ಸವಣೂರು: ಸರ್ವ ಶಬ್ದಗಳಿಂದಲೂ ವಾಚ್ಯನಾದ ಭಗವಂತನ ಮಹಿಮೆಗಳು ಅನಂತವಾಗಿವೆ. ಪ್ರತಿಯೊಂದು ಶಬ್ದಗಳೂ ಆತನ ಮಹಿಮೆಯನ್ನು ತಿಳಿಸುತ್ತವೆ ಎಂದು ಕೂಡಲಿ ಆರ್ಯ ಅಕ್ಷೋಭ್ಯತೀರ್ಥ ಮಠದ ಶ್ರೀ ಗಳಾದ ರಘುವಿಜಯ ತೀರ್ಥರು ತಿಳಿಸಿದರು.ಸವಣೂರಿನ ಸತ್ಯಬೋಧ ಸ್ವಾಮಿಗಳ ಮೂಲ ವೃಂದಾವನ ಸನ್ನಿಧಾನದಲ್ಲಿ ಶನಿವಾರ ಜರುಗಿದ ವಿದ್ವತ್ ಸಭೆಯ ಸಾನಿಧ್ಯವಹಿಸಿ ಅನುಗ್ರಹ ಸಂದೇಶ ನೀಡಿದರು.ಸಮವಾಯ ನಿರಾಕರಣೆ, ಬಿಂಬ ಪ್ರತಿಬಿಂಬ ಭಾವ ಹಾಗೂ ತತ್ವ ಪ್ರಕಾಶಿಕಾ ವಿಷಯದ ಬಗ್ಗೆ ವಿದ್ವತ್ ಸಭೆ ಜರುಗಿತು. ನಿರಂತರವಾಗಿ ಜ್ಞಾನ ಕಾರ್ಯ ಕೈಗೊಳ್ಳುವ ಮೂಲಕ ಶಾಸ್ತ್ರ ಪರಂಪರೆಯನ್ನು ಮುಂದುವರೆಸುವಂತೆ ಶ್ರೀಗಳು ಸೂಚಿಸಿದರು.ಪರ್ಯಾಯಸ್ಥರಾದ ಅನಂತಾಚಾರ್ಯ ರಾಯಚೂರ ನೇತೃತ್ವ ವಹಿಸಿದ್ದರು. ಸಭೆಯಲ್ಲಿ ವಿದ್ವಾಂಸರಾದ ಪ್ರಮೋದಾಚಾರ್ಯ ಕಟ್ಟಿ, ಸುರೇಶಾಚಾರ್ಯ ರಾಯಚೂರ, ವಾದಿರಾಜಾಚಾರ್ಯ ತಡಕೋಡ, ಪುಷ್ಕರಾಚಾರ್ಯ ಶಿರಹಟ್ಟಿ, ಭಾರತಿರಮಣಾಚಾರ್, ರಾಮಾಚಾರ್ಯ ರಾಯಚೂರ, ರಂಗಣ್ಣ ಕಟ್ಟಿ ಮುಂತಾದವರು ಪಾಲ್ಗೊಂಡಿದ್ದರು.