ಉತ್ತರಾಯಣ ಪುಣ್ಯ ಕಾಲದ ಪ್ರಥಮ ಉತ್ಸವ; ಮಕರ ಸಂಕ್ರಾಂತಿ ಆಚರಣೆ

KannadaprabhaNewsNetwork |  
Published : Jan 16, 2026, 12:30 AM IST
ಉತ್ತರಾಯಣ ಪುಣ್ಯ ಕಾಲದ ಪ್ರಥಮ ಉತ್ಸವ, ಮಕರ ಸಂಕ್ರಾಂತಿ ಆಚರಣೆ | Kannada Prabha

ಸಾರಾಂಶ

ಶ್ರೀಚೆಲುವನಾರಾಯಣಸ್ವಾಮಿಯ ಸನ್ನಿಧಿಯಲ್ಲಿ ವಿಶ್ವಾವಸು ಸಂವತ್ಸರದ ಉತ್ತರಾಯಣ ಪುಣ್ಯ ಕಾಲದ ಪ್ರಥಮ ಉತ್ಸವ ‘ಮಕರ ಸಂಕ್ರಾಂತಿ ಉತ್ಸವ’, ಯತಿರಾಜದಾಸರ್ ಗುರುಪೀಠದಿಂದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಮತ್ತು ಸಹೋದರರು ಅನೂಚಾನ ಸಂಪ್ರದಾಯ ಹಾಗೂ ಪರಂಪರೆಯಂತೆ ಶ್ರದ್ಧಾಭಕ್ತಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಶ್ರೀಚೆಲುವನಾರಾಯಣಸ್ವಾಮಿಯ ಸನ್ನಿಧಿಯಲ್ಲಿ ವಿಶ್ವಾವಸು ಸಂವತ್ಸರದ ಉತ್ತರಾಯಣ ಪುಣ್ಯ ಕಾಲದ ಪ್ರಥಮ ಉತ್ಸವ ‘ಮಕರ ಸಂಕ್ರಾಂತಿ ಉತ್ಸವ’ ಗುರುವಾರ ಸಡಗರ ಸಂಭ್ರಮದಿಂದ ನೆರವೇರಿತು.

ಯತಿರಾಜದಾಸರ್ ಗುರುಪೀಠದಿಂದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಮತ್ತು ಸಹೋದರರು ಅನೂಚಾನ ಸಂಪ್ರದಾಯ ಹಾಗೂ ಪರಂಪರೆಯಂತೆ ಮಕರ ಸಂಕ್ರಾಂತಿ ಮಹೋತ್ಸವವನ್ನು ಶ್ರದ್ಧಾಭಕ್ತಿಂದ ನೆರವೇರಿಸಿದರು.

ಗೋದೂಳಿ ಸಮಯದಲ್ಲಿ ಚೆಲುವನಾರಾಯಣಸ್ವಾಮಿ ಮತ್ತು ರಾಮಾನುಜಾಚಾರ್ಯರಿಗೆ ವಿಶೇಷ ಪುಷ್ಪಗಳಿಂದ ತಯಾರಿಸಿದ ಮಾಲೆ ಹಾಗೂ ವಿವಿಧ ಬಗೆಯ ಹಣ್ಣುಗಳನ್ನು ನಿವೇದನ ಮಾಡಿ ಮಂಗಳಾರತಿ ನೆರವೇರಿಸಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಮಂಗಳವಾದ್ಯದೊಂದಿಗೆ ಆರಂಭವಾದ ಮಕರ ಸಂಕ್ರಾಂತಿ ಉತ್ಸವ ಚತುರ್ವೀದಿಗಳಲ್ಲಿ ವೈಭವದಿಂದ ನೆರವೇರಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಗೋವಿಂದ, ಗೋವಿಂದ ಘೋಷ ಮೊಳಗಿಸುತ್ತಾ ಚೆಲುವನಾರಾಯಣಸ್ವಾಮಿ ದರ್ಶನಪಡೆದು ಪುನೀತರಾದರು.

ನಂತರ ಕೊಠಾರ ಮಂಟಪದಲ್ಲಿ ಯತಿರಾಜದಾಸರ್ ಗುರುಪೀಠದಿಂದ ವಿಶೇಷಪೂಜೆ ನಡೆದ ನಂತರ ಜೋಯಿಸರು ಈ ವರ್ಷದ ‘ಸಂಕ್ರಾಂತಿ ಫಲ’ ಪಠಣ ನೆರವೇರಿಸಿದರು. ರಾತ್ರಿ ಮೂಲಮೂರ್ತಿ ಶ್ರೀಚೆಲ್ವ ತಿರುನಾರಾಯಣಸ್ವಾಮಿಯನ್ನು ವಿಶೇಷ ಪುಷ್ಪಾಹಾರಗಳಿಂದ ಅಲಂಕರಿಸಿ ಅರೆಯರ್ ಪಾಡಲ್ ನೊಂದಿಗೆ ವಸಂತರಾಗ ಸೇವೆ ನೆರವೇರಿಸಲಾಯಿತು.

ಉತ್ಸವಕ್ಕೂ ಮುನ್ನ ಕ್ಷೇತ್ರದೇವತೆ ಶ್ರೀಬದರೀನಾರಾಯಣಸ್ವಾಮಿ ಸನ್ನಿಧಿಯಲ್ಲಿ ಫಲಪುಷ್ಪದ ತಟ್ಟೆಗಳನ್ನು ಸಾಂಪ್ರದಾಯಿಕವಾಗಿ ಜೋಡಿಸಿ ನಂತರ ಉತ್ಸವದ ವೇಳೆ ಚೆಲುವನಾರಾಯಣನಿಗೆ ಸಮರ್ಪಿಸಲಾಯಿತು.

ದೇವರ ದರ್ಶನಕ್ಕೆ ಬಂದ ಭಕ್ತರಿಗೆ ಸಹ ಚೆಲುವನಾರಾಯಣಸ್ವಾಮಿ ಇಷ್ಠಾರ್ಥ ಕರುಣಿಸಲಿ ಎಂದು ಹಾರೈಸಿ ಸ್ವಾಮಿಗೆ ನಿವೇದನವಾದ ಹಣ್ಣು ಹಾಗೂ ಎಳ್ಳು ಬೆಲ್ಲದ ತಾಂಬೂಲ ನೀಡಲಾಯಿತು. ಯತಿರಾಜದಾಸರ್ ಗುರುಪೀಠದ ಪ್ರೊ. ಸ್ಥಾನೀಕಂ ಶೆಲ್ವಪ್ಪಿಳ್ಳೆ ಅಯ್ಯಂಗಾರ್ ಮುಖ್ಯಶಿಕ್ಷಕ ಸ್ಥಾನೀಕಂ ಸಂತಾನರಾಮನ್, ಗುರುಪೀಠದ ಶಿಷ್ಯವರ್ಗದ ಹೈಕೋರ್ಟ ವಕೀಲ ಜಯರಾಂ, ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಸಂಕ್ರಾಂತಿಯ ನಿಮಿತ್ತ ದನಕರುಗಳಿಗೆ ಅಲಂಕಾರಮಾಡಿದ ರೈತರು ದೇವಾಲಯದ ಸುತ್ತ ಮೆರವಣಿಗೆ ಮಾಡಿ ಸಂಭ್ರಮಿಸಿದರು.ಇಂದು ಅಂಗಮಣಿ ಉತ್ಸವ

ಮೇಲುಕೋಟೆ: ದೇವಾಲಯದ ಪ್ರಮುಖ ಉತ್ಸವಗಳಲ್ಲೊಂದಾದ ಅಂಗಮಣಿ ಉತ್ಸವ ಜ.16 ರಂದು ನಡೆಯಲಿದೆ.

ತವರುಮನೆಯ ಉತ್ಸವವೆಂದೇ ಪ್ರಖ್ಯಾತ ಪಡೆದ ಅಂಗಮಣಿ ಉತ್ಸದ ವೇಳೆ ರಾತ್ರಿ 8 ಗಂಟೆಗೆ ಸಜ್ಜೆಹಟ್ಟಿಮಂಟಪದಲ್ಲಿ ದೇವಿಯರಿಗೆ ಮಡಿಲು ತುಂಬುವ ಕೈಂಕರ್ಯ ನಡೆಯಲಿದೆ. ರಾತ್ರಿ 11 ಗಂಟೆ ನಂತರ ಚೆಲುವನಾರಾಯಣಸ್ವಾಮಿಗೆ ಅಶ್ವವಾಹನೋತ್ಸವ ನಡೆಯಲಿದೆ. ಕರಗಂ ಮತ್ತು ಸಜ್ಜೆಹಟ್ಟಿ ಗುರುಪೀಠದಲ್ಲಿ ದೇವಿಯರಿಗೆ ಅರ್ಪಿಸಲು ಹಣ್ಣು-ತರಕಾರಿ-ಪುಷ್ಪಗಳ ತಟ್ಟೆಗಳನ್ನು ಜೋಡಿಸಿ ಮದ್ಯಾಹ್ನದಿಂದ ಭಕ್ತರದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರ್‌ಸಿಯು ಧೂಳಿಗೆ ಕಮರಿದ ರೈತರ ಬದುಕು
ಮಕ್ಕಳಿಗೆ ವೈಜ್ಞಾನಿಕ ಮನೋಭಾವ ಅಗತ್ಯ