ಪಂಚಪೀಠಗಳ ಸಮಾಗಮ: ಮುಗಿಲುಮುಟ್ಟಿದ ಹರ್ಷೋದ್ಗಾರ

KannadaprabhaNewsNetwork |  
Published : Jul 22, 2025, 12:15 AM IST
21ಕೆಡಿವಿಜಿ10-ದಾವಣಗೆರೆಯಲ್ಲಿ 16 ವರ್ಷಗಳ ನಂತರ ಒಂದಾಗಿ ಪಂಚ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನಕ್ಕೆ ಹಾಜರಾಗುವ ಮುನ್ನ ಪೂಜೆ ಸಲ್ಲಿಸಿದ ಪಂಚ ಪೀಠಾಧೀಶರು. ..................21ಕೆಡಿವಿಜಿ11-ದಾವಣಗೆರೆಯಲ್ಲಿ 16 ವರ್ಷಗಳ ನಂತರ ಒಂದಾಗಿ ಪಂಚ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನಕ್ಕೆ ಹಾಜರಾಗುವ ಮುನ್ನ ಪೂಜೆ ಸಲ್ಲಿಸಿದ ನಂತರ ಪಂಚ ಪೀಠಾಧೀಶರು ಸಭಾಂಗಣದ ವೇದಿಕೆಯನ್ನೇರುವ ಮುನ್ನ ಭಕ್ತರಿಗೆ ದರ್ಶನ ಕಲ್ಪಿಸಿದರು. .....................21ಕೆಡಿವಿಜಿ12-ದಾವಣಗೆರೆಯಲ್ಲಿ ಸೋಮವಾರ ಪಂಚ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದಲ್ಲಿ ಮಾತನಾಡಿದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ. | Kannada Prabha

ಸಾರಾಂಶ

ದಾವಣಗೆರೆಯಲ್ಲಿ ಸೋಮವಾರ ಪಂಚ ಪೀಠಾಚಾರ್ಯರು ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮಾತನಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಬರೋಬ್ಬರಿ 16 ವರ್ಷಗಳ ನಂತರ ಒಂದಾದ ಪಂಚ ಪೀಠಾಧೀಶರು ಇಲ್ಲಿನ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಪೂಜೆ ಸಲ್ಲಿಸಿ, ವೇದಿಕೆಗೆ ಆಗಮಿಸುತ್ತಿದ್ದಂತೆ ಸಹಸ್ರಾರು ಸಂಖ್ಯೆಯಲ್ಲಿ ಸಭಾಂಗಣದ ಒಳಗೆ, ಹೊರಗೆ ಸೇರಿದ್ದ ಭಕ್ತರು ಜೈಕಾರ ಹಾಕುತ್ತಾ, ಚಪ್ಪಾಳೆ ತಟ್ಟುವ ಮೂಲಕ ಹರ್ಷ ವ್ಯಕ್ತಪಡಿಸಿದರು.

ರಂಭಾಪುರಿ, ಉಜ್ಜಯಿನಿ, ಶ್ರೀಶೈಲ, ಕೇದಾರ ಹಾಗೂ ಕಾಶಿ ಪೀಠದ ಜಗದ್ಗುರುಗಳು ಒಂದೂವರೆ ದಶಕದ ನಂತರ ಒಂದೇ ವೇದಿಕೆಯಲ್ಲಿ ದರ್ಶನ ನೀಡಲಿರುವ ಐತಿಹಾಸಿಕ ಕ್ಷಣಗಳಿಗಾಗಿ ದಾವಣಗೆರೆ ಸೇರಿದಂತೆ ರಾಜ್ಯ, ಪರ ರಾಜ್ಯಗಳಿಂದ ಬಂದಿದ್ದ ಶಿವಾಚಾರ್ಯರು, ಸಹಸ್ರಾರು ಭಕ್ತರು ಕುತೂಹಲದಿಂದ ಕಾಯುತ್ತಿದ್ದರು. ಈ ಅಮೃತ ಕ್ಷಣಗಳಿಗೆ ರೇಣುಕಾ ಮಂದಿರ, ದಾವಣಗೆರೆ ಮಹಾನಗರ ಸಾಕ್ಷಿಯಾಯಿತು.

ವೇದಿಕೆಗೆ ಪಂಚ ಪೀಠಾಧೀಶರು ಬರುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ ಸೇರಿದಂತೆ ಅನೇಕರು ಆಶೀರ್ವಾದ ಪಡೆದು, ತಮಗೆ ಮೀಸಲಿದ್ದ ಆಸನಗಳಲ್ಲಿ ಆಸೀನರಾದರು.

ಶೃಂಗ ಸಮ್ಮೇಳನದ ಹೆಸರಿನಲ್ಲಿ ಪಂಚ ಪೀಠಾಧೀಶರು ಒಂದೇ ವೇದಿಕೆ ಅಲಂಕರಿಸುವ ಮೂಲಕ ಸಹಸ್ರಾರು ಶಿವಾಚಾರ್ಯ ಸ್ವಾಮೀಜಿಗಳಲ್ಲಿದ್ದ ಗೊಂದಲಗಳಿಗೂ ತೆರೆ ಎಳೆದರು. ಇತ್ತ ವೀರಶೈವ ಲಿಂಗಾಯತ ಸಮಾಜ ಬಾಂಧವರಲ್ಲಿದ್ದ ಅಳುಕು, ಆತಂಕವನ್ನೂ ಪಂಚ ಪೀಠಾಧೀಶರು ನಿವಾರಣೆ ಮಾಡಿ, ಸಮುದಾಯದ ಶಕ್ತಿ ಪ್ರದರ್ಶನಕ್ಕೆ ಪಂಚಪೀಠಾಧೀಶರು ತಮ್ಮ ಶಕ್ತಿಯನ್ನು ಧಾರೆ ಎರೆದರು.

ಪಂಚ ಪೀಠಾಧೀಶರನ್ನು ಒಂದೇ ವೇದಿಕೆಯಲ್ಲಿ ನೋಡಬೇಕು, ಭಕ್ತರು ಒಂದೇ ಇದ್ದಾರೆ. ನೀವು ಪಂಚ ಪೀಠಾಧೀಶರು ಒಂದಾಗಿ ಎಂಬುದಾಗಿ ಮೊದಲಿನಿಂದಲೂ ಡಾ.ಶಾಮನೂರು ಶಿವಶಂಕರಪ್ಪ ಹೇಳಿಕೊಂಡೆ ಬಂದಿದ್ದರು. ತಮ್ಮ ಒತ್ತಾಸೆಯಂತೆ ಪಂಚ ಪೀಠಾಧೀಶರನ್ನು ಒಂದೇ ವೇದಿಕೆಯಲ್ಲಿ ಕಂಡ ಶಾಮನೂರು ಸಹ ಒಂದು ಕ್ಷಣ ಆತ್ಮವಿಶ್ವಾಸದ ನಗೆ ಮೂಡಿಸಿದರು. ತಮ್ಮ 94ನೇ ವಯಸ್ಸಿನಲ್ಲೂ ಸಮಾಜದ ಬಗ್ಗೆ ಇರುವ ಬದ್ದತೆಯಿಂದ ವ್ಹೀಲ್ ಚೇರ್‌ನಲ್ಲೇ ವೇದಿಕೆಯನ್ನೇರಿ, ಪಂಚ ಪೀಠಾಧೀಶರ ಆಶೀರ್ವಾದ ಪಡೆದು, ಸಮ್ಮೇಳನಕ್ಕೂ ಶಾಮನೂರು ಚಾಲನೆ ನೀಡಿದರು.

ಮಹಾಸಭಾ ಪರವಾಗಿ ಅಭಿನಂದನೆ- ಶಂಕರ ಬಿದರಿ:

ಸಮ್ಮೇಳನದಲ್ಲಿ ಮಾತನಾಡಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ, ಇಂದು ಕೋಟ್ಯಾಂತರ ಭಕ್ತರ ಅಪೇಕ್ಷೆ ಈಡೇರಿದ ದಿನವಾಗಿದೆ. ಸದ್ಭಕ್ತರ ಆಶಯದಂತೆ ಪಂಚ ಪೀಠಾಧೀಶರು 16 ವರ್ಷದ ನಂತರ ಒಂದೇ ವೇದಿಕೆಯಲ್ಲಿ ದರ್ಶನ ನೀಡುತ್ತಿದ್ದಾರೆ. ಇದು ನಮ್ಮ ಧರ್ಮದ ಇತಿಹಾಸದಲ್ಲಿಯೇ ಸುದಿನವಾಗಿದೆ. ನಮ್ಮ ಅಪೇಕ್ಷೆ ಮೇರೆಗೆ ಪರಿಶ್ರಮಪಟ್ಟ ರಂಭಾಪುರಿ ಶ್ರೀಗಳು, ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನರಿಗೆ ಮಹಾಸಭಾ ಪರವಾಗಿ ಅಭಿನಂದಿಸುತ್ತೇವೆ ಎಂದರು.

ನಮ್ಮ ಸಮಾಜವು ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಮ್ಮೇಳನ ಮುನ್ನುಡಿ ಬರೆದಿದೆ. ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ರೂಪಿಸಲು ಸಮ್ಮೇಳನ ಮಹತ್ತರ ಹೆಜ್ಜೆಯಾಗಬೇಕು. ನಮ್ಮಲ್ಲಿ ಮೂರು ವರ್ಗಗಳಿವೆ. ಗುರು ವರ್ಗ, ಬಸವಾದಿ ಶರಣರ ವಿರಕ್ತ ವರ್ಗ, ಶರಣ ಬಸವೇಶ್ವರರ ಶರಣ ವರ್ಗ. ಮೂರು ವರ್ಗಗಳನ್ನು ಸೇರಿಸುವುದೇ ಮಹಾಸಭಾದ ಮಹಾಸಂಕಲ್ಪವಾಗಿದೆ. ಈ ದಿಶೆಯಲ್ಲಿ ಪಂಚ ಪೀಠಾಧೀಶರನ್ನು ಒಂದೇ ವೇದಿಕೆಗೆ ತರುವ ಮೊದಲ ಪ್ರಯತ್ನದಲ್ಲಿ ಮಹಾಸಭಾ ಯಶಸ್ವಿಯಾಗಿದೆ ಎಂದು ತಿಳಿಸಿದರು.

ಗುರು, ವಿರಕ್ತ, ಶರಣ ವರ್ಗದ ಎಲ್ಲಾ ಸ್ವಾಮೀಜಿಗಳನ್ನು ಒಂದು ಸುಕ್ಷೇತ್ರದಲ್ಲಿ ಪ್ರತಿ ವರ್ಷಕ್ಕೊಮ್ಮೆ ಸಮಾಗಮ ಮಾಡಬೇಕೆಂಬ ಸಂಕಲ್ಪ ನಮ್ಮದು. ಈ ವರ್ಷದಿಂದಲೇ ಇದು ಜಾರಿಯಾಬೇಕು. 50 ವರ್ಷದಲ್ಲಿ ನಮ್ಮ ಸಮಾಜಕ್ಕೆ ಆದ ಅನ್ಯಾಯವನ್ನು ತುಂಬಲು ಸಾಧ್ಯವಿಲ್ಲ. ಆದರೆ, ಮುಂದೆ ಅನ್ಯಾಯ ಆಗದಂತೆ ನಾವು ಜಾಗ್ರತೆಯನ್ನೂ ವಹಿಸಬೇಕು. ವೀರಶೈವ ಲಿಂಗಾಯತ ಸಮುದಾಯದ ಹಿಂದುಳಿದ ವರ್ಗಕ್ಕೆ ಸೇರಬೇಕು. ವೀರಶೈವ ಲಿಂಗಾಯತವು ಹಿಂದೂ ಸಮಾಜದ ಒಂದು ಅಂಗವಷ್ಟೇ ಎಂದು ಅವರು ತಿಳಿಸಿದರು.

ಯಾವ್ಯಾವ ಪಂಗಡಗಳಿಗೆ ಮೀಸಲಾತಿ ದೊರೆಯಬೇಕೋ ಅಂತಹ ಮೀಸಲಾತಿ ದೊರೆಯಬೇಕು. ನಮ್ಮ ಮುಖಂಡರು ಕೇಂದ್ರ, ರಾಜ್ಯ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡಬೇಕು. ನಮ್ಮಲ್ಲಿ ಸಾಮಾಜಿಕ ಪ್ರಜ್ಞೆ ಕಡಿಮೆಯಾಗುತ್ತಿದೆ. ಪ್ರತಿಯೊಂದು ಕ್ರೈಸ್ತ ಕುಟುಂಬ ತಮ್ಮ ವರ್ಷದ ಗಳಿಕೆಯಲ್ಲಿ ಶೇ.10ರಷ್ಟನ್ನು ಧರ್ಮ ಕಾರ್ಯಕ್ಕೆ ನೀಡುತ್ತದೆ. ಜೈನರು ಸಹ ಶೇ.10, ಮುಸ್ಲಿಮರು ಶೇ.2ರಷ್ಟು ತಮ್ಮ ಸಮಾಜಕ್ಕೆ ನೀಡುತ್ತಾರೆ. ಅದೇ ರೀತಿ ವೀರಶೈವ ಲಿಂಗಾಯತ ಸಮಾಜವೂ ಪ್ರತಿ ವರ್ಷ ತಮ್ಮ ವರ್ಷದ ಆದಾಯದ ಶೇ.2ರಷ್ಟನ್ನು ಸಮಾಜದ ಕಾರ್ಯ, ಧಾರ್ಮಿಕ ಚಟುವಟಿಕೆಗೆ ನೀಡಬೇಕು ಎಂದು ಮನವಿ ಮಾಡಿದರು.

ಕೆಲವು ಧರ್ಮಗಳ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ರಿಯಾಯಿತಿ ನೀಡುತ್ತದೆ. ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಕೇಂದ್ರ ಸರ್ಕಾರವು ಏಕರೂಪದ ರಿಯಾಯಿತಿ ವ್ಯವಸ್ಥೆ ಜಾರಿಗೊಳಿಸಬೇಕು. ನಮ್ಮ ಸಂಸದರು ಸಹ ಕೇಂದ್ರದ ಗಮನ ಸೆಳೆದು, ಲೋಕಸಭೆಯಲ್ಲಿ ಈ ಬಗ್ಗೆ ಧ್ಪನಿ ಎತ್ತಬೇಕು.

-ಶಂಕರ ಬಿದರಿ, ಮುಖಂಡ ವೀರಶೈವ ಲಿಂಗಾಯತ ಸಮಾನಾರ್ಥಕ ಪದ, ಎರಡೂ ಒಂದೇ. ಇದನ್ನ ಅಖಿಲ ಭಾರತ ವೀರಶೈವ ಮಹಾಸಭಾ 2017ರಲ್ಲೇ ಒಕ್ಕೊರಲಿನಿಂದ ಒಪ್ಪಿದೆ. ಇನ್ನು ಮುಂದೆ ವೀರಶೈವ ಅಂದರೂ ಒಂದೇ, ಲಿಂಗಾಯತ ಅಂದರೂ ಒಂದೇ. ಇದು ಯಾವ ಕಾಲದಲ್ಲೂ ಪುನರ್‌ವಿಮರ್ಶೆಗೆ ಒಳಪಡುವುದಿಲ್ಲ.

- ಶಂಕರ ಬಿದರಿ, ರಾಜ್ಯಾಧ್ಯಕ್ಷ, ಅಭಾವೀಲಿಂಮ.

- - -

-21ಕೆಡಿವಿಜಿ10.ಜೆಪಿಜಿ: ದಾವಣಗೆರೆಯಲ್ಲಿ 16 ವರ್ಷಗಳ ನಂತರ ಒಂದಾಗಿ ಪಂಚ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನಕ್ಕೆ ಹಾಜರಾಗುವ ಮುನ್ನ ಪೂಜೆ ಸಲ್ಲಿಸಿದ ಪಂಚ ಪೀಠಾಧೀಶರು.

- - -

-21ಕೆಡಿವಿಜಿ11: ದಾವಣಗೆರೆಯಲ್ಲಿ 16 ವರ್ಷಗಳ ನಂತರ ಒಂದಾಗಿ ಪಂಚ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನಕ್ಕೆ ಹಾಜರಾಗುವ ಮುನ್ನ ಪೂಜೆ ಸಲ್ಲಿಸಿದ ನಂತರ ಪಂಚ ಪೀಠಾಧೀಶರು ಸಭಾಂಗಣದ ವೇದಿಕೆಯನ್ನೇರುವ ಮುನ್ನ ಭಕ್ತರಿಗೆ ದರ್ಶನ ಕಲ್ಪಿಸಿದರು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ