ಉದ್ಘಾಟನೆ ಸಮಾರಂಭ । ಮಕ್ಕಳ ಬೇಸಿಗೆ ಶಿಬಿರ । ವಚನ ಗಾಯನ
ಕನ್ನಡಪ್ರಭ ವಾರ್ತೆ ಹೊಸದುರ್ಗಪರಿಸರ ಪ್ರಜ್ಞೆ, ಸಾವಯವ ಕೃಷಿ, ಸದೃಢವಾದ ಆರೋಗ್ಯ, ಉತ್ತಮವಾದ ಶಿಕ್ಷಣ, ಒಳ್ಳೆಯ ಆಡಳಿತ ಇವು ಸರಿಯಾದರೆ ನಮ್ಮ ಊರು, ನಾಡು, ದೇಶ ಚೆನ್ನಾಗಿರಲು ಸಾಧ್ಯ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮಿಜಿ ಹೇಳಿದರು
ತಾಲೂಕಿನ ಸಾಣೇಹಳ್ಳಿಯ ಶಿವಕುಮಾರ ಕಲಾಸಂಘ ಹಾಗೂ ಶಿವಕುಮಾರ ರಂಗ ಪ್ರಯೋಗಶಾಲೆಯ ಆಶ್ರಯದಲ್ಲಿ ಲತಾ ಮಂಟಪದಲ್ಲಿ ನಡೆದ ಮಕ್ಕಳ ಹಬ್ಬ, ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.ಖುಷಿ ಎಂಬುದು ನಮ್ಮೊಳಗೇ ಇದೆ. ಅದನ್ನು ನಮ್ಮ ಬದುಕಿನ ವಿಧಾನದ ಮೂಲಕ ಕಂಡುಕೊಳ್ಳಬೇಕು. ನಿಜವಾದ ಖುಷಿ ಸಿಗುವುದು ಕಣ್ತುಂಬ ನಿದ್ದೆ, ಹೊಟ್ಟೆ ತುಂಬ ಊಟ, ಕೈ ತುಂಬ ಕೆಲಸ ಇದ್ದಾಗ ಮಾತ್ರ. ಈ ನೆಲೆಯಲ್ಲಿ ಎಲ್ಲರೂ ಕಾಯಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದರು
ಈ ಶಿಬಿರದಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡೋದಲ್ಲ. ಇದುವರೆಗೂ ಕಲಿತದ್ದನ್ನು ಮರೆಸಿ ಹಕ್ಕಿಗಳಂತೆ ಹಾರಾಡಿ ಖುಷಿ ಪಡುತ್ತಾ ಹೊಸ ಅನುಭವಗಳನ್ನು ಅನುಭವಿಸುತ್ತಾ ಹೋಗುವುದೇ ಶಿಬಿರದ ಮುಖ್ಯ ಉದ್ದೇಶ. ವಿದ್ಯಾರ್ಥಿಗಳು ಹೊಸ ಹೊಸ ವಿಚಾರಗಳ ಬಗ್ಗೆ ಆಲೋಚಿಸಬೇಕು. ಮಕ್ಕಳು ಮೊಬೈಲ್ಗಳಿಂದ ದೂರ ಇರಬೇಕು. ಮೊಬೈಲ್ ಎಷ್ಟು ಉಪಯೋಗವೋ ಅಷ್ಟೇ ದುರುಪಯೋಗವಾಗುವುದು. ಮಕ್ಕಳು ಮೊಬೈಲ್ ಗೀಳಿನಿಂದ ಮತಿವಿಕಲರಾಗಿದ್ದಾರೆ. ತಮ್ಮ ಬದುಕನ್ನು ಕಳೆದುಕೊಂಡಿದ್ದಾರೆ ಎಂದರು.ಇತ್ತೀಚಿಗೆ ಟಿವಿಯ ಹುಚ್ಚು ಹೆಚ್ಚಾಗಿದೆ. ಅನೇಕ ಚಾಲನ್ಗಳಲ್ಲಿ ಬರುವ ವಿಚಾರಗಳು ನಮ್ಮ ಬುದ್ದಿಯನ್ನು ವಿಕಾಸಗೊಳಿಸುವುಕ್ಕಿಂತ ಹೆಚ್ಚಾಗಿ ವಿಕಾರಗೊಳಿಸುತ್ತಿವೆ ಮನೆಯೊಂದು ಮೂರು ಬಾಗಿಲು ಅಂತ ಹೇಳಿ ನಮ್ಮ ಬದುಕನ್ನು ಒಡೆಯುವ ಕೆಲಸ ಮಾಡುತ್ತವೆ. ನಮ್ಮ ಬದುಕು ಕತ್ತರಿಯಂತೆ ಕತ್ತರಿಸುವುದಲ್ಲ. ಸೂಜಿಯಂತೆ ಕೂಡಿಸುವ ಕೆಲಸ ಆಗಬೇಕು. ಯಾರು ಸೂಜಿ ಕೆಲಸ ಮಾಡ್ತಾರೋ ಅವರು ಸಮಾಜದಲ್ಲಿ ತಲೆಯೆತ್ತಿ ಬಾಳಲು ಸಾಧ್ಯ ಎಂದರು.
ಶಿಬಿರದ ನಿರ್ದೇಶಕ ಕೃಷ್ಣಮೂರ್ತಿ ಮೂಡಬಾಗಿಲು ಮಾತನಾಡಿ, ಮಕ್ಕಳು ಈ ಶಿಬಿರದ ಮೂಲಕ ದೈಹಿಕವಾಗಿ, ಮಾನಸಿಕವಾಗಿ ತಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸಿಕೊಳ್ಳಬೇಕು. ಕಲಾತ್ಮಕ ಹಾಗೂ ಸೃಜನಾತ್ಮವಾಗಿ ಕಲಿಕೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಸಂಗೀತ, ಸಾಹಿತ್ಯ, ನೃತ್ಯ, ಪರಿಸರದ ಬಗ್ಗೆ ಒಲವು ಮೂಡಿಸಿಕೊಳ್ಳಬೇಕು ಎಂದರು.ಚರಕದಿಂದ ನೂಲು ತೆಗೆಯುವುದರ ಮೂಲಕ ಶಿಬಿರವನ್ನು ಸಿತಾರಾ ಉದ್ಘಾಟಿಸಿದರು. ಬೆಂಗಳೂರಿನ ಉದ್ಯಮಿ ಧನ್ಯಕುಮಾರ್ ಮಾತನಾಡಿದರು.
ನಿರ್ದೇಶಕರಾದ ಜಗದೀಶ ನೆಗಳೂರು, ರುಚಿತ್ ಕುಮಾರ್, ನಂದಿನಿ, ಚಂದ್ರಮ್ಮ, ಮುಖ್ಯ ಶಿಕ್ಷಕರಾದ ಕೆ.ಆರ್.ಬಸವರಾಜ, ರಂಗಶಾಲೆಯ ಪ್ರಾಂಶುಪಾಲ ಮಧು ಉಭಯ ಶಾಲೆಯ ಅಧ್ಯಾಪಕರು, ಶಿಬಿರಾರ್ಥಿಗಳು ಭಾಗವಹಿಸಿದ್ದರು.ಆರಂಭದಲ್ಲಿ ಸಂಗೀತ ಶಿಕ್ಷಕ ನಾಗರಾಜ, ಶರಣ ಹಾಗೂ ಶಿಬಿರಾರ್ಥಿಗಳು ವಚನಗೀತೆಗಳನ್ನು ಹಾಡಿದರು. ಮುಖ್ಯಶಿಕ್ಷಕ ಬಿ ಎಸ್ ಶಿವಕುಮಾರ್ ಸ್ವಾಗತಿಸಿದರೆ ರಾಜು ನಿರೂಪಿಸಿ ವಂದಿಸಿದರು.