ಸಾಗರ: ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಪರಮೇಶ್ವರ ದೂಗೂರು ಅವರ ಮೇಲೆ ದಾಖಲಿಸಿರುವ ಐದು ಸುಳ್ಳು ಪ್ರಕರಣಗಳನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಸೋಮವಾರ ದೌರ್ಜನ್ಯ ವಿರೋಧಿ ವೇದಿಕೆ ವತಿಯಿಂದ ಉಪವಿಭಾಗಾಧಿಕಾರಿ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಮುಖಂಡರು ಮಾತನಾಡಿ, ಕಳೆದೆರಡು ದಶಕಗಳಿಂದ ಪರಮೇಶ್ವರ ದೂಗೂರು ದಲಿತರು, ಹಿಂದುಳಿದವರು ಮತ್ತು ನೊಂದವರಿಗೆ ನ್ಯಾಯ ದೊರಕಿಸಲು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ದೂಗೂರು ಅವರ ಮೇಲೆ ಹಗೆತನ ಸಾಧಿಸಲು ಬೇರೆ ಬೇರೆ ರೀತಿಯ ಪಿತೂರಿ ನಡೆಯುತ್ತಿದೆ. ಕಳೆದೊಂದು ತಿಂಗಳಿನಿಂದ ಐದು ಪ್ರಕರಣ ದಾಖಲಿಸಲಾಗಿದೆ ಎಂದರು.ಪರಮೇಶ್ವರ ದೂಗೂರು ಸೈದ್ಧಾಂತಿಕವಾಗಿ ಅಂಬೇಡ್ಕರ್, ಲೋಹಿಯಾ ಅವರ ವಿಚಾರವನ್ನು ಇರಿಸಿಕೊಂಡಿದ್ದಾರೆ. ದಾಖಲಿಸಿರುವ ಐದು ಪ್ರಕರಣಗಳಲ್ಲಿ ಅವರ ಪಾತ್ರವೇ ಇರಲಿಲ್ಲ. ಘಟನೆ ನಡೆದಾಗ ಅವರು ಸ್ಥಳದಲ್ಲಿಯೇ ಇರಲಿಲ್ಲ. ಉದ್ದೇಶಪೂರ್ವಕವಾಗಿ ಅವರ ಹೆಸರನ್ನು ಸೇರಿಸಲಾಗಿದೆ. ಸಂಬಂಧವೇ ಇರದ ಪ್ರಕರಣದಲ್ಲಿ ಅವರ ಹೆಸರನ್ನು ಸೇರಿಸಿ, ಕಿರುಕುಳ ನೀಡುತ್ತಿದ್ದಾರೆ. ಅವರನ್ನು ಜೈಲಿಗೆ ಕಳಿಸಬೇಕೆಂಬ ಷಡ್ಯಂತ್ರ ನಡೆಯುತ್ತಿದೆ ಎಂದ ಮುಖಂಡರು, ಎಲ್ಲ ಸುಳ್ಳು ಕೇಸುಗಳನ್ನು ಹಿಂಪಡೆಯಬೇಕು, ಇಂತಹ ಕೇಸ್ ಹಾಕದಂತೆ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.
ಮನವಿ ಸಲ್ಲಿಸುವ ವೇಳೆ ಬಿ.ಆರ್. ಜಯಂತ್, ತೀ.ನ.ಶ್ರೀನಿವಾಸ್, ರವಿ ಕುಗ್ವೆ, ಪರಮೇಶ್ವರ ದೂಗೂರು, ಎಂ.ಬಿ. ಮಂಜಪ್ಪ ಹಿರೇನೆಲ್ಲೂರು, ಅ.ರಾ.ಶ್ರೀನಿವಾಸ್, ಮಂಜುನಾಥ ಬಳಸಗೋಡು, ಧರ್ಮಣ್ಣ, ಗೋಪಾಲಕೃಷ್ಣ ಇನ್ನಿತರರು ಹಾಜರಿದ್ದರು.- - - -29ಕೆ.ಎಸ್.ಎ.ಜಿ.1:
ಪರಮೇಶ್ವರ ದೂಗೂರು ಮೇಲೆ ದಾಖಲಾಗಿರುವ ಸುಳ್ಳು ಪ್ರಕರಣ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಸಾಗರದಲ್ಲಿ ಉಪವಿಭಾಗಾಧಿಕಾರಿಗೆ ಮುಖಂಡರು ಮನವಿ ಸಲ್ಲಿಸಿದರು.