ಕನಕಗಿರಿ ಜನತೆಯ ಋಣ ಎಂದಿಗೂ ತೀರಿಸಲಾಗದು: ಸಚಿವ ತಂಗಡಗಿ

KannadaprabhaNewsNetwork | Published : Jun 11, 2024 1:34 AM

ಸಾರಾಂಶ

ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಬೆಳೆಯಲು ಕಾರಣರಾದ ಕನಕಗಿರಿ ಜನತೆಯ ಋಣ ಎಂದಿಗೂ ತೀರಿಸಲಾಗದು.

ಕನ್ನಡಪ್ರಭ ವಾರ್ತೆ ಕನಕಗಿರಿ

ನನ್ನ ನಾಲ್ಕು ಚುನಾವಣೆಗಳ ಪೈಕಿ ಮೂರರಲ್ಲಿ ಜನ ಆಶೀರ್ವದಿಸಿದ್ದು, ಗೆದ್ದ ಮೂರು ಬಾರಿಯೂ ಮಂತ್ರಿಯಾಗಿದ್ದೇನೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಬೆಳೆಯಲು ಕಾರಣರಾದ ಕನಕಗಿರಿ ಜನತೆಯ ಋಣ ಎಂದಿಗೂ ತೀರಿಸಲಾಗದು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ತಮ್ಮ ೫೩ನೇ ಜನ್ಮದಿನದಂಗವಾಗಿ ಸೋಮವಾರ ಪಟ್ಟಣದಲ್ಲಿ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದರು. ಈ ಹಿಂದೆ ಕೆರೆ ತುಂಬಿಸುವ ಯೋಜನೆ, ಏತ ನೀರಾವರಿ, ಎರಡು ತಾಲೂಕು ಕೇಂದ್ರಗಳು, ಪುರಸಭೆ, ಪಪಂ ಸೇರಿ ಅನೇಕ ಅಭಿವೃದ್ಧಿ ಕೆಲಸ ಮಾಡಿರುವೆ. ಅದರಂತೆ ಈ ಬಾರಿಯೂ ಅಭಿವೃದ್ಧಿಯನ್ನು ಮಾಡುತ್ತೇನೆ ಎಂದರು.

ಕೆಪಿಎಸ್ ಮೈದಾನದಲ್ಲಿ ಅಭಿಮಾನಿಗಳು ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ತಂಗಡಗಿ ಚಾಲನೆ ನೀಡಿದರು. ಕಾಂಗ್ರೆಸ್ ಕಚೇರಿಯಲ್ಲಿ ಕೇಕ್ ಕತ್ತರಿಸಿದ ಸಚಿವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿತು. ಸಚಿವರು ಹೋದಲೆಲ್ಲ ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲಾ ಮಕ್ಕಳು ಹಾಗೂ ಹಿತೈಶಿಗಳು ಹೂಗುಚ್ಛ ನೀಡಿ, ಕೈ ಕುಲುಕಿ ಜನ್ಮ ದಿನದ ಶುಭಾಶಯ ತಿಳಿಸಿದರು.

ಪ್ರಮುಖರಾದ ರಮೇಶ ನಾಯಕ, ನಾಗರಾಜ ಈಡಿಗ, ಅನಿಲ ಬಿಜ್ಜಳ, ವಿರೂಪಾಕ್ಷ ಆಂದ್ರ, ರಾಜಸಾಬ ನಂದಾಪೂರ, ನಾಗಪ್ಪ ಹುಗ್ಗಿ, ಹನುಮೇಶ ಹುಳ್ಕಿಹಾಳ, ವೆಂಕಟೇಶ ಕುಲಕರ್ಣಿ, ಟಿ.ಜೆ. ರಾಮಚಂದ್ರ, ಕಂಠಿರಂಗಪ್ಪ ನಾಯಕ, ಶಾಂತಪ್ಪ ಬಸರಿಗಿಡ, ಗಂಗಾಧರ ಗಂಗಾಮತ, ವೆಂಕೋಬ ಬೋವಿ, ಹನುಮೇಶ ವಾಲೇಕಾರ, ನಾಗೇಶ ಬಡಿಗೇರ, ಕನಕಪ್ಪ ಮ್ಯಾಗಡೆ, ಬಾರೇಶ ಹಿರೇಖೇಡ ಸೇರಿದಂತೆ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಇದ್ದರು.

ಬಾಕ್ಸ್‌ ಸಚಿವರ ಕುಟುಂಬದಿಂದ ಕನಕಾಚಲಪತಿಗೆ ಪೂಜೆ

ಸಚಿವ ತಂಗಡಗಿಯವರ ಹುಟ್ಟು ಹಬ್ಬದ ಹಿನ್ನೆಲೆ ಕ್ಷೇತ್ರದ ಆರಾಧ್ಯ ದೈವ ಕನಕಾಚಲಪತಿ ಸನ್ನಿಧಾನಕ್ಕೆ ಧರ್ಮಪತ್ನಿ ವಿದ್ಯಾ, ಪುತ್ರ ಶಶಾಂಕ, ಪುತ್ರಿ ತನು ಅವರೊಟ್ಟಿಗೆ ಭೇಟಿ ನೀಡಿದ ತಂಗಡಗಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಚಿವರ ಕುಟುಂಬಸ್ಥರಿಗೆ ಪಕ್ಷದ ಮುಖಂಡರು, ಅಭಿಮಾನಿಗಳು ಸಾಥ್ ನೀಡಿದರು.೧೦ಕೆಎನ್‌ಕೆ-೨

ಹುಟ್ಟುಹಬ್ಬದ ನಿಮಿತ್ತ ಕನಕಗಿರಿ ಕೆಪಿಎಸ್ ಮೈದಾನದಲ್ಲಿ ಸಚಿವ ಶಿವರಾಜ ತಂಗಡಗಿ ಸಸಿ ನೆಟ್ಟರು.

Share this article