-- ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಸಮಾರೋಪಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿನಿಯರು ಜೀವನದಲ್ಲಿ ಶಿಸ್ತನ್ನು ಮೈಗೂಡಿಸಿಕೊಂಡು ಗುರಿ ಸಾಧನೆಯತ್ತ ಸಾಗಬೇಕು ಎಂದರು.
ಶಿಕ್ಷಣದ ಜತೆಗೆ ಸಂಸ್ಕಾರವನ್ನು ಕಲಿತು ಸಮಾಜಕ್ಕೆ ಮಾದರಿಯಾಗಿ ಉತ್ತಮ ಸಾಧನೆ ಮಾಡಿ ಶಿಕ್ಷಕರು ಹಾಗೂ ಪೋಷಕರ ಆಶಯ ಈಡೇರಿಸಬೇಕು ಎಂದು ಅವರು ಸಲಹೆ ನೀಡಿದರು.ಮೊಬೈಲ್ ಬಳಕೆಯಿಂದ ಸಾಧ್ಯವಾದಷ್ಟು ದೂರವಿದ್ದು, ಗುರುಗಳ ಮತ್ತು ಹಿರಿಯರ ಮಾರ್ಗದರ್ಶನ ಪಡೆದು ಉತ್ತಮವಾಗಿ ಕಲಿತು ಕೆ.ಆರ್. ನಗರ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ರಾಜ್ಯಕ್ಕೆ ಮಾದರಿಯಾಗುವಂತೆ ಮಾಡಬೇಕು ಎಂದು ಅವರು ತಿಳಿಸಿದರು.
ಗದಗ ಜಿಲ್ಲೆಯ ರೋಣ ತಾಪಂ ಇಒ ಎ.ಎನ್. ರವಿ ಪ್ರಧಾನ ಭಾಷಣ ಮಾಡಿ, ದೇಶ ಮತ್ತು ಕುಟುಂಬವನ್ನು ಸುಭದ್ರವಾಗಿ ಹಿಡಿದಿಟ್ಟುಕೊಂಡು ಸರಿ ದಾರಿಯಲ್ಲಿ ಕೊಂಡೊಯ್ಯುವ ಶಕ್ತಿ ಇರುವುದು ಸ್ತ್ರೀಯರಿಗೆ ಮಾತ್ರ. ವಿದ್ಯಾರ್ಥಿಗಳಿಗೆ ತಾಳ್ಮೆ ಮತ್ತು ಸಹನೆ ಕಡಿಮೆಯಾಗುತ್ತಿದ್ದು, ಇದರ ಜತೆಗೆ ಕುಳಿತು ಕೇಳುವ ಮನೋಭಾವನೆ ಹಾಗೂ ಬರೆಯುವ ಸಾಮರ್ಥ್ಯ ದೂರಾಗುತ್ತಿದೆ ಎಂದು ವಿಷಾದಿಸಿದರು.
ವಿದ್ಯಾರ್ಥಿನಿಯರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನಸೂರೆಗೊಂಡವು. ಕಾಲೇಜು ಪ್ರಾಂಶುಪಾಲ ಎಚ್.ಕೆ. ಕೃಷ್ಣಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಕೆ.ಬಿ. ಸುನೀತಾ ರಮೇಶ್, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಹದೇವ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ರಮೇಶ್, ವಕ್ತಾರ ಸೈಯದ್ ಜಾಬೀರ್, ಉಪನ್ಯಾಸಕರಾದ ಕೆ. ಚಂದ್ರಶೇಖರ್, ಡಿ. ಶ್ರೀನಿವಾಸ್ , ವಿದ್ಯಾರ್ಥಿನಿಯರು ಇದ್ದರು.