನಿಗಳಿಗಂತೂ ಮಾರಾಟ ಮಾಡಬೇಡಿ ಎಂದರು.